ಹೊಸದಿಗಂತ ಡಿಜಿಟಲ್ ಡೆಸ್ಕ್:
ನವರಾತ್ರಿ ಎಂಟನೇ ದಿನ ದೇವಿ ಮಹಾಗೌರಿಯನ್ನು ಪೂಜಿಸಲಾಗುತ್ತದೆ. ಗೌರಿಯ ವಯಸ್ಸು ಸದಾ ಹದಿನಾರು ಆಗಿರುತ್ತದೆ. ಗೌರಿಯು ಗಿರಿಗಳ ಪುತ್ರಿಯಾಗಿದ್ದು, ಈಕೆ ಹಸನ್ಮುಖಿ.
ಶ್ವೇತ ವಸ್ತ್ರಧಾರಿಣಿಯಾಗ ಗೌರಿಯು ಎತ್ತಿನ ಮೇಲೆ ಕುಳಿತಿರುತ್ತಾಳೆ. ಈಕೆಗೆ ನಾಲ್ಕು ಕೈಗಳು, ಒಂದು ಕೈಯಲ್ಲಿ ಢಮರು, ಇನ್ನೊಂದು ಕೈಯಲ್ಲಿ ತ್ರಿಶೂಲ ಮತ್ತೊಂದು ಕೈಯಲ್ಲಿ ಭಕ್ತರಿಗೆ ಆಶೀರ್ವಾದ ನೀಡುವ ಭಂಗಿ ಇದೆ.
ಪಾರ್ವತಿ ದೇವಿಯು ಮನುಷ್ಯರ ಅವಾತಾರ ಎತ್ತಿ ಭೂಮಿಯಲ್ಲಿ ಜನ್ಮ ತಾಳಿದ್ದಳು. ಈಕೆಯ ಗುರಿ ಶಿವನನ್ನು ಪಡೆಯುವುದು. ನಾರದ ಮಹರ್ಷಿಗಳ ಸಲಹೆಯ ಮೇರೆಗೆ ಸುದೀರ್ಘ ತಪಸ್ಸು ಮಾಡುತ್ತಾಳೆ. ಅನ್ನಾಹಾರ, ನೀರು ತ್ಯಜಿಸಿ ದೀರ್ಘ ತಪಸ್ಸಿಗೆ ಕೂರುತ್ತಾಳೆ. ಮೈಗೆ ಧೂಳು ಮೆತ್ತಿಕೊಂಡು, ಮೈತುಂಬಾ ಬೆಳ್ಳಿಗಳು ಮೆತ್ತಿಕೊಂಡವು. ಸೂರ್ಯನ ಶಾಖಕ್ಕೆ ದೇಹ ಬೆಂದುಹೋಯ್ತು. ಆದರೂ ಆಕೆ ಸಾವಿರಾರು ವರ್ಷಗಳ ಕಾಲ ಶಿವನಿಗಾಗಿ ಕಾದು ಕುಳಿತಳು.
ಆಕೆಯ ಭಕ್ತಿಗೆ ಶಿವ ಮೆಚ್ಚಿ ಪ್ರತ್ಯಕ್ಷನಾದ ಪವಿತ್ರ ಗಂಗಾಜಲವನ್ನು ಆಕೆಯ ಮೇಲೆ ಪ್ರೋಕ್ಷಣೆ ಮಾಡಿ ಆಕೆಯ ಮುಖದಲ್ಲಿ ಮೊದಲಿಗಿಂತ ತೇಜಸ್ಸು ಬಂದಿತು. ಸ್ಫಟಿಕದಂತೆ ಆಕೆಯ ಮುಖವು ಹೊಳೆಯುತ್ತಿದ್ದು, ಚಂದ್ರನಂಥ ಪ್ರಶಾಂತತೆಯೂ ಕಾಣುತ್ತಿತ್ತು. ಇದೀಗ ಆಕೆ ಮಹಾಗೌರಿಯಾಗಿ ಜನ್ಮ ಎತ್ತಿದಳು. ಆಕೆಯನ್ನು ಶಿವ ವರಿಸಿದ.
ಮಹಾಗೌರಿಯು ರಾಹುವಿನ ಅಧಿಪತಿಯಾಗಿದ್ದಾಳೆ. ರಾಹುವಿನ ಪೀಡೆಯಿಂದ ಆಗುವ ಅಹಿತಕರ ಘಟನೆಗಳನ್ನು ತಪ್ಪಿಸಲು ಆಕೆ ತನ್ನ ಭಕ್ತರನ್ನು ಆಶೀರ್ವಾದಿಸುತ್ತಾಳೆ. ಅಧ್ಯಾತ್ಮದ ಲಾಭಗಳೂ ಇಲ್ಲಿವೆ.ಮನಸ್ಸಿನಿಂದ ದುಃಖವನ್ನು ದೂರ ಮಾಡಿ ನೆಮ್ಮದಿಯನ್ನು ನೀಡುತ್ತಾಳೆ.
ಪೂಜಿಸುವ ರೀತಿ
ದೇವಿಗೆ ರಾತ್ರಿ ಮಲ್ಲಿಗೆಯಿಂದ ಪೂಜೆ ಮಾಡಲಾಗುತ್ತದೆ. ಶುದ್ಧಮನಸ್ಸಿನಿಂದ ಪೂಜಿಸಿ ಮೊದಲು ಗಣಪತಿಗೆ ಪ್ರಾರ್ಥನೆ ಮಾಡಬೇಕು. ತಾಯಿಗೆ ಗುಲಾಬಿ ಬಣ್ಣ ಇಷ್ಟ. ಇದೇ ವರ್ಣದ ಹೂವುಗಳನ್ನು ಅರ್ಪಿಸಿ ಪೂಜೆ ಮಾಡಿ.