ಟೀಂ ಇಂಡಿಯಾ 3ನೇ ಕ್ರಮಾಂಕದಲ್ಲಿ ಶುಭ್ಮನ್ ಗಿಲ್‌ ಕಣಕ್ಕಿಳಿಯಲಿ:‌ ಮಾಜಿ ಆಟಗಾರರ ಅಭಿಪ್ರಾಯ

ಹೊಸದಗಂತ ಡಿಜಿಟಲ್‌ ಡೆಸ್ಕ್
ಟೀಂ ಇಂಡಿಯಾ ಜಿಂಬಾಬ್ವೆ ವಿರುದ್ಧದ ಏಕದಿನ ಸರಣಿಯನ್ನಾಡಲು ಹರಾರೆಯಲ್ಲಿ ಬೀಡುಬಿಟ್ಟಿದೆ. ಏಷ್ಯಾಕಪ್‌ ಹಾಗೂ ಟಿ.20 ವಿಶ್ವಕಪ್‌ ಗೆ  ಮುನ್ನ ಅಗತ್ಯ ತಯಾರಿ ನಡೆಸಲು ಪ್ರಮುಖ ಆಟಗಾರರಿಗೆ ಈ ಸರಣಿ ವೇದಿಕೆಯಾಗಿದೆ. ಮೂರು ಪಂದ್ಯಗಳ ಈ ಏಕದಿನ ಸರಣಿಯು ಗುರುವಾರದಿಂದ ಆರಂಭಗೊಳ್ಳಲಿದೆ. ಗಾಯದಿಂದ ಸಂಪೂರ್ಣ ಗುಣಮುಖರಾಗಿ ತಂಡಕ್ಕೆ ಮರಳಿರುವ ಕೆ.ಎಲ್‌ ರಾಹುಲ್‌ ಅವರದು ಶಿಖರ್ ಧವನ್‌ ಜೊತೆಗೆ ಇನ್ನಿಂಗ್ಸ್‌ ಆರಂಭಿಸುವುದು ಖಚಿತ. ಹೀಗಾದಲ್ಲಿ ವೆಸ್ಟ್ ಇಂಡೀಸ್‌ ವಿರುದ್ಧದ ಏಕದಿನ ಸರಣಿಯಲ್ಲಿ ಮಿಂಚಿದ್ದ ಶುಭ್ಮನ್‌ ಗಿಲ್‌ ಬೆಂಚ್‌ ಕಾಯಿಸುವುದು ಅನಿವಾರ್ಯ. ಆದರೆ, ಶುಭ್ಮನ್‌ ರನ್ನು ತಂಡದಿಂದ ಹೊರಗಿಡುವುದು ಸೂಕ್ತವಲ್ಲ, ಅವರನ್ನು 3ನೇ ಕ್ರಮಾಂಕದಲ್ಲಿ ಆಡಿಬೇಕು ಎಂದು ಕೆಲ ಮಾಜಿ ಆಟಗಾರರು ಅಭಿಪ್ರಾಯಪಟ್ಟಿದ್ದಾರೆ.
ಮಾಜಿ ಕ್ರಿಕೆಟಿಗ ಹಾಗೂ ಭಾರತದ ಆಯ್ಕೆ ಸಮಿತಿಯ ಮಾಜಿ ಮುಖ್ಯಸ್ಥ ದೇವಾಂಗ್‌ ಗಾಂಧಿ ಇಂತಹದ್ದೊಂದು ಸಲಹೆ ನೀಡಿದ್ದು, ಮತ್ತೋರ್ವ ಕ್ರಿಕೆಟಿಗ ದೀಪ್‌ ದಾಸ್ವಗುಪ್ತಾ ಈ ಸಲಹೆಗೆ ಸಹಮತ ವ್ಯಕ್ತಪಡಿಸಿದ್ದಾರೆ. ವೆಸ್ಟ್‌ ಇಂಡೀಸ್‌ ವಿರುದ್ಧದ ಸರಣಿಯ ಮೂರು ಪಂದ್ಯಗಳಲ್ಲಿ ಕ್ರಮವಾಗಿ 64, 43 ಮತ್ತು 98 ರನ್‌ಗಳನ್ನು ಗಳಿಸಿ ‘ಪ್ಲೇಯರ್ ಆಫ್ ದಿ ಸೀರೀಸ್’ ಪ್ರಶಸ್ತಿ ಗೆದ್ದಿದ್ದ ಶುಭ್ಮನ್‌ ಗಿಲ್‌ ಗೆ ಮತ್ತಷ್ಟು ಅವಕಾಶಗಳ ಅಗತ್ಯವಿದೆ. ಖಾಯಂ ಆರಂಭಿಕ ರಾಹುಲ್‌ನ ಪುನರಾಗಮನವು ಯುವ ಆಟಗಾರ ಗಿಲ್‌ರನ್ನು ಹೊರಗಿಡಲು ಕಾರಣವಾಗಬಾರದು. ಆಟಗಾರರು ಎಲ್ಲಾ ಸ್ಲಾಟ್‌ ನಲ್ಲಿ ಆಡಲು ಸಿದ್ಧರಾಗಿರಬೇಕು. ಈ ಸರಣಿಯಲ್ಲಿ ಶುಭ್‌ಮನ್ ನಂ. 3ನೇ ಸ್ಥಾನದಲ್ಲಿ ಆಡಿ ಅನುಭವ ಪಡೆಯಲಿ ಎಂದು ದೇವಾಂಗ್ ಗಾಂಧಿ ತಮ್ಮ ದೃಷ್ಟಿಕೋನವನ್ನು ಹೇಳಿದ್ದಾರೆ.
ಕಾಮೆಂಟೇಟರ್ ಆಗಿರುವ ದೀಪ್ ದಾಸ್‌ಗುಪ್ತಾ ಈ ವಿಚಾರದ ಬಗ್ಗೆ ಸಹಮತ ವ್ಯಕ್ತಪಡಿಸಿದ್ದು, ಮುಂದಿನ 2023ರ ಏಕದಿನ ವಿಶ್ವಕಪ್‌ ಗೆ ಶುಭ್‌ಮಾನ್ ಆರಂಭಿಕ ಆಟಗಾರನಾಗಿ ಬೆಳೆಯುತ್ತಿದ್ದಾರೆ. 2021 ರಲ್ಲಿ ಇಂಗ್ಲೆಂಡ್ ನಲ್ಲಿ ನಡೆದ 50-ಓವರ್‌ಗಳ ವಿಶ್ವಕಪ್‌ ನಲ್ಲಿ ರಾಹುಲ್‌ರನ್ನು ಆರಂಭಿಕ ಆಟಗಾರನಾಗಿ ನೋಡುವುದಕ್ಕಿಂತ ಮಧ್ಯಮ ಕ್ರಮಾಂಕದ ಬ್ಯಾಟ್ಸ್‌ ಮನ್‌ ಆಗಿ ಪರಿಗಣಿಸಲಾಗಿತ್ತು. ರೋಹಿತ್ ಶರ್ಮಾ ಮತ್ತು ಧವನ್ ಇಬ್ಬರೂ ಫಿಟ್‌ ಇದ್ದರೆ ರಾಹುಲ್ ಮಧ್ಯಮ ಕ್ರಮಾಂಕದಲ್ಲಿ ಆಡಬೇಕಾಗುತ್ತದೆ. ನಂ.3 ಎಂಬುದು ಟಾಪ್ ಆರ್ಡರ್ ಸ್ಥಾನವೇ ಆಗಿದೆ. ಕೆಲವೊಮ್ಮೆ ಇನ್ನಿಂಗ್ಸ್‌ನ ಎರಡನೇ ಎಸೆತದಲ್ಲಿಯೇ ಕ್ರೀಸ್‌ ಗೆ ಬರಬೇಕಾಗಬಹುದು. ಯಾವ ಆಟಗಾರನಿಗೆ ಯಾವ ಸ್ಥಾನ ನಿಗದಿಯಾಗಲಿದೆ ಎಂಬುದನ್ನು ಹೇಳುವುದು ಕಷ್ಟ. ಗಿಲ್‌ ಈಗಲೇ ಬೇರೆ ಬೇರೆ ಕ್ರಮಾಂಕದಲ್ಲಿ ಕಾಣಿಸಿಕೊಳುವ ಮೂಲಕ 2023 ರ ವಿಶ್ವಕಪ್‌ಗೆ ಸಿದ್ಧರಾಗಬೇಕು ಎಂದಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!