ಹೊಸದಿಗಂತ ವರದಿ,ಬೆಂಗಳೂರು:
ಕಳೆದ ಮೂರು ವರ್ಷಗಳಿಂದ ಕಾಯುತ್ತಿರುವ ತಕ್ಷಶಿಲಾ ಬಗ್ಗೆ ಪುಸ್ತಕ ಬರೆಯುವ ಮಹಾದಾಸೆ ನನ್ನದು ಆದರೆ ಪಾಕಿಸ್ತಾನಕ್ಕೆ ಹೋಗಲು ನನಗೆ ವೀಸಾ ದೊರೆಯುತಿಲ್ಲ ಎಂಬ ಬೇಸರವಿದೆ ಎಂದು ಕೃಷಿ ವಿಜ್ಞಾನಿ, ಲೇಖಕ ಡಾ. ಕೆ.ಎನ್. ಗಣೇಶಯ್ಯ ಹೇಳಿದರು.
ಶನಿವಾರ ಕೆಂಪೇಗೌಡ ನಗರದ ರಾಷ್ಟೋತ್ಥಾನ ಪರಿಷತ್ನ ಕೇಶವಶಿಲ್ಪ ಸಭಾಂಗಣದಲ್ಲಿ ಆಯೋಜಿಸಿದ್ದ ಮಾತುಕತೆ ಸಂವಾದ ಕಾರ್ಯಕ್ರಮದಲ್ಲಿ ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡರು. ನಾನು 200ಕ್ಕೂ ಹೆಚ್ಚು ಸಂಶೋಧನಾ ಪ್ರಬಂಧಗಳನ್ನು ಹಲವು ಸಂಶೋಧನಕೃತಿಗಳನ್ನು ರಚಿಸಿದ್ದು, ನನ್ನ ಮೊದಲ ಕಾದಂಬರಿ ಬರೆಯಲು 12 ವರ್ಷ ತೆಗೆದುಕೊಂಡೆ. ಯಾವುದೇ ಕೆಲಸ ಯಶಸ್ವಿಗಳಿಸಲು ಮೊದಲು ಕುಟುಂಬದ ಸಹಕಾರವಿಬೇಕು. ಅದರಂತೆ ನನ್ನ ಮಡದಿ, ಮಗಳು ನನ್ನ ಬರವಣಿಗೆಗೆ ಪ್ರೇರೇಪಣೆಯಾಗಿದ್ದಾರೆ. ಬರವಣಿಗೆಗೆ ಓದುಗರ ಸ್ಪಂದನೆ ಬೇಕು, ಆಗ ಮಾತ್ರ ಬರವಣಿಗೆ ಮುಂದುವರಿಸಲು ಸಾಧ್ಯ ಎಂದು ಹೇಳಿದರು.
ನನ್ನ ಕಾದಂಬರಿಯಲ್ಲಿ ಚಿತ್ರಗಳ ಸಹಿತ ಕಾದಂಬರಿ ಅರಿಯಲು ಸಹಾಯವಾಗುವ ರೀತಿ ಹೊಸ ಹೊಸ ಗ್ರಾಫಿಕ್ಸ್ಗಳನ್ನು ಪ್ರಯೋಗ ಮಾಡಿದೆ. ಇದು ಓದುಗರಿಗೆ ಓದಲು ಪ್ರೇರೇಪಣೆಗೊಳಿಸಿತು ಹಾಗೂ ಮೆಚ್ಚುಗೆಗೂ ಕಾರಣವಾಯಿತು ಎಂದರು.
ಮುಂದಿನ ಪೀಳಿಗೆಯಲ್ಲಿ ಈಗಾಗಲೇ ಪ್ರಾರಂಭಗೊಂಡಿರುವ ಡಿಜಿಟಲ್ ಪುಸ್ತಕಗಳು ಬರಬಹುದು ಆದರೆ, ಯಾವುದೇ ತಂತ್ರಜ್ಞಾನ ಬಂದರೂ ಈಗಿನ ಕಾಲಘಟ್ಟದಲ್ಲಿ ಪುಸ್ತಕ ಓದುಗರ ಸಂಖ್ಯೆ ಯಾವುದೇ ಕಾರಣಕ್ಕೂ ಕಡಿಮೆಯಾಗುವುದಿಲ್ಲ ಎನ್ನುವ ದೃಢ ವಿಶ್ವಾಸವಿದೆ. ಇಂತಹ ಡಿಜಿಟಲ್ ಯುಗದಲ್ಲೂ ಪುಸ್ತಕದ ಸುವಾಸನೆಯನ್ನು ಹುಡುಕುತ್ತಾ ಒಳ್ಳೆ ಒಳ್ಳೆ ಪುಸ್ತಕ, ಕಾದಂಬರಿಗಳನ್ನು ಓದುವ ಮಜವೇ ಬೇರೆ. ಪುಸ್ತಕವನ್ನು ಸ್ಪರ್ಶಿಸಿ ಓದುವ ಉಲ್ಲಾಸವೆ ಬೇರೆ. ಮುಂದಿನ ಪೀಳಿಗೆ ಕೂಡ ಇದೇ ಮಾದರಿಯನ್ನು ಉಳಿಸಿ ಬೆಳೆಸಿಕೊಂಡು ಹೋಗಲಿ ಎಂದು ಅಭಿಪ್ರಾಯಪಟ್ಟರು.
ನಾನೊಬ್ಬ ಕೃಷಿ ವಿಜ್ಞಾನಿಯಾದರೂ, ನಾನು ಭಾವ ಜೀವಿಯಾಗಿದ್ದೇನೆ. ಉದಾಹರಣೆಗೆ ಪದ್ಮಪಾಣಿ ಕಾದಂಬರಿಯಲ್ಲಿ ಹೆಣ್ಣಿನ ಆಂತರಿಕ ನೋವನ್ನು ಅರಿತು ಬರೆದಿದ್ದೇನೆ. ಭಾವನೆಗಳಿಲ್ಲದ ಬರಹ ನಿರರ್ಥಕ ಎಂದು ತಿಳಿಸಿದರು. ಮತ್ತೊಂದು ಕಾದಂಬರಿಯಾದ ಚಿತಾದಂತದಲ್ಲಿ ಒಂದು ಹೆಣ್ಣು ತನ್ನ ಯುಕ್ತಿಯಿಂದ ಹೇಗೆ ಕೆಲಸ ಮಾಡುತ್ತಾಳೆ ಎನ್ನುವ ಸಾಹಸವನ್ನು ಚಿತ್ರಿಸಿದ್ದೇನೆ. ಅದನ್ನು ಓದಿದ ಒಬ್ಬಾತ ಆತ್ಮಹತ್ಯೆ ಮಾಡಿಕೊಳ್ಳುವ ನಿರ್ಣಯ ಕೈಬಿಟ್ಟಿದ್ದಾಗಿ ಪತ್ರದ ಮೂಲಕ ತಿಳಿಸಿದ್ದಾನೆ. ಮತ್ತೊಬ್ಬ ನಾನು ಬರೆದ ಪುಸ್ತಕ ಓದುತ್ತಾ ಒಬ್ಬ ಓದುಗರ ಮಗ ಕನ್ನಡವನ್ನೇ ಕಲಿತ ಎಂದು ಬರೆದಿದ್ದಾರೆ. ಇದೆಲ್ಲಾ ನನಗೆ ದೊರಕಿದ ಸೌಭಾಗ್ಯ ಎಂದು ಸಂತಸ ವ್ಯಕ್ತಪಡಿಸಿದರು.