ಹೊಸದಿಗಂತ ವರದಿ, ರಾಯಚೂರು :
ರಾಜ್ಯ ಸರ್ಕಾರ ಮಾಡಿದ ಗ್ಯಾರಂಟಿ ಯೋಜನೆಗಳ ಫಲಾನುಭವಿಗಳಿಗೆ ಐದು ಗ್ಯಾರಂಟಿಗಳು ಪಡೆದುದಕ್ಕೆ ಸ್ಮರಣೆ ಇರಬೇಕು. ಉಪಕಾರಗೋಸ್ಕರ ಇರಬೇಕು. ಬರುವ ಲೋಕಸಭಾ ಚುಣಾವಣೆಯಲ್ಲಿ ಪಕ್ಷದ ಅಭ್ಯರ್ಥಿಗಳನ್ನು ಆಯ್ಕೆ ಮಾಡುವ ಮೂಲಕ ಋಣವನ್ನು ತೀರಿಸಬೇಕು ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ ಹೇಳಿದರು.
ಗುರುವಾರ ನಗರದ ಮಹಾತ್ಮಾಗಾಂಧಿ ಜಿಲ್ಲಾ ಕ್ರೀಡಾಂಗಣದಲ್ಲಿ ಜಿಲ್ಲಾ ಆಡಳಿತ ಆಯೋಜಿಸಿದ್ದ ಐದು ಗ್ಯಾರಂಟಿ ಯೋಜನೆಗಳ ಫಲಾನುಭವಿಗಳ ಸಮಾವೇಶವನ್ನು ಉದ್ಘಾಟಿಸಿ ಮಾತನಾಡಿ, ಗ್ಯಾರಂಟಿಗಳ ಫಲಾನುಭವಿಗಳು ಬರುವ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳಿಗೆ ಮತ ನೀಡುವ ಮೂಲಕ ಋಣವನ್ನು ತೀರಿಸಬೇಕು ಎನ್ನುವ ಮೂಲಕ ಗ್ಯಾರಂಟಿ ಯೋಜನೆಗಳನ್ನು ಮಾಡಿರುವುದು ಜನತೆಯ ಹಿತಕ್ಕಾಗಿ ಅಲ್ಲ ಚುನಾವಣೆಯ ದೃಷ್ಠಿಗಾಗಿ ಎನ್ನುವಂತೆ ಉಪಮುಖ್ಯಮಂತ್ರಿಗಳು ಹೇಳಿದಂತಿತ್ತು.
ಬಂಗಾರಪ್ಪ ಕೆರೆಯಲ್ಲಿನ ಹೂಳು ತಗೆಯುವುದಕ್ಕೆ ಅನುದಾನ ಬೇಕಾದರೆ ಬರುವ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಯನ್ನು ಗೆಲ್ಲಿಸಿ ಲೋಕಸಭೆಯಲ್ಲಿ ಕುರುಳಿಸಬೇಕು ಎಂದು ಕಂಡೀಷನ್ ಹಾಕಿದರು.
ನಾನು ಕೊಟ್ಟ ಮಾತನ್ನು ಉಳಿಸಿಕೊಂಡಿದ್ದೇವೆ ನೀವು ನಿಮ್ಮ ಜವಾಬ್ದಾರಿಯನ್ನು ಉಳಿಸಿಕೊಳ್ಳಬೇಕು ಎಂದು ಸಾರ್ವಜನಿಕರಿಗೆ ಹೇಳುವ ಮೂಲಕ ಇದು ಜಿಲ್ಲಾಡಳಿತ ಆಯೋಜಿಸಿದ ಸರ್ಕಾರಿ ಕಾರ್ಯಕ್ರಮವಾಗದೇ ಕಾಂಗ್ರೆಸ್ ಪಕ್ಷದ ಚುನಾವಣಾ ಪ್ರಚಾರ ಕಾರ್ಯಕ್ರಮದಂತೆ ಮಾತನಾಡಿದರು ಉಪಮುಖ್ಯಮಂತ್ರಿಗಳು. ರಾಜ್ಯದಿಂದ ಟ್ಯಾಕ್ಸ್ ನೀಡಲಾಗುತ್ತಿದೆ ಆದರೆ ಅದು ಮರಳಿ ನಮಗೆ ಸಮರ್ಪಕವಾಗಿ ಬಂದಿಲ್ಲ, ನೀರು ಬಂದಿಲ್ಲ, ಸೂರು ಬಂದಿಲ್ಲ, ಅನುದಾನವೂ ಒಂದಿಲ್ಲ ನಮಗೆ ಅಚ್ಛೇ ದಿನವೂ ಒಂದಿಲ್ಲ. ರಾಜ್ಯದಲ್ಲಿ ಮೂರುವರೆ ವರ್ಷ ಅಧಿಕಾರದಲ್ಲಿದ್ದ ಬಿಜೆಪಿ ಸರ್ಕಾರ ನಮ್ಮಂತೆ ಯಾವುದೇ ಒಂದೇ ಒಂದು ಯೋಜನೆಗಳನ್ನು ಜಾರಿಗೆ ತರಲಿಲ್ಲ ಎಂದು ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದರು.
ಕೇಂದ್ರದಲ್ಲಿ ಯುಪಿಎ ಸರ್ಕಾರ ಇದ್ದ ಸಂದರ್ಭದಲ್ಲಿ ಮಲ್ಲಿಕಾರ್ಜುನ ಖರ್ಗೆ ಕಲ್ಯಾಣ ಕರ್ನಾಟಕಕ್ಕೆ ೩೭೧ಜೆ ಜಾರಿಗೆ ತರುವ ಮೂಲಕ ಈ ಭಾಗದ ಅಭಿವೃದ್ಧಿ, ಇಲ್ಲಿನ ಯುವ ಜನಾಂಗಕ್ಕೆ ಶಿಕ್ಷಣ ಉದ್ಯೋಗಕ್ಕೆ ಅನುಕೂಲವಾಗುವಂತೆ ಮಾಡಿದ್ದಾರೆ ಎಂದರು.