ಹೊಸದಿಗಂತ ವರದಿ ವಿಜಯಪುರ:
ನಮ್ಮ ಪ್ರಧಾನಿ ನರೇಂದ್ರ ಮೋದಿಯವರ ಕಾರ್ಯಗಳಿಗೆ ಇಡೀ ಜಗತ್ತೇ ಮೆಚ್ಚುಗೆ ವ್ಯಕ್ತಪಡಿಸಿದೆ. ಅನೇಕ ರಾಷ್ಟ್ರಗಳು ಮೋದಿಯವರನ್ನು ಮಾಡಲ್ ಮಾಡಿದ್ದಾರೆ ಎಂದು ಶಾಸಕ ಬಸನಗೌಡ ಪಾಟೀಲ ಯತ್ನಾಳ ಹೇಳಿದರು.
ಪ್ರಧಾನಿ ಮೋದಿ ಅವರು ದೇಶ ದಿವಾಳಿ ಮಾಡಿದ್ದಾರೆ ಎಂದು ಸಂತೋಷ ಲಾಡ್ ಹೇಳಿಕೆ ವಿಚಾರ ಕುರಿತು ನಗರದಲ್ಲಿ ಸುದ್ದಿಗಾರರಿಗೆ ಪ್ರತಿಕ್ರಿಯಿಸಿದ ಅವರು, ಸಂತೋಷ ಲಾಡ್ ಅವರೇ ಬಳ್ಳಾರಿ ದಿವಾಳಿ ಮಾಡಿದ್ದು. ಎಲ್ಲ ಗಣಿಗಾರಿಕೆ ಮಾಡಿ ಬಳ್ಳಾರಿ ಸತ್ಯಾನಾಶ ಮಾಡಿದ್ದು ಸಂತೋಷ ಲಾಡ್ ಎಂದು ಖಾರವಾಗಿ ನುಡಿದರು.
ಜಿ20 ಸಭೆಯಲ್ಲಿ ಅನೇಕರು ಭಾರತೀಯ ಸಂಸ್ಕೃತಿಯನ್ನು ಒಪ್ಪಿಕೊಂಡಿದ್ದಾರೆ. ಇಂತಹ ಸಂತೋಷ ಲಾಡ್ ನಂತವರು ಬಳ್ಳಾರಿಗೆ ಸೀಮಿತವಿದ್ದವರು. ಇಂತವರಿಗೆ ಮೋದಿ ಅವರ ಬಗ್ಗೆ ಮಾತನಾಡುವ ಬಗ್ಗೆ ನೈತಿಕತೆ ಇಲ್ಲ ಎಂದರು.
ಭಾರತೀಯ ಜನತಾ ಪಾರ್ಟಿ, ಜೆಡಿಎಸ್ ನೊಂದಿಗೆ ಹೊಂದಾಣಿಕೆ ವಿಚಾರ ಕುರಿತು ಪ್ರತಿಕ್ರಿಯಿಸಿ, ಜೆಡಿಎಸ್ ಹೊಂದಾಣಿಕೆಗೆ ಸ್ವಾಗತ ಎಂದ ಅವರು, ಈ ಹಿಂದೆ ಮುಸ್ಲಿಂರು ಎಷ್ಟು ಜನ ನಿಖಿಲ್ ಕುಮಾರಸ್ವಾಮಿ ಅವರಿಗೆ ಮತ ಹಾಕಿದ್ದರು. ಹಾಗಿದ್ದರೆ ನಿಖಿಲ್ ಕುಮಾರಸ್ವಾಮಿ ಯಾಕೆ ಸೋಲುತ್ತಿದ್ದರು ಎಂದು ಪ್ರಶ್ನಿಸಿದರು.
ಕುಮಾರಸ್ವಾಮಿ ಅವರಿಗೂ ದೆವೇಗೌಡರಿಗೂ ಮುಸ್ಲಿಂಮರು ಮತ ಹಾಕಿಲ್ಲ. ಮುಸ್ಲಿಂಮರು ಪಕ್ಷಬಿಟ್ಟು ಬೇಕಾದರೆ ಹೋಗಲಿ. ಬಿಜೆಪಿ ಜೊತೆ ಜೆಡಿಎಸ್ ಹೊಂದಾಣಿಕೆ ಸ್ವಾಗತಾರ್ಹ ಎಂದರು.
ಮುಂದಿನ ದಿನದಲ್ಲಿ ಹಳೇ ಮೈಸೂರು ಭಾಗದಲ್ಲಿ ಕುಮಾರಸ್ವಾಮಿ ನಾಯಕತ್ವ ವಹಿಸುತ್ತಾರೆ. ಈ ಭಾಗದಲ್ಲಿ ನಮ್ಮ ಪಕ್ಷ ಸದೃಢವಾಗಿದೆ. ಮುಸ್ಲಿಂ ಲೀಡರ್ ಗಳ ಮತ ನಮಗೆ ಬೇಕಾಗಿಲ್ಲ, ಅವರು ತಮ್ಮ ಮತವನ್ನು ಅಲ್ಲೇ ಕಾಂಗ್ರೆಸ್ ಗೆ ಹಾಕೊಂಡು ಕೂಡಲಿ ಎಂದರು. ಅಲ್ಲದೆ ವಿಜಯದಶಮಿ ಬಳಿಕ ಎಷ್ಟು ಸೀಟುಗಳಿಗೆ ಹೊಂದಾಣಿಕೆ ಆಗಿದೆ ಎಂಬುದು ಗೊತ್ತಾಗಲಿದೆ ಎಂದು ಹೇಳಿದರು.