ಹೊಸದಿಗಂತ ಡಿಜಿಟಲ್ ಡೆಸ್ಕ್:
ಮಾಜಿ ಪ್ರಧಾನಿ ದೇವೇಗೌಡರ ಪತ್ನಿ ಚನ್ನಮ್ಮ ಅವರ ಅಂತ್ಯಕ್ರಿಯೆಯನ್ನು ಬೆಟ್ಟದ ರಂಗನಾಥಸ್ವಾಮಿ ತಪ್ಪಲಿನಲ್ಲಿ ನಡೆಸಲಾಗುತ್ತಿದೆ. ಎಷ್ಟು ಮನೆ, ತೋಟ, ಜಮೀನು ಇದ್ದರೂ ಈ ಜಾಗದಲ್ಲಿಯೇ ಯಾಕೆ ಅಂತ್ಯಸಂಸ್ಕಾರ ಎನ್ನುವ ಪ್ರಶ್ನೆಗೆ ಅವರ ಅಳಿಯ ಡಾ. ಮಂಜುನಾಥ್ ಉತ್ತರ ನೀಡಿದ್ದಾರೆ.
ಚೆನ್ನಮ್ಮ ಅವರು ತಮ್ಮ ಜೀವನದ ಬಹುಪಾಲು ಸಮಯವನ್ನು ಈ ಭಾಗದಲ್ಲೇ ಕಳೆದಿದ್ದರು. ಸುತ್ತಮುತ್ತಲಿನ ಗ್ರಾಮಗಳ ಜನರೊಂದಿಗೆ ಅವರಿಗೆ ಆತ್ಮೀಯ ಬಾಂಧವ್ಯವಿತ್ತು. ಈ ಕಾರಣದಿಂದ ಕುಟುಂಬ ಸದಸ್ಯರು ಹಾಗೂ ಗ್ರಾಮಸ್ಥರ ಒಮ್ಮತದೊಂದಿಗೆ ಬೆಟ್ಟದ ರಂಗನಾಥಸ್ವಾಮಿ ತಪ್ಪಲಿನಲ್ಲೇ ಅಂತ್ಯಕ್ರಿಯೆ ನಡೆಸಲು ತೀರ್ಮಾನಿಸಲಾಗಿದೆ.
ಇಂದು ಮಧ್ಯಾಹ್ನ 2 ಗಂಟೆಗೆ ಅಂತ್ಯಕ್ರಿಯೆ ನಡೆಯಲಿದ್ದು, ಅದಕ್ಕೂ ಮುನ್ನ ಮನೆಯಲ್ಲಿ ನಡೆಯಬೇಕಾದ ಎಲ್ಲಾ ಧಾರ್ಮಿಕ ವಿಧಿವಿಧಾನಗಳನ್ನು ಪೂರ್ಣಗೊಳಿಸಲಾಗುತ್ತದೆ. ಈಗಾಗಲೇ ಅಂತ್ಯಸಂಸ್ಕಾರಕ್ಕೆ ಅಗತ್ಯ ಸಿದ್ಧತೆಗಳು ಪೂರ್ಣಗೊಂಡಿದೆ ಎಂದಿದ್ದಾರೆ.
ತಮ್ಮ ಅತ್ತೆ ಚನ್ನಮ್ಮನವರನ್ನು ನೆನೆದು ಭಾವುಕರಾದ ಮಂಜುನಾಥ್ ಅವರು ನಮ್ಮ ಅತ್ತೆ ನಿಸ್ವಾರ್ಥ ಜೀವಿ. ಸರಳತೆ ಹಾಗೂ ತಾಳ್ಮೆಗೆ ಹೆಸರು ಮಾಡಿದಂತವರು. ದೇವೇಗೌಡರು ಹಾಗೂ ಅವರ ಮಧ್ಯೆ ಅತ್ಯಂತ ಪ್ರೀತಿ ಇತ್ತು. ಒಬ್ಬರನ್ನು ಬಿಟ್ಟು ಒಬ್ಬರು ಊಟ ಮಾಡುತ್ತಿರಲಿಲ್ಲ ಎಂದಿದ್ದಾರೆ.
ಒಂದು ವರ್ಷದಿಂದ ಉಸಿರಾಟದ ಸಮಸ್ಯೆ ಅನುಭವಿಸಿದ್ದರು. ಏಳು ತಿಂಗಳ ಹಿಂದೊಮ್ಮೆ ಆಸ್ಪತ್ರೆಗೆ ದಾಖಲಿಸಿ ವಾಪಾಸ್ ಕರೆದುಕೊಂಡು ಬಂದಿದ್ದೆವು. ಇದಾದ ನಂತರ ಮತ್ತೆ ಸಮಸ್ಯೆ ಕಾಣಿಸಿತ್ತು ಎಂದಿದ್ದಾರೆ. ಅತ್ತೆಯವರ ಮೇಲೆ ಆಸಿಡ್ ದಾಳಿಯಾದಾಗ ಮುಖ ನೋಡಿಕೊಳ್ಳಬಾರದೆಂದು ಕನ್ನಡಿಗೆ ಕವರ್ ಹೊದಿಸಿದ್ದೆವು. ಅದನ್ನೆಲ್ಲಾ ಅವರೇ ತೆಗೆದು ನಾನಿರುವಂತೆ ನನ್ನನ್ನು ಒಪ್ಪಿಕೊಳ್ಳುತ್ತೇನೆ ಎಂದು ಹೇಳುತ್ತಿದ್ದರು ಎಂದಿದ್ದಾರೆ.



