ಜನರಿಗೆ ಎಟಕುವಂತೆ ಬರೆಯುವುದು ಲೇಖಕರ ಯಶಸ್ಸು: ಡಾ. ಟಿ.ಆರ್. ಅನಂತರಾಮು

ಹೊಸದಿಗಂತ ಡಿಜಿಟಲ್‌ ಡೆಸ್ಕ್:

ಬೆಂಗಳೂರು: ಕಾಲ ಬದಲಾದಂತೆ ತಂತ್ರಜ್ಞಾನವನ್ನು ಸಮರ್ಥವಾಗಿ ಬಳಸುವಲ್ಲಿ ಆಸಕ್ತರಾಗಬೇಕು. ಭಾಷೆಯನ್ನು ಬಲಗೊಳಿಸಿ ಉಳಿಸುವಲ್ಲಿ ಆಧುನಿಕ ವಿಜ್ಞಾನ-ತಂತ್ರಜ್ಞಾನ ಅಗತ್ಯ ಎಂದು ಹಿರಿಯ ಭೂ ವಿಜ್ಞಾನಿ, ವಿಜ್ಞಾನ ಲೇಖಕ ಡಾ. ಟಿ.ಆರ್. ಅನಂತರಾಮು ಅವರು ತಿಳಿಸಿದರು.

ಬೆಂಗಳೂರಿನ ರಾಷ್ಟ್ರೋತ್ಥಾನ ಪರಿಷತ್‌ನ ಸಾಹಿತ್ಯ ವಿಭಾಗದ ‘ಕೇಶವಶಿಲ್ಪ’ ಸಭಾಂಗಣದಲ್ಲಿ ಆಯೋಜಿಸಿರುವ ಒಂದು ತಿಂಗಳ ಕನ್ನಡ ಪುಸ್ತಕ ಪ್ರದರ್ಶನ ಮತ್ತು ಮಾರಾಟದ ‘3ನೆಯ ಕನ್ನಡ ಪುಸ್ತಕ ಹಬ್ಬ’ದ ಅಂಗವಾಗಿ ಲೇಖಕ, ಸಂಶೋಧಕ, ಶ್ರೀ ಕಲ್ಗುಂಡಿ ನವೀನ್ ಅವರು ನಡೆಸಿದ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದರು.

ಕನ್ನಡದಲ್ಲಿ ವಿಜ್ಞಾನ ಬರವಣಿಗೆಗಳನ್ನು ಸವಾಲುಗಳ ನಡುವೆಯೂ ಬಳಸಿಕೊಳ್ಳಲು ಸಾಕಷ್ಟು ಅವಕಾಶಗಳಿವೆ. ಸಾಹಿತ್ಯ ಜನಮಾನಸದಲ್ಲಿ ಆಹ್ಲಾದಕರವಾಗಿ ಉಳಿಯುವ ಮಾಧ್ಯಮವಾದರೆ, ವಿಜ್ಞಾನವು ಬೌದ್ಧಿಕ ಅರಿವನ್ನು ವಿಸ್ತರಿಸುತ್ತದೆ. ಇವೆರಡೂ ಸಮ್ಮಿಳಿತಗೊಂಡಾಗ ಪರಿಪೂರ್ಣತೆ, ಜ್ಞಾನದ ಹೆಮ್ಮರವಾಗಿ ಬೆಳವಣಿಗೆಗೆ ಕಾರಣವಾಗುತ್ತದೆ ಎಂದವರು ತಿಳಿಸಿದರು.

ಜನಸಾಮಾನ್ಯರಿಗೆ ಕನ್ನಡ ಭಾಷೆಯಲ್ಲಿ ವಿಜ್ಞಾನದ ಅರಿವನ್ನು ತಲುಪುವಲ್ಲಿ ಇಂದಿಗೂ ಒಂದಷ್ಟು ಕೊರತೆಗಳಿದ್ದು, ಸಾಹಿತ್ಯ ಭಾಷೆಯನ್ನು ಬಳಸುವ ಮೂಲಕ, ಜನರಿಗೆ ಸುಲಭ ಅರ್ಥೈಸುವಿಕೆಗೆ ಸಾಧ್ಯವಾಗುವುದು. ಜನರಿಗೆ ಎಟುಕುವಂತೆ ಬರೆದಾಗ ಲೇಖಕ ಯಶಸ್ವಿಯಾಗುತ್ತಾನೆ. ಈ ಹಿನ್ನೆಲೆಯಲ್ಲೇ ತಮ್ಮ122ರಷ್ಟು ವಿಜ್ಞಾನ ಬರಹಗಳು ಮೂಡಿಬರುವಲ್ಲಿ ಕಾರಣವಾಯಿತೆಂದು ಅವರು ತಿಳಿಸಿದರು.

ಲೇಖಕ ಓದುಗನನ್ನು ಒಳಕ್ಕೆಳೆದುಕೊಳ್ಳಲು ಯಶಸ್ವಿಯಾದಾಗ ಕೃತಿ ಗೆಲ್ಲುತ್ತದೆ. ಅನೇಕ ಶೈಲಿಗಳನ್ನು ಬಳಸುವ ಮೂಲಕ ಇದು ಸಾಧ್ಯವಾಗುವುದು, 1917ರಲ್ಲಿ ಕನ್ನಡದ ಮೊದಲ ವಿಜ್ಞಾನ ಪತ್ರಿಕೆ ಹುಟ್ಟಿಕೊಂಡು, ಬಳಿಕ ವಿಶ್ವಕೋಶ ರಚಿಸುವಂತಹ ಮಟ್ಟದವರೆಗೂ ಭಾಷಾಂತರ ಪ್ರಕ್ರಿಯೆ ಜ್ಞಾನದ ಹಂಚುವಿಕೆಯಲ್ಲಿ ಸುಧೀರ್ಘ ಇತಿಹಾಸ ಹೊಂದಿದೆ. ಡಾ. ಶಿವರಾಮ ಕಾರಂತರ ಬಾಲಪ್ರಪಂಚದಂತಹ ಹೊತ್ತಿಕೆಗಳು ಇಂತಹ ಕ್ರಾಂತಿ ಸೃಷ್ಟಿಸಿದವು. ವಿಶ್ವಭಾಷೆಯ ಇನ್ನೂ ಅನೇಕಾನೇಕ ಕೃತಿಗಳು ಕನ್ನಡದಲ್ಲಿ ಇನ್ನೂ ಪ್ರಕಟಗೊಂಡಿಲ್ಲ. ಈ ನಿಟ್ಟಿನ ಪ್ರಯತ್ನಗಳಾಗಬೇಕು ಎಂದವರು ತಿಳಿಸಿದರು. ವಿಜ್ಞಾನ ಬರಹಗಳ ಕನ್ನಡ ಭಾಷಾಂತರದ ವೇಳೆ ಕೆಲವು ನಾಮಸೂಚಕ ಪದ, ವಸ್ತುವಿಷಯಗಳ ಅವತರಣಿಕೆಯಲ್ಲಿ ಮೂಲಭಾಷೆಯ ಪದಗಳನ್ನೇ ಬಳಸುವುದು ಹೆಚ್ಚು ಸೂಕ್ತವಾಗಿದ್ದು, ಕುರುಡಾಗಿ ಮಾಡುವ ಭಾಷಾಂತರ ಹಲವೊಮ್ಮೆ ಗೊಂದಲ, ಅಪಸವ್ಯಗಳಿಗೆ ಕಾರಣವಾಗುವುದೆಂಬ ಕಲ್ಪನೆ ನಮಗಿರಬೇಕು. ಹೀಗಿದ್ದಲ್ಲಿ ಜ್ಞಾನ ಪ್ರಸಾರ ಎಲ್ಲೆಡೆ, ಎಲ್ಲರಿಗೂ ನೆಮ್ಮದಿ, ಸಂತೃಪ್ತಿ ನೀಡುವುದೆಂದು ಅವರು ತಿಳಿಸಿದರು.

ಸಂವಾದಕಾರರಾಗಿ ಕಲ್ಗುಂಡಿ ನವೀನ್ ಅವರು ಪ್ರಸ್ತುಪಡಿಸಿದ ವಿವಿಧ ಆಯಾಮಗಳ ಪ್ರಶ್ನೆಗಳು ಸುದೀರ್ಘ ಒಂದೂವರೆ ಗಂಟೆಯ ಸಂವಾದದಲ್ಲಿ ಗಮನ ಸೆಳೆದವು. ಮೂಲತಃ ಭೂ ವಿಜ್ಞಾನಿಗಳಾದ ಡಾ. ಟಿ.ಆರ್. ಅನಂತರಾಮು ಅವರು ತಮ್ಮ ವೃತ್ತಿ ಜೀವನದ ಹಲವು ಅನುಭವಗಳನ್ನು ತೆರೆದಿಟ್ಟರು. ತಮ್ಮ 14 ವರ್ಷಗಳ ಸಂಶೋಧನಾ ಕ್ಷೇತ್ರದಲ್ಲಿ ದಟ್ಟಾರಣ್ಯದೊಳಗಿದ್ದುಕೊಂಡು ಸೀಮಿತ ಸೌಲಭ್ಯಯಗಳ ನಡುವೆಯೂ ವಿಜ್ಞಾನ ಬರಹಗಳ ಸಾಕಾರತೆಗೆ ಕಾರಣವಾದ ಅಂಶಗಳನ್ನು ತೆರೆದಿಟ್ಟರು. ಕೋಲಾರದ ಚಿನ್ನದ ಗಣಿಯಲ್ಲಿ ತಾವು ನಡೆಸಿದ್ದ ಅಧ್ಯಯನಗಳನ್ನು ರೋಚಕವಾಗಿ ಬಣ್ಣಿಸಿದರು.

ಹಿರಿಯ ಬರಹಗಾರ, ವಾಯ್ಸ್ ಆಫ್ ಇಂಡಿಯಾದ ಕನ್ನಡ ಸರಣಿಯ ಗೌರವ ಸಂಪಾದಕರಾದ ಶ್ರೀ ಮಂಜುನಾಥ ಅಜ್ಜಂಪುರ ಅವರು ಸಂವಾದ ನಡೆಸಿಕೊಟ್ಟ ಸಂಪನ್ಮೂಲ ವ್ಯಕ್ತಿಗಳನ್ನು ಅಭಿನಂದಿಸಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!