ಮೇಘನಾ ಶೆಟ್ಟಿ, ಶಿವಮೊಗ್ಗ
ಸಂಬಂಧಗಳಲ್ಲೇ ನಿರೀಕ್ಷೆ ಹೆಚ್ಚು, ಅದು ಸಹಜ ಕೂಡ, ಅವನು ನನ್ನ ಬರ್ಥ್ಡೇಗೆ ರೋಸ್ ಆದ್ರೂ ಕೊಡ್ತಾನಾ? ಅವಳಿಗೆ ಇವತ್ತು ನನ್ನ ಕೆಲಸದ ಮೊದಲ ದಿನ ಅಂತ ನೆನಪಿದ್ಯಾ? ನನ್ನಮ್ಮನಿಗೆ ಫೋನ್ ಮಾಡಿ ಎಷ್ಟು ದಿನ ಆಯ್ತು? ರೂಂ ಇಷ್ಟು ಗಲೀಜಾಗಿದೆ ಕ್ಲೀನ್ ಮಾಡೋಕೆ ಆಗಲ್ವಾ? ಅಡುಗೆ ಚೆನ್ನಾಗಿಲ್ಲ, ಐರನ್ ಮಾಡೋಕೂ ಬರೋದಿಲ್ಲ, ಹೆಂಡತಿಯನ್ನು ಹೇಗೆ ನೋಡ್ಕೋಬೇಕು ಗೊತ್ತಿಲ್ಲ, ಗಂಡನಿಗೆ ಕೇರ್ ಮಾಡೋದಿಲ್ಲ, ನನ್ನ ಪಾಸ್ವರ್ಡ್ ಅವನಿಗ್ಯಾಕೆ? ನನ್ನ ಸಂಬಳದ ವಿಷಯ ಅವಳಿಗ್ಯಾಕೆ….
ಹೀಗೆ ಬರೆದುಕೊಂಡು ಹೋದರೆ, ಸಾವಿರಾರು ಲಕ್ಷಾಂತರ ವಿಷಯಗಳು ಸಿಗುತ್ತಾ ಹೋಗುತ್ತವೆ, ನೀವು ನಿಮ್ಮ ಪ್ರೀತಿಪಾತ್ರರ ಮೇಲೆ ಸಾಕಷ್ಟು ನಿರೀಕ್ಷೆ ಇಟ್ಟುಕೊಂಡಿದ್ದೀರಿ, ನಿಮ್ಮ ಲೆಕ್ಕಾಚಾರದಲ್ಲಿ ಸ್ವಲ್ಪ ಆಚೀಚೆ ಆದರೂ ಸಹಿಸೋಕೆ ಆಗೋದಿಲ್ಲ. 12 ಗಂಟೆಗಲ್ಲದೆ, 12:05ಕ್ಕೆ ವಿಶ್ ಮಾಡಿದ್ರೂ ಅವರಿಗೆ ನಮ್ಮ ಮೇಲೆ ಕೇರ್ ಇಲ್ಲ, ನಾನು ಮುಖ್ಯ ಅಲ್ಲ ಹೀಗೆ ನೀವೇ ನಿರ್ಧಾರಕ್ಕೆ ಬಂದುಬಿಡ್ತೀರಿ..
ಯಾವುದೇ ಸಂಬಂಧ ಅಥವಾ ಇನ್ನೇನೆ ಇರಲಿ, ಎಲ್ಲಿ ನಿರೀಕ್ಷೆ ಇದೆಯೋ ಅಲ್ಲಿ ನಿರಾಸೆಯೂ ಇದೆ. ಇದನ್ನು ಮೊದಲು ಒಪ್ಪಿಕೊಳ್ಳಿ. ಜಗತ್ತು ನೀವಂದುಕೊಂಡಂತೆ ಯಾವಾಗನಿಂದ ನಡೀತಾ ಇದೆ? ಸ್ವಲ್ಪ ಆಚೀಚೆ ಆಗಲೇಬೇಕು, ಯಾಕಂದ್ರೆ ನಿಮ್ಮ ಎದುರಿನ ವ್ಯಕ್ತಿಗೂ ನಿಮ್ಮಂತೆ ನಿರೀಕ್ಷೆ ಇದ್ದೇ ಇದೆ, ಅದು ನಿಮ್ಮ ವಿರುದ್ಧವೂ ಆಗಿರಬಹುದಲ್ಲಾ?
ಯಾವುದೇ ಸಂಬಂಧದಲ್ಲಿ ಡಿಸಪ್ಪಾಯಿಂಟ್ ಆದಾಗ ಹೀಗೆ ಮಾಡಿನೋಡಿ..
ಫೀಲಿಂಗ್ಸ್ ಮ್ಯಾನೇಜ್ ಮಾಡಿ
ನಿಮ್ಮ ಭಾವನೆಗಳನ್ನು ಮ್ಯಾನೇಜ್ ಮಾಡೋದನ್ನು ಕಲೀರಿ, ಕೋಪ ಬಂದಿದ್ರೂ ನಗೋದು, ಬೇಜಾರಿಲ್ಲದೆಯೂ ಅಳೋದು ಬೇಡ, ನಿಮ್ಮ ಭಾವನೆಗಳ ಮೇಲೆ ಹಿಡಿತ ಇರಲಿ, ಅದು ನಿಜವಾಗಿರಲಿ.
ಪರ್ಸನಲ್ ಆಗಿ ತಗೋಬೇಡಿ
ಎಲ್ಲವನ್ನೂ ಪರ್ಸನಲ್ ಆಗಿ ತಗೋಬೇಡಿ, ನಿರಾಸೆ ಅನ್ನೋದು ಪರ್ಸನಲ್ ಪದವೇ ಇರಬಹುದು, ಆದರೆ ಆದಷ್ಟು ಸಂಗಾತಿಯ ಮಾತನ್ನು ಮನಸ್ಸಿಗೆ ತಗೋಬೇಡಿ, ಏನೋ ಹೇಳಿದ್ದಾರೆ, ಸಂದರ್ಭ ಎಂದು ಸುಮ್ಮನಾಗಿ, ನೀವು ಸಿಟ್ಟು ಮಾಡಿ, ರಂಪಾಟ ಮಾಡಿದರೆ ಮಾತ್ರ ನಿಮಗೆ ಬೆಲೆ ಅನ್ನೋದು ಸುಳ್ಳು.
ಅವರ ಜಾಗದಲ್ಲಿ ನೀವಿದ್ರೆ?
ಬೇರೆಯವರ ರೀತಿ ನೀವೊಮ್ಮೆ ಆಲೋಚಿಸಿ ನೋಡಿ, 10 ಗಂಟೆಗೆ ಬರಬೇಕಾದವಳು, 11 ಗಂಟೆಗೆ ಬಂದಿದ್ದಾಳೆ, ಅವಳು ಹೇಳ್ತಿದ್ದಾಳೆ ಟ್ರಾಫಿಕ್ನಲ್ಲಿ ಸಿಕ್ಕಿಹಾಕಿಕೊಂಡಿದ್ದಳು, ನಿಮಗೆ ಕೋಪ ಮುಂಚೆಯೇ ಬಿಡಬಹುದಿತ್ತು ಎಂದು. ಒಮ್ಮೆ ಅವಳ ಜಾಗದಲ್ಲಿ ನೀವು ಯೋಚಿಸಿ, ನಿಮ್ಮ ಬಾಸ್ಗೆ ಒಂದು ಗಂಟೆ ಮುಂಚೆ ಹೋಗ್ತೇನೆ ಎಂದು ಹೇಳಿ, ಇರುವ ಕೆಲಸ ಬಿಟ್ಟು ಹೊರಡುತ್ತಿದ್ರಾ? ಒಂದು ವೇಳೆ ಹೊರಟಿದ್ದೇ ಆದಲ್ಲಿ, ಟ್ರಾಫಿಕ್ನಲ್ಲಿ ಸಿಕ್ಕಿಹಾಕಿಕೊಂಡಿದ್ರೆ, ಅಲ್ಲೇ ಕಾರ್ ಬಿಟ್ಟು ನಡೆದುಕೊಂಡು ಬರ್ತಿದ್ರಾ? ಇಲ್ಲ ತಾನೆ..?
ಸೆಲ್ಫಿಶ್ ಆಗಿ
ನಿಮ್ಮ ಬಗ್ಗೆ ಯೋಚನೆ ಮಾಡಿ, ಸ್ವಲ್ಪ ಸೆಲ್ಫಿಶ್ ಆಗಿ, ಸಿಟ್ಟಿನಿಂದ, ನಿರಾಸೆಯಿಂದ ಏನಾಗ್ತಿದೆ? ಮಾನಸಿಕ ಆರೋಗ್ಯ ಹಾಳಾಗ್ತಿದೆ, ಸಿಟ್ಟಿನಲ್ಲಿ ದೇಹಕ್ಕೆ ಹಾನಿ ಮಾಡಿಕೊಂಡರೆ ಆ ನಷ್ಟವೂ ನಿಮ್ಮದೆ, ನಿಮ್ಮ ಮೇಲೂ ಸ್ವಲ್ಪ ಕರುಣೆ ಇಡಿ.
ಬುಕ್, ಪೆನ್ ಕೈಗೆ ತಗೋಳಿ
ಸರಿ, ಮಾತಿಗೆ ಮಾತು ಆಗಿ ಹೋಯ್ತು, ಸಿಕ್ಕಾಪಟ್ಟೆ ಕೋಪ, ನಿರಾಸೆ ಆಗಿದೆ, ಕಣ್ಣೀರು ಬರ್ತಿದೆ ಎದುರು ಸಿಕ್ಕರೆ ಆ ವ್ಯಕ್ತಿಗೆ ಎರಡೇಟು ಹಾಕೋವಷ್ಟು ಬೇಸರ! ಒಂದು ಬುಕ್ ಪೆನ್ ತೆಗೆದುಕೊಂಡು ನಿಮ್ಮ ಭಾವನೆಗಳ ಬಗ್ಗೆ ಬರೆಯಿರಿ, ಏನನ್ನೇ ಬರೆಯುವಾಗ ನೀವು ಯೋಚನಾಶಕ್ತಿ ಬಳಸಲಬೇಕು, ಆಗ ನಿಮ್ಮ ಯೋಚನೆಗಳು ಒಂದು ಹಂತಕ್ಕೆ ಬಂದು, ತಪ್ಪು ಸರಿ, ಸರಿಯಾಗಿ ಗೊತ್ತಾಗುತ್ತದೆ. ಇದು ಸುಮ್ಮನೆ ಹೇಳ್ತಿರೋ ಟೆಕ್ನಿಕ್ ಅಲ್ಲ, ಒಮ್ಮೆ ಟ್ರೈ ಮಾಡಿ ನೋಡಿ..
ಮೂರನೇಯವರು ಬೇಕಾ?
ಮೂರನೇ ವ್ಯಕ್ತಿ ಬಂದ್ರೂ ಒಕೆ, ಆದರೆ ತೀರಾ ಒಳಗೆ ಬಿಡೋದು ಬೇಡ, ನಿಮ್ಮ ಜಗಳ, ಮಾತುಕತೆ ಬಗ್ಗೆ ಹೇಳಿ, ಫಿಲ್ಟರ್ ಇರಲಿ. ಆ ವ್ಯಕ್ತಿ ನಿಜವಾಗಿಯೂ ನಿಮಗೆ ಒಳ್ಳೆಯದು ಮಾಡುವವರಿದ್ದರೆ ಮಾತ್ರ ಭಾವನೆಗಳನ್ನು ಹಂಚಿಕೊಳ್ಳಿ, ಅವರು ಮೂರನೇ ವ್ಯಕ್ತಿ ಆದ್ದರಿಂದ ಅವರ ಅಭಿಪ್ರಾಯ ಬೇರೆ ಇರುತ್ತದೆ. ಇದು ನಿಮಗೆ ತಪ್ಪಿನ ಅರಿವು, ಅಥವಾ ಅವರ ತಪ್ಪಾ ಎಂದು ಗುರುತಿಸೋಕೆ ಸಹಾಯ ಮಾಡುತ್ತದೆ.
ಕಸದಬುಟ್ಟಿ ಮನಸ್ಸು
ನೀನು ಹಿಂಗೆ ಮಾಡಿದ್ಯಾ? ನಿಮ್ಮ ಫ್ಯಾಮಿಲಿ ಹೀಗೆ, ನಿಮ್ಮ ಖಾಂದಾನ್ ಹೀಗೆ ಎಂದು ಜಗಳಕ್ಕೆ ಹೋಗ್ಬೇಡಿ, ನನಗೆ ಅನಿಸುತ್ತಿದೆ, ನನ್ನ ಅಭಿಪ್ರಾಯ, ನಾನು ಹೇಳೋದು ಏನು ಅಂದ್ರೆ, ನನ್ನ ಮಾತಿದು ಹೀಗೆ ನಾನು ಎನ್ನುವ ಪದಬಳಕೆ ಬೆಸ್ಟ್ ಆಪ್ಷನ್. ಸಾಕು ಇಷ್ಟೆಲ್ಲಾ ಆದಮೇಲೂ ಅದನ್ನೇ ಮನಸ್ಸಲ್ಲಿ ಇಟ್ಟುಕೊಂಡ್ರೆ ಮನಸ್ಸು ಕಸದಬುಟ್ಟಿಯಾಗುತ್ತದೆ. ಯಾರ ತಪ್ಪು ಅಥವಾ ಯಾವ ಸಂದರ್ಭದ ತಪ್ಪು ಗುರುತಿಸಿದ ಮೇಲೆ ಆ ವಿಷಯವನ್ನು ಅಲ್ಲಿಗೇ ಬಿಟ್ಟು ಬಿಡಿ, ಆವತ್ತು ಹಂಗೇ ಮಾಡಿದ್ರಿ, ಯಾವಾಗ್ಲೂ ಹಿಂಗೆ ಅನ್ನೋ ಮಾತುಗಳು ಮತ್ತೆ ಬಾರದೇ ಇರಲಿ.
ಬರೀ ನಿಮ್ಮ ಮಾತೇ ನಡೆಯಬೇಕು ಎಂಬ ಈಗೋ ಬೇಡ, ಇದರಿಂದ ಪ್ರತಿ ಸುಂದರ ಕ್ಷಣವನ್ನು ನೀವು ಕಳೆದುಕೊಳ್ಳುತ್ತೀರಿ, ಮಾತನಾಡುವ ಮುನ್ನ ನನ್ನ ಮಾತು ಅವರಿಗೆ ಹರ್ಟ್ ಆಗುತ್ತದಾ? ಪ್ರೀತಿಸುವ ವ್ಯಕ್ತಿಯ ಮನಸ್ಸಿಗೆ ನೋವು ಮಾಡೋದ್ಯಾಕೆ ಎಂದು ಸುಮ್ಮನಾಗಿ, ಸಿಟ್ಯೂಯೇಷನ್ ತಣ್ಣಗಾದ ಮೇಲೆ ನಿಮ್ಮ ನಿರೀಕ್ಷೆ ಬಗ್ಗೆ ಅವರ ನಿರೀಕ್ಷೆ ಬಗ್ಗೆ ಮುಕ್ತವಾಗಿ ಮಾತನಾಡಿ, ಮತ್ತದೇ ವಿಷಯಕ್ಕೆ ಜಗಳ ಆಗೋದು ತಪ್ಪುತ್ತದೆ!