ಹೊಸದಿಗಂತ ಡಿಜಿಟಲ್ ಡೆಸ್ಕ್:
ಸಿನಿಮಾ ರಂಗದ ಮೇಲೆ ರಾಜಕೀಯದ ಕರಿನೆರಳು ಹೇಗೆ ಬೀರುತ್ತದೆ ಎಂಬುದಕ್ಕೆ ತಮಿಳು ನಟ ದಳಪತಿ ವಿಜಯ್ ಅಭಿನಯದ ‘ಜನ ನಾಯಗನ್’ ಸಿನಿಮಾ ಈಗ ಸ್ಪಷ್ಟ ಉದಾಹರಣೆಯಾಗಿ ನಿಂತಿದೆ. ಹಿಂಸಾಚಾರದಿಂದ ಕೂಡಿದ ಸಿನಿಮಾಗಳು ಸುಲಭವಾಗಿ ಸೆನ್ಸಾರ್ ಮಂಡಳಿಯಿಂದ ಅನುಮತಿ ಪಡೆಯುತ್ತಿದ್ದರೆ, ಜನಪರ ಕಾಳಜಿಯಿರುವ ‘ಜನ ನಾಯಗನ್’ ಚಿತ್ರವನ್ನು ತಿಂಗಳುಗಳಿಂದ ಕ್ಷುಲ್ಲಕ ಕಾರಣ ನೀಡಿ ತಡೆಹಿಡಿಯಲಾಗಿದೆ ಎಂಬ ಆರೋಪ ಕೇಳಿಬರುತ್ತಿದೆ.
ದಳಪತಿ ವಿಜಯ್ ಅವರ ಕೊನೆಯ ಸಿನಿಮಾ ಎನ್ನಲಾದ ‘ಜನ ನಾಯಗನ್’, ಅವರ ರಾಜಕೀಯ ಜೀವನಕ್ಕೆ ದೊಡ್ಡ ಮೈಲೇಜ್ ನೀಡಬಹುದು ಎಂಬ ಭೀತಿಯಿಂದ ರಾಜಕೀಯ ಪ್ರಭಾವ ಬಳಸಿ ಬಿಡುಗಡೆಗೆ ತಡೆ ಒಡ್ಡಲಾಗಿದೆ ಎನ್ನಲಾಗುತ್ತಿದೆ. ಈ ಬೆಳವಣಿಗೆಯಿಂದ ಬೇಸತ್ತಿರುವ ನಿರ್ಮಾಣ ಸಂಸ್ಥೆ ಕೆವಿಎನ್, ಸದ್ಯಕ್ಕೆ ಈ ಚಿತ್ರದ ಮೇಲಿನ ಆಸೆಯನ್ನೇ ಕೈಬಿಟ್ಟಂತೆ ಕಾಣುತ್ತಿದೆ.
ತಮಿಳುನಾಡಿನಲ್ಲಿ ವಿಧಾನಸಭೆ ಚುನಾವಣೆ ಘೋಷಣೆಯಾಗಿರುವುದರಿಂದ ಮೇ 6ರವರೆಗೆ ಚುನಾವಣಾ ನೀತಿ ಸಂಹಿತೆ ಜಾರಿಯಲ್ಲಿರುತ್ತದೆ.
ಒಂದೊಮ್ಮೆ ಫಲಿತಾಂಶದ ನಂತರ ಸಿನಿಮಾ ಬಿಡುಗಡೆಯಾಗಿ, ವಿಜಯ್ ಅವರ ಪಕ್ಷಕ್ಕೆ ಹಿನ್ನಡೆಯಾದರೆ ಅದು ಚಿತ್ರದ ಕಲೆಕ್ಷನ್ ಮೇಲೆ ಪರಿಣಾಮ ಬೀರಬಹುದು. ಹೀಗಾಗಿ, ಏಪ್ರಿಲ್ 23ರ ಮತದಾನ ಮುಗಿದ ತಕ್ಷಣವೇ ಸಿನಿಮಾ ಬಿಡುಗಡೆ ಮಾಡುವ ಆಲೋಚನೆಯಲ್ಲಿ ಕೆವಿಎನ್ ಸಂಸ್ಥೆ ಇದೆ.
‘ಜನ ನಾಯಗನ್’ ಚಿತ್ರದ ಸುತ್ತಲಿನ ವಿವಾದಗಳಿಂದ ದಣಿದಿರುವ ಕೆವಿಎನ್ ಪ್ರೊಡಕ್ಷನ್ಸ್, ಈಗ ತನ್ನ ಸಂಪೂರ್ಣ ಗಮನವನ್ನು ಯಶ್ ಅಭಿನಯದ ‘ಟಾಕ್ಸಿಕ್’ ಸಿನಿಮಾ ಕಡೆಗೆ ಹರಿಸಿದೆ. ಜೂನ್ 4ರಂದು ಬಿಡುಗಡೆಯಾಗಲಿರುವ ‘ಟಾಕ್ಸಿಕ್’, ‘ಜನ ನಾಯಗನ್’ಗಿಂತಲೂ ದೊಡ್ಡ ಮಟ್ಟದ ಬ್ಲಾಕ್ ಬಸ್ಟರ್ ಆಗುವ ಎಲ್ಲ ಲಕ್ಷಣಗಳನ್ನು ಹೊಂದಿದೆ. ಹೀಗಾಗಿ, ವಿಜಯ್ ಸಿನಿಮಾವನ್ನು ಆದಷ್ಟು ಬೇಗ ಮುಗಿಸಿ, ‘ಟಾಕ್ಸಿಕ್’ ಚಿತ್ರಕ್ಕೆ ಭರ್ಜರಿ ಪ್ರಚಾರ ನೀಡಿ ಅದ್ಧೂರಿಯಾಗಿ ತೆರೆಗೆ ತರಲು ಚಿತ್ರತಂಡ ಸಜ್ಜಾಗಿದೆ.



