ಹೊಸದಿಗಂತ ವರದಿ ಮೈಸೂರು:
ಕಾವೇರಿ ನೀರು ನಿಯಂತ್ರಣ ಮಂಡಳಿ ಏನೇ ಆದೇಶ ಮಾಡಿದರೂ ನಮ್ಮ ರೈತರ ಹಿತ ಕಾಯುತ್ತೇವೆ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹೇಳಿದರು.
ತಮಿಳುನಾಡಿಗೆ 15 ದಿನ 3000 ಕ್ಯೂಸೆಕ್ ನೀರು ಹರಿಸಲು ಕಾವೇರಿ ನೀರು ನಿಯಂತ್ರಣ ಮಂಡಳಿ ಇಂದು ಆದೇಶ ಹೊರಡಿಸಿರುವುದಕ್ಕೆ ಬುಧವಾರ ಸಂಜೆ ಮೈಸೂರಿನಲ್ಲಿ ಪ್ರತಿಕ್ರಿಯಿಸಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದ ಕಾವೇರಿ ಕಣಿವೆಯ ಜಲಾಶಯಗಳಲ್ಲಿ ಎಷ್ಟು ಟಿಎಂಸಿ ನೀರಿದೆ ಎಂದು ಕಾವೇರಿ ನೀರು ನಿರ್ವಹಣಾ ಮಂಡಳಿಯರು ಮಾಹಿತಿ ಪಡೆದಿದ್ದಾರೆ. ತಮಿಳುನಾಡಿನ ಡ್ಯಾಮ್ನಲ್ಲಿ ಎಷ್ಟು ನೀರಿದೆ ಎಂದು ಮಾಹಿತಿ ಪಡೆದಿದ್ದಾರೆ. ಕರ್ನಾಟಕ ಜಲಾಶಯಗಳಿಗೆ 7ರಿಂದ 10 ಸಾವಿರ ಕ್ಯೂಸೆಕ್ ಒಳಹರಿವು ಇದೆ. ಹಾಗಾಗಿ ನಮ್ಮ ರಾಜ್ಯದ ರೈತರ ರಕ್ಷಣೆಗೆ ಎಲ್ಲಾ ವ್ಯವಸ್ಥೆ ಮಾಡಿದ್ದೇವೆ ಎಂದು ಹೇಳಿದರು.
ಬಿಳಿಗುಂಡ್ಲು ಜಲಮಾಪನ ಕೇಂದ್ರಕ್ಕೆ 2 ದಿನ ಕಡಿಮೆ ನೀರು ಹೋಗಿದೆ. ಬೆಂಗಳೂರಿನಲ್ಲಿ ಮಳೆಯಾದ ಕಾರಣ ಅದು ಬ್ಯಾಲೆನ್ಸ್ ಆಗಿದೆ. ಕಾವೇರಿ ನೀರು ನಿಯಂತ್ರಣ ಸಮಿತಿ ಸಭೆಯಲ್ಲಿ ಮನದಟ್ಟು ಮಾಡಿಕೊಟ್ಟಿದ್ದೇವೆ. ಏನೇ ಆದೇಶ ಬಂದರೂ ನಮ್ಮ ರೈತರ ಹಿತ ಕಾಯುತ್ತೇವೆ ಎಂದು ತಿಳಿಸಿದರು.
ರಾಜ್ಯದಲ್ಲಿ ಲೋಡ್ ಶೆಡ್ಡಿಂಗ್ ಬಗ್ಗೆ ಪ್ರತಿಕ್ರಿಯಿಸಿ, ರಾಜ್ಯದಲ್ಲಿ 192 ತಾಲೂಕಗಳನ್ನು ಬರ ಪ್ರದೆಶಗಳೆಂದು ಘೋಷಣೆ ಮಾಡಲಾಗಿದೆ. ಕಳೆದ ಬಾರಿಗಿಂತ ಅರ್ಧದಷ್ಟು ಮಳೆ ಬಂದಿದೆ. ಹೀಗಾಗಿ ವಿದ್ಯುತ್ ಉತ್ಪಾದನೆ ಕಡಿಮೆಯಾಗಿದೆ. ಆದರು ಸರ್ಕಾರ ಇದನ್ನ ಬ್ಯಾಲೆನ್ಸ್ ಮಾಡುತ್ತೆ ಎಂದು ಹೇಳಿದರು.
ಮೇಕೆದಾಟು ವಿಚಾರವನ್ನ ಸಾರ್ವಜನಿಕವಾಗಿ ಮಾತನಾಡಲ್ಲ
ಮೇಕೆದಾಟು ಜಲಾಶಯ ನಿರ್ಮಣ ವಿಚಾರವನ್ನು ಸಾರ್ವಜನಿಕವಾಗಿ ಮಾತನಾಡುವುದಿಲ್ಲ. ಈ ಯೋಜನೆ ಜಾರಿ ಬಗ್ಗೆ ಕೇಂದ್ರ ನಿರ್ಧಾರ ಕೈಗೊಳ್ಳಬೇಕು. ಮೇಕೆದಾಟು ಅಣೆಕಟ್ಟು ನಿರ್ಮಾಣ ನಮ್ಮ ಮೊದಲ ಆದ್ಯತೆಯಾಗಿದೆ. ಇದರ ವಿಚಾರವಾಗಿ ಕೋರ್ಟ್ ಮುಂದೆ ವಾದ ಮಾಡುತ್ತಿದ್ದೇವೆ. ಕೋರ್ಟ್ನಲ್ಲಿ ಮತ್ತಷ್ಟು ವಾದ ಮಾಡಲು ಸಿದ್ಧತೆ ಮಾಡಿಕೊಳ್ಳಲಾಗಿದೆ. ತಮಿಳುನಾಡು ಸರ್ಕಾರಕ್ಕೆ ಕೋರ್ಟ್ ಈಗಾಗಲೇ ನಿರ್ದೇಶನ ನೀಡಿದೆ. ಡ್ಯಾಂ ಕಟ್ಟಿ 170 ಟಿಎಂಸಿ ನೀರು ಕೊಡುತ್ತಾರೆಂದು ಮನದಟ್ಟು ಮಾಡಿದೆ ಎಂದು ತಿಳಿಸಿದರು.
ತಮ್ಮ ಕಾಲಿಗೆ ಶಾಸಕ ಮುನಿರತ್ನ ಬಿದ್ದ ವಿಚಾರವಾಗಿ ಮಾತನಾಡಿ, ಕಾಲಿಗೆ ಬಿದ್ರಾ, ನಾನೇನು ಮಠದ ಸ್ವಾಮೀಜಿನಾ. ಮುನಿರತ್ನ ದ್ವೇಷದ ರಾಜಕಾರಣ ಅಂತಾ ಹೇಳುತ್ತಿದ್ದಾರೆ. ನಮ್ಮ ಕ್ಷೇತ್ರದ ಮೆಡಿಕಲ್ ಕಾಲೇಜನ್ನು ಹೇಗೆ ತೆಗೆದರು ಅಂತಾ ಕೇಳಿ ಎಂದರು.