ಹೊಸದಿಗಂತ ಡಿಜಿಟಲ್ ಡೆಸ್ಕ್:
ತಮಿಳು ನಟ ದಳಪತಿ ವಿಜಯ್ ರಾಜಕೀಯ ರಂಗಪ್ರವೇಶ ಮಾಡಿದ ಕ್ಷಣದಿಂದಲೂ ನಟಿ ತ್ರಿಷಾ ಕೃಷ್ಣನ್ ಹೆಸರು ನಿರಂತರವಾಗಿ ಸುದ್ದಿಯಲ್ಲಿದೆ. ಇವರಿಬ್ಬರ ಆಪ್ತ ಒಡನಾಟವು ಮದುವೆ ವದಂತಿಗಳಿಂದ ಹಿಡಿದು, ತ್ರಿಷಾ ಅವರ ಸಕ್ರಿಯ ರಾಜಕೀಯ ಪ್ರವೇಶದವರೆಗೂ ಹಲವು ಊಹಾಪೋಹಗಳಿಗೆ ದಾರಿ ಮಾಡಿಕೊಟ್ಟಿದೆ.
ಎಐಎಡಿಎಂಕೆ ನಾಯಕನ ಕಟು ಲೇವಡಿ
ಈ ಬೆಳವಣಿಗೆಗಳ ಬೆನ್ನಲ್ಲೇ, ಎಐಎಡಿಎಂಕೆ ಹಿರಿಯ ಮುಖಂಡ ಹಾಗೂ ಮಾಜಿ ಸಚಿವ ಆರ್. ಬಿ. ಉದಯಕುಮಾರ್ ಅವರು ವಿಜಯ್ ಮತ್ತು ತ್ರಿಷಾ ಬಾಂಧವ್ಯವನ್ನು ಉಲ್ಲೇಖಿಸಿ ತೀವ್ರವಾಗಿ ವಾಗ್ದಾಳಿ ನಡೆಸಿದ್ದಾರೆ. ಬಹಿರಂಗ ವೇದಿಕೆಯಲ್ಲಿ ಮಾತನಾಡಿದ ಅವರು, “ಮುಖ್ಯಮಂತ್ರಿ ವಿಜಯ್ ಅವರನ್ನು ಮಧ್ಯರಾತ್ರಿಯಲ್ಲಿ ಭೇಟಿಯಾಗಿ ಕೇಕ್ ಕತ್ತರಿಸುವ ವಿಶೇಷ ಹಕ್ಕು ನಟಿ ತ್ರಿಷಾಗೆ ಮಾತ್ರ ಇದೆ. ಭವಿಷ್ಯದಲ್ಲಿ ವಿಜಯ್ ಅವರು ತ್ರಿಷಾ ಅವರನ್ನು ರಾಜ್ಯದ ಉಪಮುಖ್ಯಮಂತ್ರಿಯಾಗಿ ನೇಮಿಸಿದರೂ ಅದರಲ್ಲಿ ಅಚ್ಚರಿಯಿಲ್ಲ” ಎಂದು ವ್ಯಂಗ್ಯವಾಡಿದ್ದಾರೆ. ಈ ಮಾತುಗಳು ಕಾಲಿವುಡ್ ಹಾಗೂ ತಮಿಳುನಾಡು ರಾಜಕೀಯ ಅಂಗಳದಲ್ಲಿ ಕಾವು ಹೆಚ್ಚಿಸಿವೆ.
ಸರ್ಕಾರ ಮತ್ತು ಆಡಳಿತ ಯಂತ್ರದ ವಿರುದ್ಧ ಆರೋಪ
ಇಷ್ಟಕ್ಕೇ ನಿಲ್ಲದ ಉದಯಕುಮಾರ್, ವಿಜಯ್ ಅಭಿನಯದ ‘ಜನ ನಾಯಗನ್’ ಚಿತ್ರ ಬಿಡುಗಡೆಯಾದಾಗ ರಾಜ್ಯ ಸರ್ಕಾರ ಅಪ್ರಕಟಿತ ರಜೆ ನೀಡಿದ್ದನ್ನು ಕಟುವಾಗಿ ವಿರೋಧಿಸಿದ್ದಾರೆ. ಮುಖ್ಯಮಂತ್ರಿ, ಸಚಿವರು ಹಾಗೂ ಶಾಸಕರು ತಮ್ಮ ಅಧಿಕೃತ ಜವಾಬ್ದಾರಿಗಳನ್ನು ಬದಿಗೊತ್ತಿ ಸಿನಿಮಾ ವೀಕ್ಷಣೆಯಲ್ಲಿ ಮಗ್ನರಾಗಿದ್ದರು ಎಂದು ಅವರು ಗಂಭೀರ ಆರೋಪ ಮಾಡಿದ್ದಾರೆ.



