ಹೊಸದಿಗಂತ ಡಿಜಿಟಲ್ ಡೆಸ್ಕ್:
ಕಾಶ್ಮೀರದ ಪಹಲ್ಗಾಮ್ ಭಯೋತ್ಪಾದಕ ದಾಳಿ ಕುರಿತು ಜಮ್ಮುಕಾಶ್ಮೀರದ ಮಾಜಿ ಮುಖ್ಯಮಂತ್ರಿ ಫಾರುಕ್ ಅಬ್ದುಲ್ಲಾ ಅವರು ಪಾಕಿಸ್ತಾನದ ಸೇನಾ ಮುಖ್ಯಸ್ಥ ಅಸೀಮ್ ಮುನೀರ್ಗೆ ಕಠಿಣ ಸಂದೇಶ ನೀಡಿದ್ದಾರೆ.
ದೇಶದ ಹಳೆಯ ‘ಎರಡು ರಾಷ್ಟ್ರ’ ಸಿದ್ಧಾಂತವನ್ನು ಕಾಶ್ಮೀರವು 1947ರಲ್ಲೇ ತಿರಸ್ಕರಿಸಿತು. ಪಾಕಿಸ್ತಾನದೊಂದಿಗಿನ ಮಾತುಕತೆಗೆ ತಾವು ಪ್ರತಿ ಬಾರಿ ಬೆಂಬಲ ನೀಡುತ್ತಿದ್ದೆವು, ಆದರೆ ಈಗ ಕೇಂದ್ರ ಸರ್ಕಾರವು ಇಂತಹ ದಾಳಿಗಳು ಮತ್ತೆಂದೂ ಸಂಭವಿಸದಂತೆ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸುತ್ತಿರುವುದಾಗಿ ಅವರು ಹೇಳಿದ್ದಾರೆ.
ನಾನು ಪ್ರತಿ ಬಾರಿಯೂ ಪಾಕಿಸ್ತಾನದೊಂದಿಗೆ ಭಾರತದ ಮಾತುಕತೆಗೆ ಒಲವು ತೋರುತ್ತಿದ್ದೆ, ಆದರೆ ತಮ್ಮ ಪ್ರೀತಿಪಾತ್ರರನ್ನು ಕಳೆದುಕೊಂಡವರಿಗೆ ನಾವು ಹೇಗೆ ಉತ್ತರಿಸುವುದು? ನಾವು ನ್ಯಾಯ ನೀಡುತ್ತಿದ್ದೇವೆಯೇ? ಇದು ಬಾಲಕೋಟ್ ಅಲ್ಲ. ಇಂದು ಈ ರೀತಿಯ ದಾಳಿಗಳು ಮುಂದೆಂದೂ ಸಂಭವಿಸದಂತಹ ಕ್ರಮ ತೆಗೆದುಕೊಳ್ಳಬೇಕೆಂದು ರಾಷ್ಟ್ರ ಬಯಸುತ್ತದೆ ಎಂದು ಅವರು ಹೇಳಿದ್ದಾರೆ.
ಇಂನು ಎರಡು ರಾಷ್ಟ್ರ ಸಿದ್ಧಾಂತದ ಬಗ್ಗೆ ಮಾತನಾಡಿದ ಅವರು, ಜಮ್ಮು ಮತ್ತು ಕಾಶ್ಮೀರದ ಜನರು 1947 ರಲ್ಲಿಯೇ ಈ ಸಿದ್ಧಾಂತವನ್ನು ತಿರಸ್ಕರಿಸಿದರು ಮತ್ತು ಇಂದಿಗೂ ಅದನ್ನು ಅವರು ಸ್ವೀಕರಿಸಲು ಸಿದ್ಧರಿಲ್ಲ ಎಂದು ಹೇಳಿದರು.
1947 ರಲ್ಲಿಯೇ ನಾವು ಅವರೊಂದಿಗೆ ಹೋಗಲಿಲ್ಲ, ಹೀಗಿರುವಾಗ ಇಂದು ನಾವು ಏಕೆ ಹೋಗುತ್ತೇವೆ? ಆ ಸಮಯದಲ್ಲಿಯೇ ನಾವು ಎರಡು ರಾಷ್ಟ್ರಗಳ ಸಿದ್ಧಾಂತವನ್ನು ನೀರಿಗೆ ಎಸೆದಿದ್ದೇವೆ. ಇಂದು, ನಾವು ಎರಡು ರಾಷ್ಟ್ರಗಳ ಸಿದ್ಧಾಂತವನ್ನು ಸ್ವೀಕರಿಸಲು ಸಿದ್ಧರಿಲ್ಲ. ಹಿಂದು, ಮುಸ್ಲಿಂ, ಸಿಖ್, ಕ್ರಿಶ್ಚಿಯನ್, ನಾವೆಲ್ಲರೂ ಒಂದೇ. ನಾವು ಅವರಿಗೆ ಸೂಕ್ತ ಉತ್ತರವನ್ನು ನೀಡುತ್ತೇವೆ ಎಂದು ಅಬ್ದುಲ್ಲಾ ಹೇಳಿದ್ದಾರೆ.