ಹೊಸದಿಗಂತ ಡಿಜಿಟಲ್ ಡೆಸ್ಕ್:
2022ರಲ್ಲಿ ಬಾಲಿವುಡ್ ನ ಕೆಲವೇ ಕೆಲವು ಬ್ಲಾಕ್ಬಸ್ಟರ್ ಚಿತ್ರಗಳಲ್ಲಿ ನಿರ್ದೇಶಕ ಸಂಜಯ್ ಲೀಲಾ ಬನ್ಸಾಲಿಯವರ ʼಗಂಗೂಬಾಯಿ ಕಥೇವಾಡಿʼ ಚಿತ್ರವೂ ಒಂದು. ಮುಂಬೈನ ರೆಡ್ಲೈಟ್ ಏರಿಯಾಗಳಲ್ಲಿ ಒಂದಾದ ಕಾಮಾಠಿಪುರದಲ್ಲಿ 1960ರ ದಶಕದಲ್ಲಿ ಪ್ರಭಾವಿ ವ್ಯಕ್ತಿತ್ವ ಹೊಂದಿದ್ದ ಗಂಗೂಬಾಯಿ ಎಂಬಾಕೆಯ ಜೀವನವನ್ನಾಧಾರಿತ ಚಿತ್ರ ಇದಾಗಿದೆ. ಗಂಗೂ ಬಾಯಿಯವರ ಪಾತ್ರವನ್ನು ಆಲಿಯಾಭಟ್ ನಿರ್ವಹಿಸಿದ್ದು ತೆರೆಯ ಮೇಲೆ ಸಂಜಯ ಲೀಲಾ ಬನ್ಸಾಲಿಯವರ ಮ್ಯಾಜಿಕ್ ಗೆ ಜನ ಭರಪೂರ ಮೆಚ್ಚುಗೆ ವ್ಯಕ್ತಪಪಡಿಸಿದ್ದರು.
“ಕಾಮಾಠಿ ಪುರದಲ್ಲಿ ಎಂದಿಗೂ ಅಮಾವಾಸ್ಯೆಯಾಗುವುದಿಲ್ಲ, ಯಾಕೆಂದರೆ ಅಲ್ಲಿ ಗಂಗೂ ಇರುತ್ತಾಳೆ” ಎನ್ನುವ ಡೈಲಾಗ್ ಒಂದರಿಂದಲೇ ವೀಕ್ಷಕನ ಮನದಲ್ಲಿ ಗಂಗೂಬಾಯಿಯ ಕುರಿತಾಗಿ ಛಾಪು ಮೂಡಿಸಿ, ವೇಶ್ಯಾವಾಟಿಕೆಗೆ ನೂಕಲ್ಪಟ್ಟ ಮಹಿಳೆಯೊಬ್ಬಳು ಜೀವನ ಕಟ್ಟಿಕೊಂಡ ಬಗೆಯನ್ನು ಭಾವ ರಸಗಳ ಸಮ್ಮಿಳಿತದೊಂದಿಗೆ ಕಟ್ಟಿಕೊಡುತ್ತದೆ ಈ ಚಿತ್ರ. ಈ ವರ್ಷದ ಫೆಬ್ರವರಿಯಲ್ಲಿ ಬಿಡುಗಡೆಯಾದ ಚಿತ್ರ ಭಾರೀ ಹಿಟ್ ಆಗಿತ್ತು. ಚಿತ್ರವು ಪ್ರೇಕ್ಷಕರು ಮತ್ತು ವಿಮರ್ಶಕರಿಂದ ಸಕಾರಾತ್ಮಕ ವಿಮರ್ಶೆಗಳನ್ನು ಗಳಿಸಿತು.
ಇಷ್ಟೆಲ್ಲಾ ಜನಮೆಚ್ಚುಗೆಗೆ ಪಾತ್ರವಾದ ಈ ಚಿತ್ರ ಇದೀಗ ಸುದ್ದಿಯಲ್ಲಿರುವುದೇಕೆಂದರೆ ಇದು ಜಗತ್ತಿನ ಪ್ರಸಿದ್ಧ ಆಸ್ಕರ್ ಪ್ರಶಸ್ತಿಗೆ ನಾಮಿನೇಟ್ ಆಗಲಿದೆ ಎಂಬ ಸುದ್ದಿಗಳು ಹರಿದಾಡುತ್ತಿವೆ. ವರದಿಯೊಂದರ ಪ್ರಕಾರ ಈ ವರ್ಷ ಭಾರತದಿಂದ ಆಸ್ಕರ್ ಗೆ ನಾಮಿನೇಟ್ ಆಗುವ ಕೆಲವೇ ಚಿತ್ರಗಳ ಹೆಸರಲ್ಲಿ ಗಂಗೂಬಾಯಿ ಚಿತ್ರವೂ ಒಂದು ಎನ್ನಲಾಗಿದೆ.
ಇನ್ನು ಒಂದೆರಡು ತಿಂಗಳಲ್ಲಿ ಆಸ್ಕರ್ ಪ್ರಶಸ್ತಿ ಘೋಷಣೆಯಾಗುವ ನಿರೀಕ್ಷೆ ಇದೆ. ಈ ಹಿಂದೆ 2002ರಲ್ಲಿ, ಬನ್ಸಲಿಯವರ ಚಿತ್ರ ‘ದೇವದಾಸ್’ ಆಸ್ಕರ್ಗೆ ಭಾರತದ ಅಧಿಕೃತ ಪ್ರವೇಶವಾಗಿ ಆಯ್ಕೆಯಾಗಿತ್ತು. ಶಾರುಖ್ ಖಾನ್ ಮತ್ತು ಐಶ್ವರ್ಯ ರೈ ಚಿತ್ರದಲ್ಲಿ ಅಭಿನಯಿಸಿದ್ದರು.