ಹೊಸದಿಗಂತ ವರದಿ, ದಾವಣಗೆರೆ:
ಪತಿಯೊಬ್ಬ ಅಕ್ರಮ ಸಂಬಂಧಕ್ಕೆ ಅಡ್ಡಿಯಾಗಿದ್ದ ಪತ್ನಿಯನ್ನು ಪ್ರೇಯಸಿಯೊಂದಿಗೆ ಸೇರಿಕೊಂಡು ಕೊಲೆ ಮಾಡಿ, ಮೃತದೇಹವನ್ನು ಗೋಣಿ ಚೀಲದಲ್ಲಿ ತುಂಬಿ ಕೆರೆಗೆ ಎಸೆದ ಘಟನೆ ತಾಲೂಕಿನ ಕೊಡಗನೂರು ಗ್ರಾಮದಲ್ಲಿ ತಡವಾಗಿ ಬೆಳಕಿಗೆ ಬಂದಿದೆ.
ಸಾಸಲುಹಳ್ಳ ಗ್ರಾಮದ ಕಾವ್ಯ(21 ವರ್ಷ) ಕೊಲೆಯಾದ ಪತ್ನಿ. ಚಿತ್ರದುರ್ಗ ಜಿಲ್ಲೆಯ ಹೊಳಲ್ಕೆರೆ ತಾಲ್ಲೂಕು ಕಾಗಳಗೆರೆ ಗ್ರಾಮದ ನಿವಾಸಿ ಸಚಿನ್(24) ತನ್ನ ಪ್ರೇಯಸಿಯಾದ ದಾವಣಗೆರೆ ತಾಲೂಕು ಕಡ್ಲೆಬಾಳು ಗ್ರಾಮದ ಚೈತ್ರ(21) ಎಂಬಾಕೆ ಜೊತೆ ಸೇರಿ ಕೊಲೆ ಮಾಡಿದ್ದ ಎನ್ನಲಾಗಿದೆ.
ಕಳೆದ 5 ವರ್ಷಗಳ ಹಿಂದೆ ಕಾವ್ಯ ಜೊತೆಗೆ ವಿವಾಹವಾಗಿದ್ದ ಸಚಿನ್ ಚೈತ್ರ ಎಂಬ ಯುವತಿಯೊಂದಿಗೆ ಅಕ್ರಮ ಸಂಬಂಧ ಹೊಂದಿದ್ದ. ಇದಕ್ಕೆ ಅಡ್ಡಿಯಾಗಿದ್ದ ಕಾವ್ಯಳನ್ನು ಸಚಿನ್ ಮತ್ತು ಚೈತ್ರಾ ಇಬ್ಬರೂ ಸೇರಿಕೊಂಡು ಕೊಲೆ ಮಾಡಿದ್ದಾರೆ. ನಂತರ ಗೋಣಿ ಚೀಲದಲ್ಲಿ ಕಾವ್ಯ ಮೃತದೇಹವನ್ನು ತುಂಬಿ ಕೊಡಗನೂರು ಕೆರೆಗೆ ಹಾಕಿದ್ದರು. 10 ದಿನಗಳ ಹಿಂದೆ ನಡೆದ ಕೊಲೆ ಪ್ರಕರಣ ಇದೀಗ ಬಯಲಿಗೆ ಬಂದಿದ್ದು, ಮೃತದೇಹವನ್ನು ಕೆರೆಯಿಂದ ಹೊರತೆಗೆಯಲಾಗಿದೆ. ಮಾಯಕೊಂಡ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.