ಹೊಸದಿಗಂತ ಡಿಜಿಟಲ್ ಡೆಸ್ಕ್
ದಕ್ಷಿಣ ಭಾರತದ ತಮಿಳುನಾಡು ಹಾಗೂ ಆಂದ್ರ ಕರಾವಳಿಯತ್ತ ತೀವ್ರ ವೇಗದಲ್ಲಿ ಬರುತ್ತಿರುವ ಮಾಂಡೌಸ್ ಚಂಡಮಾರುತವು ಬಾರೀ ಹಾನಿ ಮಾಡುವ ಭೀತಿ ಸೃಷ್ಟಿಸಿದೆ. ಶುಕ್ರವಾರ ಮಧ್ಯರಾತ್ರಿ ಮಾಮಲ್ಲಪುರಂ ಬಳಿ ಕರಾವಳಿಯನ್ನು ದಾಟುವ ನಿರೀಕ್ಷೆಯಿದೆ. ಚಂಡಮಾರುತದ ತೀವ್ರತೆಯಿಂದಾಗಿ ಗಾಳಿಯು ಗಂಟೆಗೆ 85 ಕಿ.ಮೀ. ವೇಗದಲ್ಲಿ ಬೀಸುತ್ತಿದೆ. ಮುನ್ನೆಚ್ಚರಿಕೆ ಕ್ರಮವಾಗಿ ತಮಿಳುನಾಡಿನಲ್ಲಿ ತೀವ್ರ ಕಟ್ಟೆಚ್ಚರ ವಹಿಸಲಾಗಿದೆ.
1.ಯುನೈಟೆಡ್ ಅರಬ್ ಎಮಿರೇಟ್ಸ್ (ಯುಎಇ) ಈ ಚಂಡಮಾರುತಕ್ಕೆ ಹೆಸರಿಟ್ಟಿದೆ. 2020 ರಲ್ಲಿ ಭಾರತೀಯ ಹವಾಮಾನ ಇಲಾಖೆ (IMD) ಟ್ವಿಟರ್ನಲ್ಲಿ ಪೋಸ್ಟ್ ಮಾಡಿದ ಮಾಹಿತಿಯ ಪ್ರಕಾರ, ವಿಶ್ವ ಹವಾಮಾನ ಸಂಸ್ಥೆಯ (WMO) ಸದಸ್ಯ ರಾಷ್ಟ್ರವಾದ ಯುಎಇ ಈ ಚಂಡಮಾರುತ್ತಕ್ಕೆ ಹೆಸರಿಡುವ ಅಧಿಕಾರ ಹೊಂದಿತ್ತು.
2.ಅರೇಬಿಕ್ ಭಾಷೆಯಲ್ಲಿ ಮಾಂಡೌಸ್ ಪದಕ್ಕೆ ‘ನಿಧಿ ಪೆಟ್ಟಿಗೆ’ ಎಂದರ್ಥ ಬರುತ್ತದೆ. ಮತ್ತು ಇದನ್ನು ‘ಮ್ಯಾನ್-ಡೌಸ್’ ಎಂದು ಉಚ್ಚರಿಸಲಾಗುತ್ತದೆ. ಇದು ನಿಧಾನವಾಗಿ ಚಲಿಸುವ ಚಂಡಮಾರುತವಾಗಿದ್ದು, ವಾತಾವರಣದಿಂದ ಸಾಕಷ್ಟು ತೇವಾಂಶವನ್ನು ಹೀರಿಕೊಳ್ಳುತ್ತದೆ. ಚಂಡಮಾರುತವು ಗಾಳಿಯ ವೇಗದ ರೂಪದಲ್ಲಿ ಬಲವನ್ನು ಪಡೆಯುತ್ತದೆ.
3.ಪ್ರಪಂಚದಾದ್ಯಂತದ ಚಂಡಮಾರುತಗಳನ್ನು ಅವುಗಳು ಸೃಷ್ಟಿಯಾಗುವ ಕೇಂದ್ರ ಸ್ಥಾನದಲ್ಲಿರುವ ವಿಶೇಷ ಪ್ರಾದೇಶಿಕ ಹವಾಮಾನ ಕೇಂದ್ರಗಳು ಮತ್ತು ಚಂಡಮಾರುತ ಎಚ್ಚರಿಕೆ ಕೇಂದ್ರಗಳಿಂದ ಹೆಸರಿಸಲಾಗುತ್ತದೆ. ಉಷ್ಣ ವಲಯದ ಸಮುದ್ರ ಪ್ರದೇಶದಲ್ಲಿ ಆರು ಪ್ರಾದೇಶಿಕ ಕೇಂದ್ರಗಳು ಮತ್ತು ಐದು ಎಚ್ಚರಿಕೆ ಕೇಂದ್ರಗಳಿವೆ.
4.ಮಾಂಡೌಸ್ ಚಂಡಮಾರುತ ತನ್ನ ತೀವ್ರತೆಯನ್ನು ಹೆಚ್ಚಿಸಿಕೊಳ್ಳುತ್ತಿರುವುದರಿಂದ ತಮಿಳುನಾಡಿನ ಹದಿಮೂರು ಜಿಲ್ಲೆಗಳಲ್ಲಿ ರೆಡ್ ಅಲರ್ಟ್ ಘೋಷಿಸಲಾಗಿದೆ. ಚೆಂಗಲ್ಪಟ್ಟು, ವಿಲ್ಲುಪುರಂ ಮತ್ತು ಕಾಂಚೀಪುರಂ ನಲ್ಲಿ ಮಾರುತದಿಂದ ಹೆಚ್ಚಿನ ಪರಿಣಾಮಗಳು ಆಗಲಿವೆ.
5.ಪುದುಚೇರಿ ಬಂದರಿನಲ್ಲಿ ಚಂಡಮಾರುತದ ಎಚ್ಚರಿಕೆ ಸಂಕೇತ ಧ್ವಜವನ್ನು ಹಾರಿಸಲಾಗಿದೆ ಮತ್ತು ಮೀನುಗಾರರು ಸಮುದ್ರಕ್ಕೆ ಇಳಿಯದಂತೆ ಸೂಚಿಸಲಾಗಿದೆ. ಚೆನ್ನೈ, ಕಾಂಚೀಪುರಂ ಮತ್ತು ತಿರುವಳ್ಳೂರು ಸೇರಿದಂತೆ ತಮಿಳುನಾಡು ರಾಜ್ಯದ 12 ಜಿಲ್ಲೆಗಳಲ್ಲಿ ಶಾಲಾ-ಕಾಲೇಜುಗಳನ್ನು ಮುಚ್ಚಲಾಗಿದೆ.