ಏ. 22ಕ್ಕೆ ಕಲಬುರಗಿಯಲ್ಲಿ ʼಪರ್ವʼ ಮಹಾ ರಂಗಪ್ರಯೋಗ ಪ್ರದರ್ಶನ

ಹೊಸದಿಗಂತ ವರದಿ, ಕಲಬುರಗಿ
ಬೆಂಗಳೂರು-ಮೈಸೂರಿನಲ್ಲಿ ಪ್ರದರ್ಶನಗೊಂಡು ಜನಮನ್ನಣೆ ಪಡೆದಿರುವ ಮೈಸೂರು ರಂಗಾಯಣ ನಿರ್ಮಾಣದ “ಪರ್ವ” ಮಹಾ ರಂಗಪ್ರಯೋಗದ ಪ್ರದರ್ಶನ ಬರುವ ಏಪ್ರಿಲ್ 22 ರಂದು ಸಂಜೆ 4 ಗಂಟೆಗೆ ಕಲಬುರಗಿ ನಗರದ ಡಾ.ಎಸ್.ಎಂ.ಪಂಡಿತ್ ರಂಗಮಂದಿರದಲ್ಲಿ ನಡೆಯಲಿದೆ ಎಂದು ಮೈಸೂರು ರಂಗಾಯಣದ ನಿರ್ದೇಶಕ ಅಡ್ಡಂಡ ಸಿ. ಕಾರ್ಯಪ್ಪ ಹೇಳಿದರು.
ಗುರುವಾರ ಕಲಬುರಗಿ ರಂಗಾಯಣದಲ್ಲಿ ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, ಖ್ಯಾತ ಬರಹಗಾರ ಡಾ.ಎಸ್.ಎಲ್.ಭೈರಪ್ಪನವರ ಮಹಾಭಾರತವನ್ನು ಆಧಾರವಾಗಿಟ್ಟುಕೊಂಡು ರಚಿತವಾಗಿರುವ ಕಾದಂಬರಿ “ಪರ್ವ” ವನ್ನು ರಂಗರೂಪಿಗೊಳಿಸಲು ಯೋಚಿಸಿ ಈ ನಾಟಕ ತಯಾರಿಸಲಾಗಿದೆ ಎಂದರು.
600 ಪುಟಗಳ “ಪರ್ವ” ಮೇರು ಕೃತಿಗೆ ಯಾವುದೇ ಲೋಪವಾಗದಂತೆ ಅಷ್ಟೆ ಗಟ್ಟಿಯಾಗಿ ವಸ್ತುನಿಷ್ಠವಾಗಿ ಆಧುನಿಕ ರಂಗಪರಿಕಲ್ಪನೆಗೆ ಹೊಸ ಆಯಾಮ ಕೊಡುವ ನಿಟ್ಟಿನಲ್ಲಿ ಖ್ಯಾತ ರಂಗ ನಿರ್ದೇಶಕ ಪ್ರಕಾಶ ಬೆಳವಾಡಿ ಅವರು ಕೋವಿಡ್ ಸಂದರ್ಭದಲ್ಲಿ 3 ತಿಂಗಳ ಕಾಲ ಪರಿಶ್ರಮ ಪಟ್ಟು ರಂಗಪಠ್ಯ ರೂಪಿಸಿ, ಈ ಮಹಾ ರಂಗಪ್ರಯೋಗವನ್ನು ನಿರ್ದೇಶಿಸಿದ್ದಾರೆ. ನೀನಾಸಂ ಮತ್ತು ರಂಗಾಯಣದ 35 ಡಿಪ್ಲೋಮಾ ಪದವಿಯ ಕಲಾವಿದರು ಮತ್ತು 15 ತಾಂತ್ರಿಕ ಸಿಬ್ಬಂದಿಗಳು 6 ತಿಂಗಳ ಕಾಲ ಈ ನಾಟಕಕ್ಕೆ ತಾಲೀಮು ನಡೆಸಿದ್ದಾರೆ. ಈಗಾಗಲೆ ಈ ರಂಗಪ್ರಯೋಗ ಮೈಸೂರಿನಲ್ಲಿ 18 ಮತ್ತು ಬೆಂಗಳೂರಿನಲ್ಲಿ ಎರಡು ಬಾರಿ ಪ್ರದರ್ಶನ ಕಂಡು ಜನಮನ್ನಣೆ ಪಡೆದಿದೆ ಎಂದು ಅಡ್ಡಂಡ ಸಿ. ಕಾರ್ಯಪ್ಪ ತಿಳಿಸಿದರು.
ಕನ್ನಡ ಕಾಯಕ ವರ್ಷದ ಸಂದರ್ಭದಲ್ಲಿ “ಪರ್ವ” ನಾಟಕವನ್ನು ಎಲ್ಲೆಡೆ ಪ್ರದರ್ಶಿಸಿ ರಂಗಭೂಮಿಯನ್ನು ಮತ್ತಷ್ಟು ಎತ್ತರಕ್ಕೆ ಕೊಂಡಯ್ಯಬೇಕೆಂಬ ಒತ್ತಾಸೆಯಿಂದ ಮೊದಲ ಹಂತವಾಗಿ ಏಪ್ರಿಲ್ ಮತ್ತು ಮೇ ಮಾಹೆಯಲ್ಲಿ ರಾಜ್ಯದ ದಾವಣಗೆರೆ, ಧಾರವಾಡ, ಬೆಳಗಾವಿ, ವಿಜಯಪುರ ಜಾಗೂ ಕಲಬುರಗಿಯಲ್ಲಿ ನಾಟಕದ ಪ್ರದರ್ಶನ ಆಯೋಜಿಸಿದೆ. ಇದಲ್ಲದೆ ಭಾರತದ ರಂಗಭೂಮಿಯಲ್ಲಿಯೂ “ಪರ್ವ” ಮಹಾರಂಗ ಪ್ರಯೋಗದ ಪರಿಚಯಕ್ಕೆ ವೇದಿಕೆ ಸಿದ್ಧಗೊಂಡಿದ್ದು, ಜೂನ್ ಮಾಹೆಯಲ್ಲಿ ಮಹಾರಾಷ್ಟ್ರದ ಮುಂಬೈ, ನಾಗಪೂರ, ಮಧ್ಯಪ್ರದೇಶದ ಭೂಪಾಲ, ಚಂಡೀಗಡ್ ಹಾಗೂ ರಾಜಧಾನಿ ದೆಹಲಿಯಲ್ಲಿ ಪ್ರದರ್ಶನಕ್ಕೆ ತಯಾರಿ ನಡೆಸಲಾಗಿದೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಕಲಬುರಗಿ ರಂಗಾಯಣದ ನಿರ್ದೇಶಕ ಪ್ರಭಾಕರ ಜೋಷಿ, ಆಡಳಿತಾಧಿಕಾರಿ ಜಗದೀಶ್ವರಿ ಅ. ನಾಸಿ, ಕನ್ನಡ ಮತ್ತು ಸಂಸ್ಕøತಿ ಇಲಾಖೆಯ ಜಂಟಿ ನಿರ್ದೇಶಕ ಕೆ.ಎಚ್.ಚೆನ್ನೂರ, ಸಹಾಯಕ ನಿರ್ದೇಶಕ ದತ್ತಪ್ಪ ಸಾಗನೂರು ಇದ್ದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!