ಹೊಸದಿಗಂತ ಡಿಜಿಟಲ್ ಡೆಸ್ಕ್:
ಕಂಪನಿಗಳು ಪೂರೈಸುವ ಔಷಧಗಳ ಗುಣಮಟ್ಟವನ್ನು ಎರಡು ಬಾರಿ ಪ್ರಯೋಗಾಲಯದಿಂದ ಪರೀಕ್ಷಿಸಿದ ನಂತರವೇ ಜಿಲ್ಲೆ, ತಾಲ್ಲೂಕು, ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ ಪೂರೈಸಲು ತೀರ್ಮಾನಿಸಲಾಗಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ದಿನೇಶ್ ಗುಂಡೂರಾವ್ ತಿಳಿಸಿದ್ದಾರೆ.
ಅಧಿವೇಶನದಲ್ಲಿ ಬಿಜೆಪಿಯ ಡಾ. ತಳವಾರ್ ಸಾಬಣ್ಣನವರು ಜಿಲ್ಲಾ ಹಾಗೂ ತಾಲ್ಲೂಕು ಆಸ್ಪತ್ರೆಗಳಲ್ಲಿ ಅಗತ್ಯ ಹಾಗೂ ಜೀವ ರಕ್ಷಕ ಔಷಧಗಳ ಕೊರತೆಯಿಂದ ದುಬಾರಿ ದರದಲ್ಲಿ ಜನರು ಖರೀದಿಸುವ ಸ್ಥಿತಿ ಇದೆ ಎಂದರು.
ಇದಕ್ಕೆ ಉತ್ತರಿಸಿದ ಸಚಿವ ಗುಂಡೂರಾವ್, ಸರ್ಕಾರಿ ಆಸ್ಪತ್ರೆಗಳಲ್ಲಿ ಲಭ್ಯವಿರುವ ಅಗತ್ಯ ಹಾಗೂ ಇತರ ಔಷಧಗಳ ಸಂಖ್ಯೆಯನ್ನು 732ರಿಂದ 1084ಕ್ಕೆ ಹೆಚ್ಚಿಸಲಾಗಿದೆ. ತುರ್ತು ಸಂದರ್ಭದಲ್ಲಿ ಔಷಧಗಳನ್ನು ತಮ್ಮ ಮಟ್ಟದಲ್ಲಿ ಸೂಕ್ತ ಪ್ರಾಧಿಕಾರದ ಅನುಮೋದನೆಯೊಂದಿಗೆ ಖರೀದಿಸಿ ಸಾರ್ವಜನಿಕರಿಗೆ ವಿತರಿಸಲು ಸಹ ಸೂಚಿಸಲಾಗಿದೆ ಎಂದರು.
ಕೆಲವು ಜೀವ ರಕ್ಷಕ ಔಷಧಗಳನ್ನು ಅತ್ಯಂತ ಕಡಿಮೆ ಸಂಖ್ಯೆಯಲ್ಲಿ ಪೂರೈಸಬೇಕಾಗಿರುವುದರಿಂದ ಟೆಂಡರ್ ಪ್ರಕ್ರಿಯೆಯಲ್ಲಿ ಹೆಚ್ಚು ಬಿಡ್ದ್ ದಾರರು ಭಾಗಿಯಾಗುವುದಿಲ್ಲ. ಕೆಲವು ಔಷಧಗಳಿಗೆ ಹಲವು ಬಾರಿ ಟೆಂಡರ್ ಆಹ್ವಾನಿಸಿದ್ದರೂ ಪ್ರತಿಕ್ರಿಯಿಸುವುದಿಲ್ಲ ಎಂದು ಹೇಳಿದರು.