May 31, 2026
Sunday, May 31, 2026
spot_img

ವಿನಯ್ ಕುಲಕರ್ಣಿ ಶಾಸಕ ಸ್ಥಾನ ರದ್ದಾಗುತ್ತಾ? ಈ ಕುರಿತು ಸ್ಪೀಕರ್ ಯು.ಟಿ. ಖಾದರ್ ಹೇಳಿದ್ದೇನು?

ಹೊಸದಿಗಂತ ವರದಿ, ಮಂಗಳೂರು:

ಕೊಲೆ ಪ್ರಕರಣದಲ್ಲಿ ಜೀವಾವಧಿ ಶಿಕ್ಷೆಗೆ ಒಳಗಾಗಿರುವ ವಿನಯ್ ಕುಲಕರ್ಣಿಯ ಶಾಸಕ ಸ್ಥಾನದ ಬಗ್ಗೆ ನ್ಯಾಯಾಲಯದ ಅಧಿಕೃತ ಆದೇಶ ಪತ್ರ ಬಂದ ಬಳಿಕ ತೀರ್ಮಾನ ಕೈಗೊಳ್ಳಲಾಗುವುದು ಎಂದು ಸ್ಪೀಕರ್ ಯು.ಟಿ. ಖಾದರ್ ಹೇಳಿದರು.

ನಗರದಲ್ಲಿ ಸೋಮವಾರ ಸುದ್ದಿಗಾರರ ಜತೆ ಮಾತನಾಡಿದ ಅವರು, ಈ ಕುರಿತು ಅಧಿಕೃತವಾಗಿ ನನಗೆ ಯಾವುದೇ ಮಾಹಿತಿ ಬಂದಿಲ್ಲ. ನ್ಯಾಯಾಲಯದಿಂದ ಅಧಿಕೃತವಾಗಿ ಆದೇಶ ಪತ್ರ ಬಂದ ಬಳಿಕ ಆ ಬಗ್ಗೆ ತೀರ್ಮಾನ ಮಾಡುವುದಾಗಿ ತಿಳಿಸಿದರು.

ಈ ತೀರ್ಪಿನ ವಿರುದ್ಧ ಮೇಲ್ಮನವಿ ಸಲ್ಲಿಸಿ, ನ್ಯಾಯಾಲಯದಿಂದ ತಡೆಯಾಜ್ಞೆ ಬಂದರೆ ಶಾಸಕ ಸ್ಥಾನ ಮುಂದುವರಿಯುವ ಅವಕಾಶ ಇರುತ್ತದೆ. ಇಲ್ಲದಿದ್ದರೆ ಈಗಿನ ಕೋರ್ಟ್‌ ಆದೇಶ ದೊರೆತ ಬಳಿಕ ತೀರ್ಮಾನ ಕೈಗೊಳ್ಳುವುದಾಗಿ ಹೇಳಿದರು.

ರಾಜ್ಯ ಸಚಿವ ಸಂಪುಟ ಪುನಾರಚನೆ ಕುರಿತು ಮಾಹಿತಿ ಇಲ್ಲ. ನನಗೆ ಸಚಿವ ಸ್ಥಾನ ನೀಡುವ ಬಗ್ಗೆ ಚರ್ಚೆ ನಡೆದಿರೋದು ಗೊತ್ತಿಲ್ಲ ಎಂದು ಖಾದರ್‌ ಪ್ರತಿಕ್ರಿಯೆ ನೀಡಿದರು.

ರಾಜ್ಯದಲ್ಲಿ ಉಪಚುನಾವಣೆ ಬಳಿಕ ಮುಸ್ಲಿಂ ನಾಯಕರನ್ನು ಕಡೆಗಣಿಸುತ್ತಿರುವ ಆರೋಪದ ಕುರಿತು ಸ್ಪೀಕರ್‌ ಆಗಿ ನಾನು ಪ್ರತಿಕ್ರಿಯೆ ನೀಡಲು ಹೋಗಲ್ಲ. ಕಾಂಗ್ರೆಸ್ ಪಕ್ಷದ ನಾಯಕರು ಆ ಬಗ್ಗೆ ಮಾತನಾಡುತ್ತಾರೆ ಎಂದರು.

ಸಿಎಂ ಸ್ಥಾನಾಕಾಂಕ್ಷೆಯ ಕುರಿತು ಪ್ರತಿಕ್ರಿಯಿಸಿದ ಖಾದರ್‌, ಇನ್ನು 4 ಅವಧಿ ನನಗೆ ಪಕ್ಷ ಟಿಕೆಟ್ ಕೊಟ್ಟರೆ, ಕ್ಷೇತ್ರದ ಜನ ಗೆಲ್ಲಿಸಿದರೆ 20 ವರ್ಷಗಳ ನಂತರ ಸಿಎಂ ಸ್ಥಾನದ ಬಗ್ಗೆ ಯೋಚನೆ ಮಾಡುತ್ತೇನೆ ಎಂದು ಹೇಳಿದರು.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !