ಹೊಸದಿಗಂತ ಡಿಜಿಟಲ್ ಡೆಸ್ಕ್:
ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ (BJP) ಬಹುಮತಕ್ಕೆ ಬೇಕಾದ 272 ಸೀಟು ಪಡೆಯದಿದ್ದರೆ ಮುಂದೇನು ಎಂಬ ಪಶ್ನೆಗೆ ಗೃಹ ಸಚಿವ ಅಮಿತ್ ಶಾ (Home minister Amit Shah) ಖಡಕ್ ಆಗಿ ಉತ್ತರಿಸಿದ್ದಾರೆ. ಅಂಥದೊಂದು ಸನ್ನಿವೇಶ ಸಂಭವಿಸುವ ಸಾಧ್ಯತೆ ನನಗೆ ಕಾಣುತ್ತಿಲ್ಲ. ಹೀಗಾಗಿ ಬಿಜೆಪಿಗೆ ಪ್ಲಾನ್ ಬಿ (Plan B) ಬೇಕಾಗಿಲ್ಲ ಎಂದು ಅಮಿತ್ ಶಾ ಹೇಳಿದ್ದಾರೆ.
ಅಂತಹ ಯಾವುದೇ ಸಾಧ್ಯತೆಗಳು ನನಗೆ ಕಾಣುತ್ತಿಲ್ಲ, 60 ಕೋಟಿ ಫಲಾನುಭವಿಗಳ ಸೈನ್ಯವು ಪ್ರಧಾನಿ ಮೋದಿಯವರೊಂದಿಗೆ ನಿಂತಿದೆ. ಅವರಿಗೆ ಯಾವುದೇ ಜಾತಿಬಲ ಅಥವಾ ವಯೋಮಾನವಿಲ್ಲ. ಈ ಎಲ್ಲಾ ಪ್ರಯೋಜನಗಳನ್ನು ಪಡೆದವರಿಗೆ ನರೇಂದ್ರ ಮೋದಿಯವರಿಗೆ ಹೇಗೇ ಆದರೂ 400 ಸೀಟ್ ನೀಡುವುದು ಗೊತ್ತು ಎಂದು ಶಾ ಹೇಳಿದ್ದಾರೆ.
ಎಎನ್ಐಗೆ ನೀಡಿದ ಸಂದರ್ಶನದಲ್ಲಿ, ಬಿಜೆಪಿಯ ಪ್ಲಾನ್ ಬಿ ಬಗ್ಗೆ ಕೇಳಲಾಯಿತು. ಈ ವೇಳೆಪಕ್ಷದ ಪ್ಲಾನ್ ಎ ಯಶಸ್ವಿಯಾಗಿಯೇ ಆಗುತ್ತದೆ ಎಂದು ಅಮಿತ್ ಶಾ ಹೇಳಿದರು.
ಪ್ಲಾನ್ ಎ ಯಶಸ್ವಿಯಾಗಲು 60%ಕ್ಕಿಂತ ಕಡಿಮೆ ಅವಕಾಶವಿರುವಾಗ ಮಾತ್ರ ಪ್ಲಾನ್ ಬಿ ಮಾಡಬೇಕು. ಪಿಎಂ ಮೋದಿ ಅವರು ಭಾರಿ ಬಹುಮತದೊಂದಿಗೆ ಅಧಿಕಾರಕ್ಕೆ ಬರುತ್ತಾರೆ ಎಂದು ನನಗೆ ಖಚಿತವಾಗಿದೆ ಎಂದು ಅವರು ಹೇಳಿದರು.
‘ಉತ್ತರ-ದಕ್ಷಿಣ’ ವಿಭಜನೆಗೆ ಕಾಂಗ್ರೆಸ್ ಪ್ರಯತ್ನಿಸುತ್ತಿದೆ ಎಂಬ ಬಿಜೆಪಿ ಆರೋಪದ ಬಗ್ಗೆ ಉತ್ತರಿಸಿದ ಅಮಿತ್ ಶಾ, ಕೇರಳ, ತಮಿಳುನಾಡು, ಆಂಧ್ರಪ್ರದೇಶ, ತೆಲಂಗಾಣ ಮತ್ತು ಕರ್ನಾಟಕದಲ್ಲಿ ಬಿಜೆಪಿ ಏಕೈಕ ದೊಡ್ಡ ಪಕ್ಷವಾಗಿ ಹೊರಹೊಮ್ಮಲಿದೆ ಎಂದು ಹೇಳಿದರು.
ಇದು ಪ್ರತ್ಯೇಕ ದೇಶ ಎಂದು ಯಾರಾದರೂ ಹೇಳಿದರೆ ಅದು ತುಂಬಾ ಆಕ್ಷೇಪಾರ್ಹ. ಈ ದೇಶವನ್ನು ಇನ್ನು ಎಂದಿಗೂ ವಿಭಜಿಸಲು ಸಾಧ್ಯವಿಲ್ಲ. ಕಾಂಗ್ರೆಸ್ ಪಕ್ಷದ ಹಿರಿಯ ನಾಯಕರೊಬ್ಬರು ಉತ್ತರ ಮತ್ತು ದಕ್ಷಿಣ ಭಾರತವನ್ನು ವಿಭಜಿಸುವ ಬಗ್ಗೆ ಮಾತನಾಡಿದ್ದಾರೆ. ಕಾಂಗ್ರೆಸ್ ಪಕ್ಷ ಅದನ್ನು ನಿರಾಕರಿಸಿಲ್ಲ. ಜನತೆ ಈ ಹೇಳಿಕೆಯ ಹಿನ್ನೆಲೆಯಲ್ಲಿ ಕಾಂಗ್ರೆಸ್ ಪಕ್ಷದ ಕಾರ್ಯಸೂಚಿಯ ಬಗ್ಗೆ ಗ್ರಹಿಸಬೇಕು. ಕೇರಳ, ತಮಿಳುನಾಡು, ಆಂಧ್ರಪ್ರದೇಶ, ತೆಲಂಗಾಣ ಮತ್ತು ಕರ್ನಾಟಕ 5 ರಾಜ್ಯಗಳನ್ನು ಒಟ್ಟುಗೂಡಿಸಿ ಬಿಜೆಪಿ ಈ ಚುನಾವಣೆಯಲ್ಲಿ ಏಕೈಕ ದೊಡ್ಡ ಪಕ್ಷವಾಗಿ ಹೊರಹೊಮ್ಮಲಿದ ಎಂದು ಅವರು ಹೇಳಿದರು.
ದೇಶದ ರಾಜಕೀಯದಲ್ಲಿ ಸ್ಥಿರತೆ ತರಲು 400ಕ್ಕೂ ಹೆಚ್ಚು ಸ್ಥಾನಗಳ ಅಗತ್ಯವಿದೆ. ಸಂವಿಧಾನವನ್ನು ಬದಲಾಯಿಸುವ ಜನಾದೇಶ ಬಿಜೆಪಿಗಿದೆ. ಆದರೆ ನಾವು ಎಂದಿಗೂ ಹಾಗೆ ಮಾಡಲಿಲ್ಲ. ಲೋಕಸಭೆಯಲ್ಲಿ 400 ಸ್ಥಾನಗಳನ್ನು ಹೊಂದಲಿರುವ ಬಿಜೆಪಿಯು ಗಡಿಗಳನ್ನು ರಕ್ಷಿಸಲು, ಭಾರತವನ್ನು ವಿಶ್ವದ ಮೂರನೇ ಅತಿದೊಡ್ಡ ಆರ್ಥಿಕತೆಯಾಗಿ ಮಾಡಲು ಮತ್ತು ಬಡವರ ಕಲ್ಯಾಣವನ್ನು ಖಚಿತಪಡಿಸಿಕೊಳ್ಳಲು ಬಯಸುತ್ತದೆ ಎಂದು ಅವರು ಹೇಳಿದರು.