ಹೊಸದಿಗಂತ ಡಿಜಿಟಲ್ ಡೆಸ್ಕ್:
ವಿಶ್ವ ಆರೋಗ್ಯ ದಿನದ ಅಂಗವಾಗಿ ರೋಟರಿ ಬದಿಯಡ್ಕ ಇದರ ವತಿಯಿಂದ ಆರೋಗ್ಯಕ್ಕಾಗಿ ನಡಿಗೆ ಎಂಬ ಧ್ಯೇಯದೊಂದಿಗೆ ಬೆಳಗ್ಗಿನ ಜಾವ ಒಂದು ಗಂಟೆಯ ನಡಿಗೆ ಕಾರ್ಯಕ್ರಮ ಆಯೋಜಿಸಲಾಯಿತು.
ಬದಿಯಡ್ಕ ನವಜೀವನ ಶಾಲಾ ಅಂಗಳದಲ್ಲಿ ಬದಿಯಡ್ಕ ಗ್ರಾಮಪಂಚಾಯಿತಿ ಅಧ್ಯಕ್ಷೆ ಶಾಂತಾ ಬಿ. ಉದ್ಘಾಟಿಸಿ ಮಾತನಾಡುತ್ತಾ ಉತ್ತಮ ಆರೋಗ್ಯಕ್ಕೆ ವ್ಯಾಯಾಮ ಅತೀ ಅಗತ್ಯ. ನಿತ್ಯ ನಡೆಯುವುದರಿಂದ ದೇಹವು ಸಮಸ್ಥಿತಿಗೆ ಬರಲು ಸಾಧ್ಯವಿದೆ ಎಂದರು.
ರೋಟರಿ ಬದಿಯಡ್ಕ ಘಟಕದ ಅಧ್ಯಕ್ಷ ರಾಧಾಕೃಷ್ಣ ಪೈ ಅಧ್ಯಕ್ಷತೆ ವಹಿಸಿದ್ದರು.
ಪೊಲೀಸ್ ಠಾಣಾಧಿಕಾರಿ ವಿನೋದ್ ಕುಮಾರ್ ಧ್ವಜ ಹಸ್ತಾಂತರಿಸಿ ಮಾತನಾಡುತ್ತಾ ಬೆಳಗಿನ ಜಾವ ಇಷ್ಟೊಂದು ಮಂದಿ ಇಲ್ಲಿ ಸೇರಿರುವುದು ಜನರಿಗೆ ಆರೋಗ್ಯದ ಬಗ್ಗೆ ಇರುವ ಕಾಳಜಿಯನ್ನು ಎತ್ತಿತೋರಿಸುತ್ತದೆ. ಜನಜಾಗೃತಿಯನ್ನು ಮೂಡಿಸುವಲ್ಲಿ ಇಂತಹ ಕಾರ್ಯಕ್ರಮಗಳು ನೆರವಾಗುವುದು ಎಂದರು. ಕೇರಳ ವ್ಯಾಪಾರಿ ವ್ಯವಸಾಯಿ ಏಕೋಪನ ಸಮಿತಿಯ ಬದಿಯಡ್ಕ ಘಟಕದ ಅಧ್ಯಕ್ಷ ಕುಂಜಾರು ಮುಹಮ್ಮದ್ ಹಾಜಿ ಮಾತನಾಡಿದರು. ಸಂತೋಷ್ ಕುಮಾರ್ ಪ್ರಾಸ್ತಾವಿಕ ಮಾತುಗಳನ್ನಾಡಿ ಸ್ವಾಗತಿಸಿದರು.
ನಂತರ ಪಾಲ್ಗೊಂಡ ಎಲ್ಲರೂ ನಡೆದುಕೊಂಡು ಬದಿಯಡ್ಕ ಪೇಟೆಯನ್ನು ಸುತ್ತಿ ನವಜೀವನ ಶಾಲೆಗೆ ತಲುಪಿದರು. ನವಜೀವನ ಶಾಲೆಯ ಎಸ್.ಪಿ.ಸಿ, ಎನ್.ಸಿ.ಸಿ., ರೆಡ್ಕ್ರೋಸ್ ಮತ್ತು ಸ್ಕೌಟ್ & ಗೈಡ್ ವಿದ್ಯಾರ್ಥಿಗಳು, ಸಮಾಜದ ವಿವಿಧ ಗಣ್ಯರು, ಹಿರಿಯರು, ಮಹಿಳೆಯರು ಅತ್ಯುತ್ಸಾಹದಲ್ಲಿ ಪಾಲ್ಗೊಂಡಿದ್ದರು. ಬದಿಯಡ್ಕ ರೋಟರಿ ಸದಸ್ಯರ ನೇತೃತ್ವದಲ್ಲಿ ನಡೆದ ಕಾರ್ಯಕ್ರಮ ಜನಮೆಚ್ಚುಗೆಯನ್ನು ಗಳಿಸಿತು.