ಹೊಸದಿಗಂತ ಡಿಜಿಟಲ್ ಡೆಸ್ಕ್:
ದೆಹಲಿ ಹೈಕೋರ್ಟ್ ನ್ಯಾಯಮೂರ್ತಿ ಯಶವಂತ್ ವರ್ಮಾ ಅವರ ನಿವಾಸದಲ್ಲಿ ಕಂತೆ ಕಂತೆ ನೋಟುಗಳು ಪತ್ತೆಯಾಗಿ 1 ತಿಂಗಳಾದರೂ ಯಾಕೆ ಎಫ್ಐಆರ್ ಆಗಿಲ್ಲ ಎಂದು ಸುಪ್ರೀಂಕೋರ್ಟ್ ನೇಮಿಸಿದ ಮೂವರು ನ್ಯಾಯಾಧೀಶರ ಸಮಿತಿಯನ್ನು ಉಪರಾಷ್ಟ್ರಪತಿ ಜಗದೀಪ್ ಧನಕರ್ ಪ್ರಶ್ನಿಸಿದ್ದಾರೆ.
ಆರೋಪಗಳು ಬಂದಾಗ ನ್ಯಾಯಾಂಗವೂ ಸೇರಿದಂತೆ ಯಾವುದೇ ಸಂಸ್ಥೆಗಳು ಸಂವಿಧಾನ ಮತ್ತು ದೇಶದ ಕಾನೂನುಗಳಿಗಿಂತ ಮಿಗಿಲಲ್ಲ. ಹೀಗಿದ್ದಾಗ, ಪೊಲೀಸ್ ತನಿಖೆ ನಡೆಯದೇ ಇರುವುದು ದೇಶದ ಜನರಿಗೆ ಅಚ್ಚರಿ ಮೂಡಿಸಿದೆ ಎಂದು ಅವರು ಹೇಳಿದ್ದಾರೆ.
ಈ ಘಟನೆ ಯಾವುದಾದರೂ ಸಾಮಾನ್ಯ ವ್ಯಕ್ತಿಯ ಮನೆಯಲ್ಲಿ ನಡೆದಿದ್ದರೆ ಆಗ ತನಿಖೆಯು ರಾಕೆಟ್ ವೇಗದಲ್ಲಿ ಆಗುತ್ತಿತ್ತು. ಆದರೂ ಇದು ಈಗ ಎತ್ತಿನಗಾಡಿಯ ರೀತಿಯಲ್ಲೂ ನಡೆಯುತ್ತಿಲ್ಲ ಎಂದು ಆಕ್ರೋಶ ಹೊರಹಾಕಿದರು.
ಪ್ರಕರಣಕ್ಕೆ ಸಂಬಂಧಿಸಿದಂತೆ ಸುಪ್ರೀಂಕೋರ್ಟ್ ರಚಿಸಿರುವ ಮೂವರು ನ್ಯಾಯಾಧೀಶರ ಸಮಿತಿಯ ಕಾನೂನು ಮಾನ್ಯತೆಯ ಬಗ್ಗೆಯೂ ಅಪಸ್ವರ ಎತ್ತಿರುವ ಉಪ ರಾಷ್ಟ್ರಪತಿಗಳು, ಸಮಿತಿಯು ಏನು ಮಾಡುತ್ತದೆ?, ಹೆಚ್ಚೆಂದರೆ ಶಿಫಾರಸು ಮಾಡಬಹುದು. ಯಾರಿಗೆ ಶಿಫಾರಸು ಮಾಡುತ್ತದೆ. ಏತಕ್ಕಾಗಿ ಈ ಶಿಫಾರಸು. ಸಂವಿಧಾನ ಅಥವಾ ಕಾನೂನಿನ ಯಾವ ನಿಬಂಧನೆಯ ಅಡಿಯಲ್ಲಿ ಸಮಿತಿ ರಚಿಸಲಾಗಿದೆ ಎಂಬುದು ತಿಳಿಯುತ್ತಿಲ್ಲ ಎಂದರು.
ಯಾವುದೇ ಪ್ರಕರಣದ ಪ್ರಾಥಮಿಕ ತನಿಖೆ ನಡೆಸುವುದು ಕಾರ್ಯಾಂಗದ ಅಧಿಕಾರಿ ವ್ಯಾಪ್ತಿಗೆ ಬರುತ್ತದೆಯೇ ಹೊರತು, ನ್ಯಾಯಾಂಗಕ್ಕಲ್ಲ. ನ್ಯಾಯಾಧೀಶರನ್ನು ನೇಮಿಸುವ ಮತ್ತು ಕಿತ್ತುಹಾಕುವ ಅಧಿಕಾರ ಕಾರ್ಯಾಂಗಕ್ಕಿದೆ. ಹೀಗಿದ್ದಾಗ, ಸಮಿತಿಯ ವರದಿಯು ಕಾನೂನಿನ ಮಾನ್ಯತೆಗೆ ಒಳಪಡುತ್ತದೆಯೇ ಎಂದು ಪಶ್ನೆ ಮಾಡಿದ್ದಾರೆ.
ನ್ಯಾಯಾಧೀಶರ ಮನೆಯಲ್ಲಿ ಹಣ ಪತ್ತೆಯಾಗಿದೆ ಎಂದು ಕೋರ್ಟ್ ಒಪ್ಪಿಕೊಂಡಿದೆ. ಈ ಕುರಿತು ತನಿಖೆ ನಡೆಯುವುದು ಸ್ಪಷ್ಟವಾಯಿತು. ದೇಶವೇ ಗೌರವಿಸುವ ಸಂಸ್ಥೆಯ ಮೇಲೆಯೇ ಇಂಥದ್ದೊಂದು ಕಳಂಕ ಬಂದಾಗ, ಪ್ರಕರಣ ಏನಾದೀತು ಎಂದು ರಾಷ್ಟ್ರವೇ ಉಸಿರು ಬಿಗಿಹಿಡಿದಿಕೊಂಡು ಕಾಯುತ್ತಿದೆ. ವಿಚಾರಣೆ ನಡೆಯುತ್ತಿರುವುದರಿಂದ ಆತಂಕ ಉಂಟಾಗಿದೆ ಎಂದು ಅವರು ಹೇಳಿದರು.
ಸಂವಿಧಾನವು ರಾಷ್ಟ್ರಪತಿ ಮತ್ತು ರಾಜ್ಯಪಾಲರಿಗೆ ಮಾತ್ರ ಕಾನೂನಿನ ಕೆಲ ವಿನಾಯಿತಿ ನೀಡಲಾಗಿದೆ. ಉಪರಾಷ್ಟ್ರಪತಿ ಸೇರಿದಂತೆ ದೇಶದ ಯಾವುದೇ ಸಂಸ್ಥೆಯು ಕಾನೂನಿಗಿಂತ ಅತೀತವಲ್ಲ. ಯಾರ ವಿರುದ್ಧ ಬೇಕಾದರೂ, ಎಫ್ಐಆರ್ ದಾಖಲಿಸಬಹುದು. ಹಾಗಿದ್ದಾಗ, ಈ ಪ್ರಕರಣದಲ್ಲಿ ಯಾಕೆ ಪ್ರಾಥಮಿಕ ಮಾಹಿತಿ ವರದಿ ಏಕೆ ದಾಖಿಲಿಸಿಲ್ಲ ಎಂದು ದೇಶದ ಜನರಿ ಅಚ್ಚರಿ ವ್ಯಕ್ತಪಡಿಸುತ್ತಿದ್ದಾರೆ ಎಂದರು.