ಹೊಸ ದಿಗಂತ ಡಿಜಿಟಲ್ ಡೆಸ್ಕ್:
ಭಾರತದ ಬ್ಯಾಂಕ್ಗಳಿಗೆ ಸಾವಿರಾರು ಕೋಟಿ ರೂಪಾಯಿ ವಂಚಿಸಿ ವಿದೇಶಕ್ಕೆ ಪರಾರಿಯಾಗಿರುವ ಉದ್ಯಮಿಗಳಾದ ವಿಜಯ್ ಮಲ್ಯ ಮತ್ತು ನೀರವ್ ಮೋದಿ ಅವರ 15,000 ಕೋಟಿ ಮೌಲ್ಯದ ಆಸ್ತಿಯನ್ನು ವಶಕ್ಕೆ ಪಡೆದು ಬ್ಯಾಂಕ್ಗಳಿಗೆ ಹಸ್ತಾಂತರಿಸಲಾಗಿದೆ ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ತಿಳಿಸಿದ್ದಾರೆ.
ಲೋಕಸಭೆಯಲ್ಲಿ ಬ್ಯಾಂಕ್ಗೆ ವಂಚಿಸಿ ಪರಾರಿಯಾಗಿರುವ ಶ್ರೀಮಂತ ಉದ್ಯಮಿಗಳ ವಿರುದ್ದ ಕೇಂದ್ರ ಸರ್ಕಾರ ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ. ಆದರೆ ಜನಸಮಾನ್ಯರ ವಿರುದ್ದ ಕಠಿಣ ಕ್ರಮ ಕೈಗೊಳ್ಳುತ್ತಿದೆ ಎಂದು ಆರೋಪ ಮಾಡಿತ್ತು. ಮೋದಿ ಸರ್ಕಾರ ಶ್ರೀಮಂತರ ಪರವಾಗಿದೆ ಅನ್ನೋ ಆರೋಪವನ್ನು ಮಾಡಿತ್ತು. ಇದಕ್ಕೆ ಉತ್ತರಿಸಿದ ನಿರ್ಮಲಾ ಸೀತಾರಾಮನ್, ಯಾರನ್ನೂ ಬಿಡುವ ಪ್ರಶ್ನೆ ಇಲ್ಲ. ತಪ್ಪು ಮಾಡಿದರೆ ಕಾನೂನು ಪ್ರಕಾರ ಶಿಕ್ಷೆಯಾಗಲಿದೆ ಎಂದಿದ್ದಾರೆ. ಇದೇ ವೇಳೆ ಮೂವರು ಉದ್ಯಮಿಗಳ ವಂಚನೆ ಪ್ರಕರಣ ಉಲ್ಲೇಖಿಸಿ ನಿರ್ಮಾಲಾ ಸೀತಾರಾಮನ್ ವಶಪಡಿಸಿಕೊಂಡ ಆಸ್ತಿ ಮೌಲ್ಯದ ಮಾಹಿತಿ ನೀಡಿದ್ದಾರೆ.
ಪರಾರಿಯಾಗಿರುವ ಉದ್ಯಮಿಯ ಸಾಲದ ಒಂದು ಭಾಗವನ್ನು ಪಾವತಿಸಲು 14,131 ಕೋಟಿ ಮೌಲ್ಯದ ಆಸ್ತಿ (ವಿಜಯ್ ಮಲ್ಯಗೆ ಸೇರಿದ ಆಸ್ತಿ) ವಶಪಡಿಸಿಕೊಂಡು ಸಾರ್ವಜನಿಕ ಮತ್ತು ಖಾಸಗಿ ವಲಯದ ಬ್ಯಾಂಕ್ಗಳಿಗೆ ಹಸ್ತಾಂತರಿಸಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.
ಮಲ್ಯ, ಮೆಹುಲ್ ಚೋಕ್ಸಿ ಮತ್ತು ನೀರವ್ ಮೋದಿ ಮೊದಲಾದ ವಾಂಟೆಡ್ ವ್ಯಕ್ತಿಗಳ ಸಾಲವನ್ನು ಮರುಪಾವತಿಸಲು ಜಾರಿ ನಿರ್ದೇಶನಾಲಯವು ಒಟ್ಟು 22,280 ಕೋಟಿ ಮೌಲ್ಯದ ಆಸ್ತಿಯನ್ನು ವಶಕ್ಕೆ ಪಡೆದಿದೆ. ಆರ್ಥಿಕ ಅಪರಾಧಿಗಳ ವಿರುದ್ಧದ ಹೋರಾಟವನ್ನು ಮುಂದುವರಿಸಲು ನಿರ್ಧರಿಸಲಾಗಿದೆ ಎಂದು ಹೇಳಿದ್ದಾರೆ.
ವಶಕ್ಕೆ ಪಡೆದ ಒಟ್ಟು ಮೊತ್ತದಲ್ಲಿ ನೀರವ್ ಮೋದಿಗೆ ಸೇರಿದ 1,052 ಕೋಟಿ ಮತ್ತು ಚೋಕ್ಸಿ ಅವರ 2,565 ಕೋಟಿ ಹಣವನ್ನು ಒಳಗೊಂಡಿದೆ. ನ್ಯಾಷನಲ್ ಸ್ಪಾಟ್ ಎಕ್ಸ್ಚೇಂಜ್ ಲಿಮಿಟೆಡ್ ಅಥವಾ ಎನ್ಎಸ್ಇಎಲ್ನಲ್ಲಿನ 17.5 ಕೋಟಿ ಮೊತ್ತವನ್ನು ಸೀಜ್ ಮಾಡಿದೆ.