ಹೊಸದಿಗಂತ ವರದಿ ಕಾಸರಗೋಡು:
ಭಾರತೀಯ ಜನತಾ ಪಕ್ಷದ ವತಿಯಿಂದ ಕಾಸರಗೋಡು ಜಿಲ್ಲೆಯ ವಿವಿಧೆಡೆ ಮಂಗಳವಾರ ವಿಶ್ವ ಯೋಗ ದಿನವನ್ನು ಹಮ್ಮಿಕೊಳ್ಳಲಾಯಿತು. ಅದರಂತೆ ಮಂಗಲ್ಪಾಡಿ ಪಂಚಾಯತ್ ಮಟ್ಟದ ಕಾರ್ಯಕ್ರಮವು ಪ್ರತಾಪನಗರ ಶ್ರೀ ಗಣೇಶ ಮಂದಿರ ಸಭಾಂಗಣದಲ್ಲಿ ಜರಗಿತು.
ಕಾರ್ಯಕ್ರಮವನ್ನು ಬಿಜೆಪಿ ಕುಂಬಳೆ ಮಂಡಲ ಸಮಿತಿಯ ಪ್ರಧಾನ ಕಾರ್ಯದರ್ಶಿ ವಸಂತಕುಮಾರ್ ಮಯ್ಯ ಉದ್ಘಾಟಿಸಿದರು. ನಂತರ ಯೋಗ ಗುರು ಪ್ರವೀಣ್ ಪ್ರತಾಪನಗರ ಅವರು ಯೋಗದ ಬಗ್ಗೆ ವಿವರಿಸಿ ಯೋಗ ಕಾರ್ಯಕ್ರಮವನ್ನು ನಡೆಸಿಕೊಟ್ಟರು.
ಸೀತಾಂಗೋಳಿಯಲ್ಲಿ ಸಾಮೂಹಿಕ ಯೋಗ ದಿನ ಕಾರ್ಯಕ್ರಮ
ಅಂತಾರಾಷ್ಟ್ರೀಯ ಯೋಗ ದಿನಾಚರಣೆಯ ಭಾಗವಾಗಿ ಸಾಮೂಹಿಕ ಯೋಗ ಕಾರ್ಯಕ್ರಮವು ಬಿಜೆಪಿ ಪುತ್ತಿಗೆ ಪಂಚಾಯತ್ ಸಮಿತಿಯ ವತಿಯಿಂದ ಸೀತಾಂಗೋಳಿ ಶ್ರೀ ದೇವಿ ಭಜನಾ ಮಂದಿರದಲ್ಲಿ ನೆರವೇರಿತು. ಬಿಜೆಪಿ ಕೇರಳ ರಾಜ್ಯ ಸಮಿತಿ ಸದಸ್ಯ ಕೋಳಾರು ಸತೀಶ್ಚಂದ್ರ ಭಂಡಾರಿ ಕಾರ್ಯಕ್ರಮವನ್ನು ಉದ್ಘಾಟಿಸಿದರು.
ಪಕ್ಷದ ಕಾಸರಗೋಡು ಜಿಲ್ಲಾ ಸಮಿತಿ ಸದಸ್ಯ ಜಯಂತ ಪಾಟಾಳಿ ಅಧ್ಯಕ್ಷತೆ ವಹಿಸಿದ್ದರು.
ಯೋಗ ಶಿಕ್ಷಕರಾಗಿ ದಿವಾಕರ ಆಚಾರ್ಯ ಮತ್ತು ರಮೇಶ್ ಚೌಕಾರು ಪಾಲ್ಗೊಂಡಿದ್ದರು. ಅಪಾರ ಸಂಖ್ಯೆಯ ಕಾರ್ಯಕರ್ತರು ಭಾಗವಹಿಸಿದ್ದರು.