ಹೊಸದಿಗಂತ ಡಿಜಿಟಲ್ ಡೆಸ್ಕ್:
ಸಂಸದೆ ಸುಮಲತಾ ಅಂಬರೀಶ್ ಕೊನೆಗೂ ಬಿಜೆಪಿ ಸೇರಲು ನಿರ್ಧರಿಸಿದ್ದಾರೆ. ಇಂದು ಮಂಡ್ಯದಲ್ಲಿ ಬೆಂಬಲಿಗರ ಸಮಾವೇಶವನ್ನು ಉದ್ದೇಶಿಸಿ ಸುಮಲತಾ ಅವರು ತಮ್ಮ ಅವಧಿಯಲ್ಲಿನ ಸಾಧನೆಗಳ ಕುರಿತು ಮಾತನಾಡಿದರು. ಅಂತಿಮವಾಗಿ ಬಿಜೆಪಿ ಸೇರುವುದಾಗಿ ಘೋಷಿಸಿದರು.
ಕಳೆದ ಚುನಾವಣೆಯಲ್ಲಿ ಸುಮಲತಾ ಪರವಾಗಿ ಪ್ರಚಾರಕ್ಕೆ ನಿಂತಿದ್ದ, ಇಂದು ಸುಮಲತಾ ಅವರು ಬಿಜೆಪಿ ಸೇರ್ಪಡೆ ಹಂತದಲ್ಲಿ ಕೂಡ ಅವರೊಂದಿಗೆ ಇದ್ದ ದರ್ಶನ್ ಅವರು ಬಿಜೆಪಿ ಅಥವಾ ಎಚ್.ಡಿ. ಕುಮಾರಸ್ವಾಮಿ ಪರ ಮತ ಕೇಳಲಿದ್ದಾರೆಯೇ ಎಂಬ ಪ್ರಶ್ನೆಗೆ, ಸುದ್ದಿಗಾರರೊಂದಿಗೆ ಮಾತನಾಡಿದ ಸುಮಲತಾ ಅವರು, ಈ ಪ್ರಶ್ನೆಯನ್ನ ಅವರಿಗೆ ಕೇಳಬೇಕು ಎಂದು ಉತ್ತರಿಸಿದ್ದಾರೆ.
ಕಳೆದ ಚುನಾವಣೆಯಲ್ಲಿ ದರ್ಶನ್ ಮತ್ತು ಯಶ್ ಕೂಡ ನನ್ನ ಹಿಂದೆ ನಿಂತು ಸಾಕಷ್ಟು ಕೆಲಸ ಮಾಡಿದ್ದರು. ನಾನು ಈ ಬಾರಿ ಭಾಗವಹಿಸಿದ್ದರೆ ಖಂಡಿತ ಬೆಂಬಲ ನೀಡುತ್ತಿದ್ದರು. ಆದರೆ ದರ್ಶನ್ ಯಾರಿಗೆ ಬೆಂಬಲ ನೀಡುತ್ತಾರೋ ಇಲ್ಲವೋ ಎಂದು ಈಗ ಹೇಳಲು ಸಾಧ್ಯವಿಲ್ಲ. ಈ ಬಗ್ಗೆ ಅವರನ್ನೇ ಕೇಳಬೇಕು? ಎಂದಿದ್ದಾರೆ.