ಹೊಸದಿಗಂತ ಡಿಜಿಟಲ್ ಡೆಸ್ಕ್:
ಲೋಕಸಭಾ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಐಐಟಿ ಮದ್ರಾಸ್ನ ವಿದ್ಯಾರ್ಥಿಗಳ ಜೊತೆ ಸಂಭಾಷಣೆ ಮಾಡುತ್ತಾ , ಪ್ರಶ್ನೆಗಳಿಗೆ ಉತ್ತರಿಸಿದ್ದಾರೆ.
ಈ ವೇಳೆ ಶಿಕ್ಷಣ ವ್ಯವಸ್ಥೆಯನ್ನು ಸುಧಾರಿಸಲು ತಾವು ಪ್ರಾರಂಭಿಸಲು ಬಯಸುವ ಬದಲಾವಣೆಗಳು ಸೇರಿದಂತೆ ಹಲವು ವಿಷಯಗಳ ಕುರಿತು ಮಾತನಾಡಿದರು.
ಇದೇ ವೇಳೆ ಓರ್ವ ವಿದ್ಯಾರ್ಥಿ ಬಿಜೆಪಿ ಮತ್ತು ಕಾಂಗ್ರೆಸ್ ನಡುವಿನ ವ್ಯತ್ಯಾಸವೇನು ಎಂದು ಪ್ರಶ್ನೆ ಮಾಡಿದರು.
ದೇಶದ ಎರಡು ಪ್ರಮುಖ ರಾಜಕೀಯ ಪಕ್ಷಗಳಾದ ಕಾಂಗ್ರೆಸ್ ಮತ್ತು ಬಿಜೆಪಿ ಹೇಗೆ ಕಾರ್ಯ ನಿರ್ವಹಿಸುತ್ತವೆ? ಇವುಗಳ ನಡುವಿನ ವ್ಯತ್ಯಾಸ ಏನಾಗಿದೆ ಎಂದು ಪ್ರಶ್ನೆ ಮಾಡಲಾಗಿತ್ತು.
ಪ್ರಶ್ನೆಗೆ ಉತ್ತರಿಸಿದ ರಾಹುಲ್ ಗಾಂಧಿ, ಯಾವುದೇ ಸಂಪನ್ಮೂಲವಿರಲಿ ಅದನ್ನು ನ್ಯಾಯಯುತವಾಗಿ ಹಂಚಿಕೆ ಮಾಡಬೇಕು. ಈ ಹಂಚಿಕೆಯು ಬೆಳವಣಿಗೆಯನ್ನು ಒಳಗೊಂಡಿರಬೇಕು ಎಂಬುದನ್ನು ಕಾಂಗ್ರೆಸ್ ನಂಬುತ್ತದೆ. ಬಿಜೆಪಿ ಬೆಳವಣಿಗೆ ಹೆಚ್ಚು ಆಕ್ರಮಣಕಾರಿಯಾಗಿದ್ದು, ಆರ್ಥಿಕ ಭಾಷೆಯಲ್ಲಿ ಇದನ್ನು ‘ಟ್ರಿಕಲ್ ಡೌನ್’ (trickle down) ಎಂದು ಕರೆಯಲಾಗುತ್ತದೆ.
ನಾವು ಬದುಕುವ ಸಮಾಜವು ಹೆಚ್ಚು ಸಾಮರಸ್ಯದಿಂದ ಕೂಡಿದಾಗ ಮಾತ್ರ ಜನರು ಹೋರಾಟಗಳಿಂದ ದೂರ ಉಳಿಯುತ್ತಾರೆ. ಇಂತಹ ಸಮಾಜ ದೇಶಕ್ಕೂ ತುಂಬಾನೇ ಒಳ್ಳೆಯದು. ಇದಕ್ಕಾಗಿ ದೇಶವು ತನ್ನ ಜನರಿಗೆ ಗುಣಮಟ್ಟದ ಶಿಕ್ಷಣವನ್ನು ಒದಗಿಸುವ ಕೆಲಸ ಮಾಡಬೇಕು ಎಂದು ರಾಹುಲ್ ಗಾಂಧಿ ಹೇಳಿದರು.
ಭಾರತ ಹಲವು ಉತ್ತಮ ಸರ್ಕಾರಿ ಶಿಕ್ಷಣ ಸಂಸ್ಥೆಗಳನ್ನು ಹೊಂದಿದೆ ಎಂದು ಈ ಹಿಂದೆಯೂ ಹಲವು ಬಾರಿ ನಾನು ಹೇಳಿದ್ದೇನೆ. ಸರ್ಕಾರಗಳು ಶಿಕ್ಷಣಕ್ಕಾಗಿ ಹೆಚ್ಚು ಹಣವನ್ನು ಖರ್ಚು ಮಾಡಬೇಕೆಂದು ನಾನು ವಾದಿಸುತ್ತೇನೆ. ಸರ್ಕಾರಗಳು ಸರ್ಕಾರಿ ಶಿಕ್ಷಣ ಸಂಸ್ಥೆಗಳ ಅಭಿವೃದ್ಧಿಗೆ ಶ್ರಮಿಸಬೇಕು ಎಂದು ಹೇಳಿದರು.
ಶಿಕ್ಷಣ ಮತ್ತು ಸರಕಾರಿ ಸಂಸ್ಥೆಗಳ ಬಲವರ್ಧನೆಗೆ ಹೆಚ್ಚಿನ ಹಣ ವ್ಯಯಿಸಬೇಕಾಗಿದೆ. ತನ್ನ ಜನರಿಗೆ ಗುಣಮಟ್ಟದ ಶಿಕ್ಷಣವನ್ನು ಖಾತರಿಪಡಿಸುವುದು ಯಾವುದೇ ಸರ್ಕಾರದ ಪ್ರಮುಖ ಜವಾಬ್ದಾರಿಗಳಲ್ಲಿ ಒಂದಾಗಿದೆ ಎಂದು ನಾನು ನಂಬುತ್ತೇನೆ. ಇದನ್ನು ಖಾಸಗೀಕರಣ ಮತ್ತು ಆರ್ಥಿಕ ಪ್ರೋತ್ಸಾಹದ ಮೂಲಕ ಸಾಧಿಸಲಾಗುವುದಿಲ್ಲ ಎಂದು ಮತ್ತೊಮ್ಮೆ ಹೇಳಿಕೆಯನ್ನು ರಾಹುಲ್ ಗಾಂಧಿ ಪುನರುಚ್ಛಿಸಿದರು.