ಹೊಸದಿಗಂತ ವರದಿ, ಮಂಗಳೂರು:
ನಾವು ಹಿಂದು ಧರ್ಮದ ಮೇಲೆ ನಂಬಿಕೆ ಇಟ್ಟವರು. ಎಲ್ಲಾ ಧರ್ಮಗಳಿಗೂ ಸಮಾನ ಗೌರವ ನೀಡುತ್ತೇವೆ. ಶಾಲೆಗಳಲ್ಲಿ ನೈತಿಕ ಶಿಕ್ಷಣ ಕಲಿಸಲು ನಮ್ಮದು ಯಾವುದೇ ತಕರಾರು ಇಲ್ಲ.ಆದರೆ ಸಂವಿಧಾನ ವಿರೋಧಿಯಾಗಿ ನಡೆದುಕೊಳ್ಳಬಾರದು. ಭಗವದ್ಗೀತೆ, ಕುರಾನ್, ಬೈಬಲ ಯಾವುದನ್ನು ಹೇಳಿಕೊಟ್ಟರೂ ನಮ್ಮ ವಿರೋಧ ಇಲ್ಲ ಎಂದು ಮಾಜಿ ಮುಖ್ಯಮಂತ್ರಿ, ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿದ್ದಾರೆ.
ಶನಿವಾರ ಮಂಗಳೂರಿನಲ್ಲಿ ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ನಾನು ಕೂಡ ಓರ್ವ ಹಿಂದು. ನನಗೂ ನಮ್ಮ ಮನೆಯಲ್ಲಿ ಭಗವದ್ಗೀತೆ, ರಾಮಾಯಣ, ಮಹಾಭಾರತ ಹೇಳಿಕೊಟ್ಟಿದ್ದಾರೆ. ಶಾಲೆಗಳಲ್ಲಿ ಗುಣಮಟ್ಟದ ಶಿಕ್ಷಣಕ್ಕೆ ಆದ್ಯತೆ ನೀಡಬೇಕು ಎಂದರು.
ಹಿಜಾಬ್ ವಿರೋಧಿಸಿ ಮುಸ್ಲಿಂ ಸಂಘಟನೆಗಳ ಬಂದ್ ವಿಚಾರಕ್ಕೆ ಸಂಬಂಧಿಸಿ ಪ್ರತಿಕ್ರಿಯಿಸಿದ ಅವರು, ಅಸಮಾಧಾನ ಇರುವವರು ಬಂದ್ ಮಾಡಿದ್ದಾರೆ. ಆದರೆ ಕೋರ್ಟ್ ನಿರ್ಧಾರವನ್ನು ಯಾರೂ ವಿರೋಧಿಸಬಾರದು. ಯಾವ ಧರ್ಮದವರ ಕೋಮುವಾದ ಮಾಡಬಾರದು ಎಂದರು.
`ಕಾಶ್ಮೀರ್ ಫೈಲ್ಸ್’ ಚಿತ್ರ ಕನ್ನಡಕ್ಕೆ ಡಬ್ ಮಾಡಿ ತೋರಿಸುವುದಕ್ಕೆ ವಿರೋಧ ಇಲ್ಲ; ಸತ್ಯ ತೋರಿಸಲಿ. ಕಾಶ್ಮೀರದ ಉಗ್ರರ ಕೃತ್ಯ, ಪಂಡಿತರ ಜೊತೆಗೆ ಬೇರೆ ಯಾರಿಗೆ ಸಮಸ್ಯೆ ಆಗಿತ್ತು ಹೇಳಬೇಕು. ಗುಜರಾತ್, ಲಖಿನ್ ಪುರ್ ಘಟನೆಗಳನ್ನು ಕೂಡ ತೋರಿಸಬೇಕು ಎಂದು ಅವರು ಹೇಳಿದರು.