ಹೊಸದಿಗಂತ ಡಿಜಿಟಲ್ ಡೆಸ್ಕ್:
ಇನ್ನೇನು ಕೆಲವೇ ದಿನಗಳಲ್ಲಿ ಲೋಕಸಭಾ ಚುನಾವಣೆ ನಡೆಯಲಿದ್ದು, ರಾಜ್ಯದಲ್ಲಿ ಎಲ್ಲ ಪಕ್ಷಗಳ ಪ್ರಚಾರ ಕಾರ್ಯ ರಂಗೇರಿದೆ.
ಆದರೆ ಸಿಎಂ ಸಿದ್ದರಾಮಯ್ಯ ಪುತ್ರ ಯತೀಂದ್ರಗೆ ಚಾಮರಾಜನಗರ ಜನತೆ ಬಿಸಿ ಮುಟ್ಟಿಸಿದ್ದಾರೆ. ಪ್ರಚಾರ ಮಾಡಲು ಬಂದ ಯತೀಂದ್ರ ಅವರನ್ನು ರೈತರು ತರಾಟೆಗೆ ತೆಗೆದುಕೊಂಡಿದ್ದು, ಚುನಾವಣಾ ಬಹಿಷ್ಕಾರದ ಎಚ್ಚರಿಕೆ ನೀಡಿದ್ದಾರೆ.
ಕೈ ಅಭ್ಯರ್ಥಿ ಸುನಿಲ್ ಬೋಸ್ ಪರ ಯತೀಂದ್ರ ಪ್ರಚಾರ ಮಾಡುತ್ತಿದ್ದ ವೇಳೆ ನಂಜನಗೂಡಿನ ಮಲ್ಲುಪುರ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಜನ ಗರಂ ಆಗಿದ್ದಾರೆ.
ಈಗಾಗಲೇ ಅಲ್ಲಿನ ಸಕ್ಕರೆ ಕಾರ್ಖಾನೆ ಬಳಿ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಎರಡು ತಿಂಗಳಿನಿಂದ ರೈತರು ಪ್ರತಿಭಟನೆ ನಡೆಸಿತ್ತಿದ್ದರು. ಪ್ರತಿಭಟನಾನಿರತರ ಬಳಿ ವೋಟ್ ಕೇಳಿದ್ದಕ್ಕೆ ರೈತರು ಗರಂ ಆಗಿ ಮಾತಿನ ಚಾಟಿ ಬೀಸಿದ್ದಾರೆ.
ಬರೀ ಚುನಾವಣೆ ಅಂತ ಬಂದಿದಿರಿ, ಇಲ್ಲ ಅಂದ್ರೆ ಇಲ್ಲಿಗೆ ಯಾವ ನಾಯಕರೂ ಬರೋದಿಲ್ಲ. ವೋಟ್ ಹಾಕಿಬಿಟ್ಟ ನಂತರ ಸಂಬಂಧ ಇಲ್ಲ ಎನ್ನೋ ರೀತಿ ಇರ್ತೀರಿ. ಎರಡು ತಿಂಗಳಿಂದ ಪ್ರತಿಭಟನೆ ಮಾಡ್ತಿದ್ದೇವೆ ಹೋಗಿ ನಿಮ್ಮ ತಂದೆಯವರಿಗೆ ಹೇಳಿ ಎಂದು ಸಿಟ್ಟಾಗಿದ್ದಾರೆ.