ಹೊಸದಿಗಂತ ಡಿಜಿಟಲ್ ಡೆಸ್ಕ್ :
ದೇವಾನು ದೇವತೆಗಳು ಮತ್ತು ಕರಾವಳಿಯ ಪಂಜುರ್ಲಿ ಸೇರಿದಂತೆ ಎಲ್ಲಾ ದೈವದ ಕೃಪೆ ಇರುವ ಏಕೈಕ ಪಕ್ಷ ಬಿಜೆಪಿ. ಹೀಗಾಗಿ ಎಲ್ಲಾ ಕಾರ್ಯಕರ್ತರು, ನಾಯಕರು ತಮ್ಮ ಪ್ರತಿಷ್ಠೆಯನ್ನು ಬದಿಗಿರಿಸಿ, ಜಾತಿಯ ವ್ಯಾಮೋಹಕ್ಕೆ ಒಳಗಾಗದೇ ಬಿಜೆಪಿ ಪಕ್ಷವನ್ನು ಗೆಲ್ಲಿಸಬೇಕು ಎಂದು ಬಿಜೆಪಿ ರಾಷ್ಟ್ರೀಯ ಪ್ರ.ಕಾರ್ಯದರ್ಶಿ ಸಿ.ಟಿ ರವಿ ಕಾರ್ಯಕರ್ತರಿಗೆ ಕರೆ ನೀಡಿದರು.
ಸೋಮವಾರ, ನಗರದ ಎಮ್.ಜಿ.ಎಮ್ ಮೈದಾನದಲ್ಲಿ ಜಿಲ್ಲಾ ಬೂತ್ ಕಾರ್ಯಕರ್ತರ ಸಮಾವೇಶದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಯಾವುದೇ ರಾಜಕೀಯ ಪಕ್ಷವಾಗಿರಲಿ ಅದಕ್ಕೊಂದು ನೀತಿ, ನಿಯತ್ತು ಇರಬೇಕು. ಆದರೆ ಕಾಂಗ್ರೆಸ್ ಶಾಲಾ ಮಕ್ಕಳ ಅನ್ನವನ್ನು ಕಿತ್ತುಕೊಂಡಿದ್ದಾರೆ. ಕಲ್ಲಡ್ಕ ಶಾಲೆಯ ಮಕ್ಕಳ ಅನ್ನವನ್ನು ಕಿತ್ತುಕೊಂಡು ಕೌರ್ಯ ಮರೆದಿದ್ದಾರೆ ಎಂದರು.
ಕಾರ್ಯಕರ್ತರೇ ಬಿಜೆಪಿ ಪಕ್ಷದ ಮಾಲೀಕರು. ಆದರೆ ಕಾಂಗ್ರೆಸ್, ಜೆ.ಡಿ.ಎಸ್, ಸಮಾಜವಾದಿ ಸೇರಿದಂತೆ ಇತರೆ ಪಕ್ಷಗಳು ಕುಟುಂಬಕ್ಕೆ ಸೀಮಿತವಾಗಿದೆ ಎಂದು ವ್ಯಂಗ್ಯವಾಡಿಗಿದರು.
ಡಿ.ಎನ್.ಎ ಆಧಾರಿತ ನಾಯಕತ್ವ ಬಿಜೆಪಿಯಲ್ಲಿಲ್ಲ. 1982 ರಲ್ಲಿ ಬೂತ್ ಅಧ್ಯಕ್ಷರಾಗಿದ್ದ, ಅಮಿತ್ ಷಾ ಅವರು ಪ್ರಸ್ತುತ ದೇಶದ ಗೃಹಮಂತ್ರಿಯಾಗಿದ್ದಾರೆ. 1988 ಬೂತ್ ಕಮಿಟಿ ಅಧ್ಯಕ್ಷನಾಗಿದ್ದ ನಾನು ಇಂದು ಬಿಜೆಪಿ ರಾಷ್ಟ್ರೀಯ ಪ್ರ.ಕಾರ್ಯದರ್ಶಿ ಆಗಿದ್ದೇನೆ. ಹೀಗಾಗಿ ಬಿಜೆಪಿಯಲ್ಲಿ ಕಾರ್ಯಕರ್ತರು ಬೆಳೆಯುತ್ತಾರೆ ಎಂದು ಹೇಳಿದರು
ಅನೈತಿಕ ಚಟುವಟಿಕೆಗಳಲ್ಲಿ ಭಾಗಿಯಾದ ಪಿ.ಎಫ್.ಐ, ಎಸ್.ಡಿ.ಪಿ.ಐ ಕಾರ್ಯಕರ್ತರ ಕೇಸುಗಳನ್ನು ಹಿಂಪಡೆದು ಸಮಾಜ ಒಡೆಯುವವರನ್ನು ಬೆಂಬಲಿಸಿದ್ದು ಕಾಂಗ್ರೆಸ್. ಜೆ.ಡಿ.ಎಸ್ ಗೆ ನೀತಿಯೇ ಇಲ್ಲ. ಆದರೆ ಬಿಜೆಪಿ ಮಾತ್ರ ದೇಶ ಮೊದಲು ಎಂಬ ನೀತಿಯನ್ನು ಅನುಸರಿಸುತ್ತಾ, ರಾಷ್ಟ್ರೀಯ ವಿಚಾರಧಾರೆಗಳೊಂದಿಗೆ ಪ್ರಜಾಪ್ರಭುತ್ವಕ್ಕೆ ಕೊಡುಗೆ ನೀಡುತ್ತಿದೆ. ಸಬ್ ಕಾ ಸಾಥ್, ಸಬ್ ಕಾ ವಿಕಾಸ್, ಸಬ್ ಕಾ ವಿಶ್ವಾಸ್ ಇದು ಬಿಜೆಪಿ ನೀತಿ ಎಂದರು.