ಹೊಸದಿಗಂತ ವರದಿ ಹುಬ್ಬಳ್ಳಿ:
ಕೇಂದ್ರದ ವರಿಷ್ಠರು ಬೆಳಗಾವಿಯಿಂದ ಸ್ಪರ್ಧೆಗೆ ಅವಕಾಶ ನೀಡಿದರೆ ಮಾಡುವೆ. ಈಗ ಬೆಳಗಾವಿ ಸ್ಪರ್ಧೆ ಬಗ್ಗೆ ವರಿಷ್ಠರು ನನ್ನೊಂದಿಗೆ ಚರ್ಚೆ ನಡೆಸಿದ್ದು,ಎಲ್ಲವನ್ನು ಸಮಾಲೋಚಿಸಿ ಸೂಕ್ತ ನಿರ್ಧಾರ ಕೈಗೊಳ್ಳುವೆ ಎಂದು ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ ಹೇಳಿದರು.
ಗುರುವಾರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಧಾರವಾಡ ಹಾಗೂ ಹಾವೇರಿಯಲ್ಲಿ ರ್ಸ್ಪಸಲು ಇಚ್ಛಯಿಸಿದ್ದೆ. ಈ ಬಗ್ಗೆ ಚರ್ಚೆಯೂ ಸಹ ಆಗಿತ್ತು. ಈಗ ಹಲವು ಕಾರಣಗಳಿಂದ ಅಲ್ಲಿಯ ಟಿಕೆಟ್ ಘೋಷಣೆ ಆಗಿದೆ. ಈ ಬಗ್ಗೆ ನಾನು ಪ್ರಶ್ನೆ ಮಾಡಲ್ಲ ಎಂದರು.
ಬೆಳಗಾವಿಯಲ್ಲಿ ಶೆಟ್ಟರ ಗೋಬ್ಯಾಕ್ ಬಗ್ಗೆ ಪ್ರತಿಕ್ರಿಯಿಸಿದ ಅವರು, ಬೆಳಗಾವಿಯಲ್ಲಿ ಪರಿಸ್ಥಿತಿ ಏನು ಆಗಿಲ್ಲ. ಕೆಲವು ವ್ಯಕ್ತಿಗಳು ಗೊಂದಲ ಸೃಷ್ಟಿಸಿದ್ದಾರೆ. ತುಮಕೂರನಲ್ಲಿ ವಿ. ಸೋಮಣ್ಣ ಅವರಿಗೆ ಅದೇ ಆಗಿತ್ತು. ಈಗ ವರಿಷ್ಠರು ಟಿಕೆಟ್ ನೀಡಿದ್ದಾರೆ. ಕೆಲವು ವ್ಯಕ್ತಿಗಳು ವಯಕ್ತಿಕ ಹಿತಾಸಕ್ತಿಗೆ ಮಾಡುತ್ತಿದ್ದು, ಅದಕ್ಕೆ ಆದ್ಯತೆ ನೀಡುವು ಅವಶ್ಯಕತೆ ಇಲ್ಲ. ಅಲ್ಲಿಯ ಪಕ್ಷದ ಪ್ರಮುಖರು, ಜನರ ಮನಸ್ಸಿನಲ್ಲಿ ಆ ರೀತಿ ಭಾವನೆ ಇಲ್ಲ. ಅಲ್ಲಿ ಪ್ರಮುಖರು ಸಂಪರ್ಕದಲ್ಲಿದ್ದಾರೆ ಎಂದು ತಿಳಿಸಿದರು.
ಹೈಕಮಾಂಡ್ ನಿರ್ಧಾರಕ್ಕೆ ನಾನು ಬದ್ಧನಿದ್ದೆನೆ. ಬೆಳಗಾವಿಗೆ ಹೋದರೆ ಸ್ಥಳಿಯರಿಂದ ದೂರ ಆಗಲ್ಲ. ಇಲ್ಲಿಯ ಕಾರ್ಯಕರ್ತರು ಸಹ ನನ್ನ ಸಂಪರ್ಕದಲ್ಲಿ ಇರುತ್ತಾರೆ. ಇದೆಲ್ಲವನ್ನೂ ಅರಿತು ಸೂಕ್ತ ನಿರ್ಧಾರ ಕೈಗೊಳ್ಳುವೆ ಎಂದರು.
ಜಿಲ್ಲೆಯಲ್ಲಿ ಜಗದೀಶ ಶೆಟ್ಟರ ಕುಟುಂಬ ಮೂಲೆ ಗುಂಪು ಮಾಡುತ್ತಿದ್ದಾರೆ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿ, ಇಲ್ಲಿ ಏನು ನಡೆಯುತ್ತಿದೆ ಎಲ್ಲರಿಗೂ ಗೊತ್ತಿದೆ. ಅದನ್ನು ನಾನು ಬಾಯಿ ಬಿಟ್ಟು ಹೇಳುವುದಿಲ್ಲ. ಈಗ ಅದರ ಬಗ್ಗೆ ನಾನು ಪ್ರತಿಕ್ರಿಯೆ ನೀಡಲ್ಲ. ಸೂಕ್ತ ವೇದಿಯಲ್ಲಿ ಮಾತನಾಡುವೆ ಎಂದು ಹೇಳಿದರು.