ಹೊಸ ದಿಗಂತ ವರದಿ, ಮೈಸೂರು:
ಕೆಲಸ ಕೊಟ್ಟವನನ್ನೇ ಕೊಂದು ಲಕ್ಷಾಂತರ ರೂ. ಮೌಲ್ಯದ ಬೆಳ್ಳಿ ಆಭರಣಗಳೊಂದಿಗೆ ಎಸ್ಕೇಪ್ ಆಗಿದ್ದ ಹಂತಕನನ್ನ ಮೈಸೂರಿನ ಲಷ್ಕರ್ ಠಾಣಾ ಪೊಲೀಸರು ಬಂಧಿಸಿದ್ದಾರೆ. ಅರ್ಜುನ್ ಕುಮಾರ್ (28) ಬಂಧಿತ ಆರೋಪಿ. ಗೋವಿಂದ(30) ಕೊಲೆಯಾದ ದುರ್ದೈವಿ.
ಕೊಲೆಯಾದ ಗೋವಿಂದ ಹಾಗೂ ಆರೋಪಿ ಅರ್ಜುನ್ ಕುಮಾರ್ ಇಬ್ಬರೂ ರಾಜಾಸ್ಥಾನದವರು. ಮೈಸೂರಿನ ಸುಮತಿನಾಥ ಜೈನಮಂದಿರಕ್ಕೆ ಸಂಬoಧಪಟ್ಟoತೆ ಬೆಳ್ಳಿ ಕೆಲಸ ಮಾಡಲು ಗೋವಿಂದ ಮೈಸೂರಿಗೆ ಬಂದಿದ್ದಾರೆ.
ಗೋವಿoದ ತಮ್ಮ ಸಹಾಯಕ್ಕಾಗಿ ರಾಜಾಸ್ಥಾನದ ಪೊಮಾವ್ ಗ್ರಾಮದ ಅರ್ಜುನ್ ಕುಮಾರ್ನನ್ನೂ ಕರೆತಂದಿರುತ್ತಾರೆ. ದೇವಸ್ಥಾನದ ಕೆಲಸಕ್ಕಾಗಿ ಮುಖ್ಯಸ್ಥರಾದ ಬೇರುಮಲ್ ಜೈನ್ 14 ಕೆ.ಜಿ.ಬೆಳ್ಳಿ ಕೊಟ್ಟಿದ್ದಾರೆ. ಹಳ್ಳದಕೇರಿಯ ಬಳಿ ಉಳಿದುಕೊಂಡಿದ್ದ ಇಬ್ಬರೂ ಬೆಳ್ಳಿ ಕೆಲಸದಲ್ಲಿ ನಿರತರಾಗಿದ್ದರು. ಏಪ್ರಿಲ್ 27 ರ ಬೆಳಿಗ್ಗೆ ಗೋವಿಂದ ಮೃತಪಟ್ಟಿದ್ದಾರೆ. ರಕ್ತದ ಮಡುವಿನಲ್ಲಿ ಗೋವಿಂದನ ಶವ ಪತ್ತೆಯಾಗಿದೆ.ಗೋವಿಂದನ ತಲೆ ಮೇಲೆ ಫ್ಯಾನ್ ಬಿದ್ದಿರುವಂತೆ ಸನ್ನಿವೇಶ ಸೃಷ್ಟಿಸಲಾಗಿತ್ತು. ಈ ಬಗ್ಗೆ ಪ್ರಕರಣವನ್ನ ದಾಖಲಿಸಿಕೊಂಡ ಲಷ್ಕರ್ ಠಾಣೆಯ ಇನ್ ಸ್ಪೆಕ್ಟರ್ ಸಂತೋಷ್, ನಾಪತ್ತೆಯಾಗಿದ್ದ ಗೋವಿಂದ್ ಜೊತೆ ಕೆಲಸ ಮಾಡುತ್ತಿದ್ದ ಅರ್ಜುನ್ ಕುಮಾರ್ಗಾಗಿ ಶೋಧ ಕಾರ್ಯ ನಡೆಸಿದರು.
ಆರೋಪಿಯ ಜಾಡು ಹಿಡಿದ ಪೊಲೀಸರಿಗೆ ರಾಜಾಸ್ಥಾನ್ ನಲ್ಲಿರುವ ಮಾಹಿತಿ ಲಭ್ಯವಾಗಿದೆ. ರಚನೆಗೊಂಡಿದ್ದ ಪೊಲೀಸರ ತಂಡ ಇಡೀ ತಂಡ ರಾಜಾಸ್ಥಾನ್ ಗೆ ತೆರಳಿ ಅರ್ಜುನ್ ಕುಮಾರ್ ನ ಸೆರೆ ಹಿಡಿಯುವಲ್ಲಿ ಯಶಸ್ವಿಯಾಗಿದೆ. ಆರೋಪಿಯಿಂದ 8 ಲಕ್ಷ ಮೌಲ್ಯದ 12 ಕೆ.ಜಿ.ಬೆಳ್ಳಿ ಗಟ್ಟಿಗಳನ್ನ ವಶಪಡಿಸಿಕೊಳ್ಳಲಾಗಿದೆ.