ಹೊಸದಿಗಂತ ಡಿಜಿಟಲ್ ಡೆಸ್ಕ್:
ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳ ಪರಿಶೀಲನೆ ನಡೆಸುತ್ತಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ಶಿಷ್ಟಾಚಾರದ ವೇಳೆ ನಡೆದ ಸಣ್ಣ ಲೋಪಕ್ಕೆ ಅಧಿಕಾರಿಯೊಬ್ಬರ ಮೇಲೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ ಘಟನೆ ನಡೆದಿದೆ.
ಗುರುವಾರ ಬೆಳಿಗ್ಗೆ 11 ಗಂಟೆಯಿಂದಲೇ ಮೈಸೂರು ನಗರದಾದ್ಯಂತ ‘ಸಿಟಿ ರೌಂಡ್ಸ್’ ಕೈಗೊಂಡಿರುವ ಸಿಎಂ ಸಿದ್ದರಾಮಯ್ಯ, ಸುಡುವ ಬಿಸಿಲಿನಲ್ಲಿ ವಿವಿಧ ಕಾಮಗಾರಿಗಳನ್ನು ವೀಕ್ಷಿಸುತ್ತಿದ್ದರು. ಈ ವೇಳೆ ದಣಿವಾರಿಸಿಕೊಳ್ಳಲು ಎಂಜಿನಿಯರ್ ಒಬ್ಬರು ಕುಡಿಯುವ ನೀರಿನ ಬಾಟಲಿ ನೀಡಲು ಮುಂದಾದರು. ಇದನ್ನು ಕಂಡು ಅಸಮಾಧಾನಗೊಂಡ ಸಿಎಂ, “ಏ ಜ್ಯೂಸ್ ಇಲ್ವೇನಯ್ಯ? ಈ ಬಿಸಿಲಿನಲ್ಲಿ ಎಳನೀರು ತರಬೇಕಲ್ವಾ?” ಎಂದು ಅಧಿಕಾರಿಗಳ ಮೇಲೆ ಗರಂ ಆದರು.
ಅಧಿಕಾರಿಗಳು ನೀಡಿದ ಸಾಮಾನ್ಯ ನೀರನ್ನು ಕುಡಿಯಲು ನಿರಾಕರಿಸಿದ ಮುಖ್ಯಮಂತ್ರಿಗಳು, “ಇವನ್ಯಾವನೋ ಇವನು” ಎಂದು ಹೇಳುತ್ತಾ ಅಸಮಾಧಾನದಿಂದಲೇ ಅಲ್ಲಿಂದ ಮುಂದೆ ಸಾಗಿದರು. ಕೂಡಲೇ ಎಚ್ಚೆತ್ತುಕೊಂಡ ಜಿಲ್ಲಾ ಮಟ್ಟದ ಅಧಿಕಾರಿಗಳು, ಮುಂದಿನ ಕಾಮಗಾರಿ ವೀಕ್ಷಣಾ ಸ್ಥಳದಲ್ಲಿ ಶರಬತ್ತು ಅಥವಾ ಎಳನೀರಿನ ವ್ಯವಸ್ಥೆ ಮಾಡುವುದಾಗಿ ಭರವಸೆ ನೀಡಿದರು.
ಮೈಸೂರಿನ ಸರ್ವಾಂಗೀಣ ಅಭಿವೃದ್ಧಿಗೆ ಪೂರಕವಾಗಿ ನಡೆಯುತ್ತಿರುವ ಹಲವು ಪ್ರಮುಖ ಕೆಲಸಗಳನ್ನು ಸಿಎಂ ಇಂದು ಸ್ಥಳದಲ್ಲೇ ಪರಿಶೀಲಿಸಿದರು.
ಮುಖ್ಯಮಂತ್ರಿಗಳ ಈ ಭೇಟಿಯ ವೇಳೆ ಸ್ಥಳೀಯ ಶಾಸಕರು, ಜನಪ್ರತಿನಿಧಿಗಳು ಹಾಗೂ ಹಿರಿಯ ಅಧಿಕಾರಿಗಳು ಸಾಥ್ ನೀಡಿದ್ದರು. ಬಿಸಿಲಿನ ಬೇಗೆಯ ನಡುವೆಯೂ ಸಿದ್ದರಾಮಯ್ಯ ಅವರು ನಗರದ ಮೂಲಸೌಕರ್ಯಗಳ ಕುರಿತು ಅಧಿಕಾರಿಗಳಿಂದ ಮಾಹಿತಿ ಪಡೆದರು.



