ಹೊಸದಿಗಂತ ಡಿಜಿಟಲ್ ಡೆಸ್ಕ್:
ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ಭೂಮಿ ತಂಪಾಗಿದೆ, ಬಿಸಿಲಿನಿಂದ ಬೇಸತ್ತಿದ್ದ ಜನ ಮಳೆಯನ್ನು ಕಂಡು ಖುಷಿಯಾಗಿದ್ದಾರೆ. ಆದರೆ ಮಳೆ ಬಿದ್ದ ನಂತರದ ಮಣ್ಣಿನ ಸುವಾಸನೆ ಸ್ವಾದಿಸುವ ಭಾಗ್ಯ ಬೆಂಗಳೂರಿನ ಜನತೆಗೆ ಇಲ್ಲದಂತಾಗಿದೆ.
ಬೆಂಗಳೂರಿನ ಮೇಲೆ ಮಾತ್ರ ಮಳೆರಾಯ ಮುನಿಸಿಕೊಂಡಿದ್ದು, ಇದುವರೆಗೂ ಒಂದು ಹನಿಯೂ ಮಳೆಯಿಲ್ಲದೆ ಇಲ್ಲಿನ ಜನರು ಬಿಸಿಲಿನ ಬೇಗೆಗೆ ಬೆಂದು ಹೋಗಿದ್ದಾರೆ.
ಮಳೆಗಾಗಿ ಕಾಯುತ್ತಿರುವ ಬೆಂಗಳೂರು ಜನರ ನಿರೀಕ್ಷೆ ಮತ್ತೊಮ್ಮೆ ಹುಸಿಯಾಗಿದೆ. ಯುಗಾದಿ ನಂತರದ ಮಳೆಯ ಮುನ್ಸೂಚನೆಯಿಂದ ಉತ್ಸಾಹದಲ್ಲಿದ್ದ ನಗರ ವಾಸಿಗಳು ಮರುಣನ ಕೃಪೆಗಾಗಿ ಇನ್ನೂ ಒಂದು ವಾರ ಕಾಯಬೇಕಾಗಿದೆ.
ಭಾರತೀಯ ಹವಾಮಾನ ಇಲಾಖೆ (IMD) ಸುಮಾರು ಒಂದು ವಾರದವರೆಗೆ ಮಳೆಯ ಸಾಧ್ಯತೆಯನ್ನು ಮುಂದೂಡಿದೆ. ಶಿವಮೊಗ್ಗ, ಹಾಸನ, ಚಿಕ್ಕಮಗಳೂರು ಜಿಲ್ಲೆಗಳಲ್ಲಿ ಕಳೆದ ಕೆಲವು ದಿನಗಳಿಂದ ತುಂತುರು ಮಳೆಯಾಗಿದೆ. ಈ ಜಿಲ್ಲೆಗಳಲ್ಲಿ ಮಳೆ ಮುಂದುವರಿಯಲಿದೆ.
ಇನ್ನೂ ಬೆಂಗಳೂರಿನಲ್ಲಿ ಮುಂದಿನ 5 ದಿನಗಳ ಕಾಲ ಬಿಸಿಲಿನ ವಾತಾವರಣ ಮುಂದುವರೆಯಲಿದ್ದು, ಏಪ್ರಿಲ್ 19ರ ಬಳಿಕ ಮಳೆ ಸುರಿಯಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.