ಹೊಸದಿಗಂತ ವರದಿ, ಬೀದರ:
ಕಲಿಕೆ ಜೀವನ ಪರ್ಯಂತ ಇದ್ದಾಗ ಮಾತ್ರ ನಮ್ಮ ಕೌಶಲ್ಯ ಕಾಲಕ್ಕೆ ತಕ್ಕಂತೆ ಬದಲಾಗುತ್ತದೆ ಎಂದು ಕೇಂದ್ರ ರಾಸಾಯನಿಕ ಮತ್ತು ರಸಗೊಬ್ಬರ, ಹೊಸ ಮತ್ತು ನವೀಕರಿಸಬಹುದಾದ ಇಂಧನ ಖಾತೆ ರಾಜ್ಯ ಸಚಿವರಾದ ಭಗವಂತ ಖೂಬಾ ಹೇಳಿದರು.
ಅವರು ಸೋಮವಾರ ಬೀದರ ಸರಕಾರಿ ಐಟಿಐ ಕಾಲೇಜಿನಲ್ಲಿ ಟಾಟಾ ಟೆಕ್ ಲ್ಯಾಬ್ ಮತ್ತು ಟಾಟಾ ವರ್ಕಶಾಫ್ ಕಾರ್ಯಕ್ರಮಕ್ಕೆ ಲೋಕಾರ್ಪಣೆ ಮಾಡಿ ಮಾತನಾಡಿದರು.
ಬೀದರ ಐಟಿಐ ಕಾಲೇಜಿಗೆ 30 ಕೋಟಿ ವೆಚ್ಚದಲ್ಲಿ ಟಾಟಾ ಸಂಸ್ಥೆಯವರು ಉತ್ತಮ ಉಪಕರಣಗಳನ್ನು ನೀಡಿ ಮಕ್ಕಳ ಕಲಿಕೆಗೆ ಅನುಕೂಲ ಮಾಡಿದ್ದಾರೆ. ಇಂದು ತಮಗೆ ಹಲವಾರು ಅವಕಾಶಗಳು ಇವೆ ನಾವು ಇಂಜಿನಿಯರ್ ಕಲಿಯುವ ಆ ದಿನಮಾನಗಳಲ್ಲಿ ಸಣ್ಣ-ಸಣ್ಣ ಮಶೀನ್ಗಳು ಇರುತ್ತಿದ್ದವು ಇಂದು ತಾಂತ್ರಿಕತೆಯಲ್ಲಿ ಬಹಳಷ್ಟು ಬದಲಾವಣೆಗಳಾಗಿವೆ ಹಾಗಾಗಿಯೆ ಜಗತ್ತು ವೇಗದಲ್ಲಿ ಅಭಿವೃದ್ಧಿಯಾಗುತ್ತಿದೆ ಎಂದು ಹೇಳಿದರು.
ಇಡೀ ಕರ್ನಾಟಕದಾದ್ಯಂತ ಪ್ರಧಾನ ಮಂತ್ರಿಗಳು 135 ಕಾಲೇಜುಗಳಿಗೆ ಈ ಕಾರ್ಯಕ್ರಮವನ್ನು ಆನ್ಲೈನ್ ಮೂಲಕ ಉದ್ಘಾಟನೆ ಮಾಡಿದ್ದಾರೆ. ತಮ್ಮ ಶಿಕ್ಷಣ ಪದವಿಗಳಿಗೆ ಸೀಮಿತವಾಗಿದೆ ಅದು ನಿರಂತರವಾಗಿ ಇರಬೇಕು ಖಾಸಗಿಯಲ್ಲಿ ಹಾಗೆ ಇರುವುದರಿಂದ ಅವರಿಗೆ ಅವಕಾಶಗಳು ಹೆಚ್ಚಾಗಿ ಸಿಗುತ್ತವೆ ಎಂದರು.
ಯಾವಾಗಲೂ ನಮ್ಮ ಗುರಿ ದೊಡ್ಡದಾಗಿರಬೇಕು ಸಣ್ಣ ಗುರಿ ಇದ್ದರೆ ನಾವು ಉನ್ನತ ಹಂತಕ್ಕೆ ತಲುಪಲು ಆಗುವುದಿಲ್ಲ ಕಾಲೇಜು ಮುಗಿದ ನಂತರ ತಾವು ಉನ್ನತ ಶಿಕ್ಷಣ ಪಡೆಯುವ ಮೂಲಕ ಇನ್ನು ಎತ್ತರಕ್ಕೆ ಬೆಳೆಯಬೇಕು ಮತ್ತು ತಮ್ಮ ಮುಂದಿನ ಉಜ್ವಲ ಭವಿಷ್ಯಕ್ಕೆ ಶುಭವಾಗಲಿ ಎಂದು ಸಚಿವರು ಎಲ್ಲಾ ಮಕ್ಕಳ ಭವಿಷ್ಯಕ್ಕೆ ಶುಭ ಹಾರೈಸಿದರು.
ಈ ಕಾರ್ಯಕ್ರಮದಲ್ಲಿ ವಿಧಾನ ಪರಿಷತ್ ಸಭಾಪತಿಗಳಾದ ರಘುನಾಥರಾವ್ ಮಲ್ಕಾಪೂರೆ, ಬೀದರ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಬಾಬು ವಾಲಿ ಮತ್ತು ಬೀದರ ಐಟಿಐ ಕಾಲೇಜಿನ ಪ್ರಾಂಶುಪಾಲರಾದ ಶಿವಶಂಕರ ಟೋಕರೆ ಸೇರಿದಂತೆ ಇತರರು ಉಪಸ್ಥಿತರಿದ್ದರು.