ಹೊಸದಿಗಂತ ಡಿಜಿಟಲ್ ಡೆಸ್ಕ್:
2047ರ ವೇಳೆಗೆ ಭಾರತವನ್ನು ಅಭಿವೃದ್ಧಿ ಹೊಂದಿದ ರಾಷ್ಟ್ರವನ್ನಾಗಿ ಪರಿವರ್ತಿಸುವ ಗುರಿ ಸಾಧಿಸಬೇಕು. ಈ ವೇಳೆ ಹಲವು ಸವಾಲುಗಳಿದ್ದು, ಮುಂದಿನ 10 ರಿಂದ 20 ವರ್ಷ ಕಠಿಣವಾಗಿರಲಿವೆ ಎಂದು ಕೇಂದ್ರ ಸರ್ಕಾರದ ಆರ್ಥಿಕ ಸಲಹೆಗಾರ ವಿ.ಅನಂತ ನಾಗೇಶ್ವರನ್ ಹೇಳಿದ್ದಾರೆ.
ಕೊಲಂಬಿಯಾ ವಿಶ್ವವಿದ್ಯಾಲಯದಲ್ಲಿ ನಡೆದ ’ಕೊಲಂಬಿಯಾ ಇಂಡಿಯಾ ಶೃಂಗಸಭೆ 2025‘ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಈಗಾಗಲೇ ಅಭಿವೃದ್ಧಿ ಹೊಂದಿರುವ ಹಲವು ರಾಷ್ಟ್ರಗಳು ತಮ್ಮ ಹಾದಿಯಲ್ಲಿ ನಿಭಾಯಿಸದಂತ ಕೃತಕ ಬುದ್ಧಿಮತ್ತೆ, ತಂತ್ರಜ್ಞಾನ, ರೊಬೋಟಿಕ್ಸ್ ರೀತಿಯ ಹಲವು ಸವಾಲುಗಳನ್ನು ಭಾರತ ಎದುರಿಸಬೇಕಿದೆ. ಜೊತೆಗೆ ಪ್ರತೀ ವರ್ಷವೂ 80 ಲಕ್ಷ ಉದ್ಯೋಗಗಳನ್ನು ಭಾರತ ಸೃಷ್ಟಿಸಬೇಕಿದೆ. ಜತೆಗೆ ದೇಶದ ಜಿಡಿಪಿಯಲ್ಲಿ ಉತ್ಪಾದನಾ ವಲಯದ ಪಾಲು ಹೆಚ್ಚಳವಾಗಬೇಕಿದೆ ಎಂದರು.
ಭಾರತೀಯ ಉದ್ಯಮಗಳನ್ನು ಜಾಗತಿಕ ಸರಪಳಿಗೆ ಬೆಸೆಯುವುದು, ಜಾಗತಿಕ ಹೂಡಿಕೆಯ ಹೊರತಾಗಿ ಅಸ್ತಿತ್ವದಲ್ಲಿರುವ ಹೂಡಿಕೆಗಳ ಸಮರ್ಥ ಬಳಕೆ, ದೇಶಿಯ ನಾವೀನ್ಯತೆ, ವ್ಯಾಪಾರ ಕ್ಷೇತ್ರದಲ್ಲಿನ ವಿಚಾರಗಳನ್ನೂ ನಿಭಾಯಿಸಬೇಕಿದೆ ಎಂದು ಹೇಳಿದ್ದಾರೆ.