ಹೊಸದಿಗಂತ ಡಿಜಿಟಲ್ ಡೆಸ್ಕ್:
ಭಾರತೀಯ ಕುಸ್ತಿ ಫೆಡರೇಷನ್ ಅಧ್ಯಕ್ಷ ಬ್ರಿಜ್ಭೂಷಣ್ ಶರಣ್ ಸಿಂಗ್ ವಿರುದ್ಧ ಕುಸ್ತಿಪಟುಗಳು ನಡೆಸುತ್ತಿರುವ ಪ್ರತಿಭಟನೆ ದಿನೇ ದಿನೇ ವಿವಿಧ ರೂಪಪಡೆದುಕೊಳ್ಳುತ್ತಿದೆ.
ಇದೀಗ ಈ ಕುರಿತಂತೆ ಪ್ರತಿಕ್ರಿಯೆ ನೀಡಿರುವ ಕೇಂದ್ರ ಕ್ರೀಡಾಸಚಿವ ಅನುರಾಗ್ ಠಾಕೂರ್, ಕುಸ್ತಿಪಟುಗಳ ಪ್ರತಿಭಟನೆಯನ್ನು ಕೇಂದ್ರವು ಸೂಕ್ಷ್ಮವಾಗಿ ನಿಭಾಯಿಸುತ್ತಿದೆ ಎಂದು ಹೇಳಿದ್ದಾರೆ.
ಮುಂಬೈಗೆ ಭೇಟಿ ನೀಡಿ ಮಾಧ್ಯಮದವರನ್ನು ಉದ್ದೇಶಿಸಿ ಮಾತನಾಡಿದ ಠಾಕೂರ್, ಕುಸ್ತಿಪಟುಗಳ ಬೇಡಿಕೆಯಂತೆಯೇ ಸರ್ಕಾರವು ಆರೋಪಿಯ ವಿರುದ್ದ ತನಿಖೆ ನಡೆಸಲು ಕಮಿಟಿಯೊಂದನ್ನು ರಚಿಸಿದೆ. ಸದ್ಯ ತನಿಖೆ ಜಾರಿಯಲ್ಲಿದೆ ಎಂದಿದ್ದಾರೆ.
ಸರ್ಕಾರವು ಕುಸ್ತಿಪಟುಗಳ ಪ್ರತಿಭಟನೆ ವಿಚಾರವನ್ನು ಅತ್ಯಂತ ಸೂಕ್ಷ್ಮವಾಗಿ ನಿರ್ವಹಿಸುತ್ತಿದೆ. ಕುಸ್ತಿಪಟುಗಳ ಆರೋಪಿಯ ವಿರುದ್ದ ಎಫ್ಐಆರ್ ದಾಖಲಿಸಬೇಕು ಎಂದು ಕೋರಿದ್ದರು, ಅದರಂತೆ ಡೆಲ್ಲಿ ಪೊಲೀಸರು ಎಫ್ಐಆರ್ ಕೂಡಾ ದಾಖಲಿಸಿದ್ದಾರೆ ಎಂದು ಕ್ರೀಡಾ ಸಚಿವ ಅನುರಾಗ್ ಠಾಕೂರ್ ಹೇಳಿದ್ದಾರೆ.
ಮ್ಯಾಜಿಸ್ಟ್ರೇಟ್ ಕೋರ್ಟ್ ಸಂಪರ್ಕಿಸಲು ಕುಸ್ತಿಪಟುಗಳಿಗೆ ಸುಪ್ರೀಂ ಕೋರ್ಟ್ ಕೂಡಾ ನಿರ್ದೇಶನ ಮಾಡಿದೆ ಎಂದು ಅವರು ಹೇಳಿದ್ದಾರೆ.
ಬ್ರಿಜ್ಭೂಷಣ್ ವಿರುದ್ಧ 4 ತಿಂಗಳ ಹಿಂದೆಯೇ ಗಂಭೀರ ಆರೋಪಗಳನ್ನು ಹೊರಿಸಿದ್ದ ಕುಸ್ತಿಪಟುಗಳು, ಏ.23ರಿಂದ ಜಂತರ್ಮಂತರ್ನಲ್ಲಿ ಧರಣಿ ಆರಂಭಿಸಿ ಹೋರಾಟ ತೀವ್ರಗೊಳಿಸಿದ್ದರು. ಈ ನಡುವೆ ತಿಂಗಳ ಹಿಂದೆಯೇ ಬ್ರಿಜ್ಭೂಷಣ್ ವಿರುದ್ಧ ಪೋಕ್ಸೋ ಸೇರಿದಂತೆ 2 ಎಫ್ಐಆರ್ ದಾಖಲಿಸಿ ದೆಹಲಿ ಪೊಲೀಸರು ವಿಚಾರಣೆ ಆರಂಭಿಸಿದ್ದರು. ದೂರು ನೀಡಿದ್ದ ಅಪ್ರಾಪ್ತೆಯರ ಹೇಳಿಕೆಗಳನ್ನೂ ದಾಖಲಿಸಲಾಗಿತ್ತು.