ಹೊಸ ದಿಗಂತ ವರದಿ, ಯಲ್ಲಾಪುರ:
ಕಾಳಮ್ಮ ನಗರದಲ್ಲಿ ಮನೆಯ ಮುಂದೆ ನಿಲ್ಲಿಸಿದ್ದ ಸ್ಕೂಟಿ ಎಗರಿಸಿದ್ದ ಆರೋಪಿಯನ್ನು ಬಂಧಿಸಿ, ಕದ್ದ ವಾಹನವನ್ನು ವಶಪಡಿಸಿಕೊಳ್ಳುವಲ್ಲಿ ಯಲ್ಲಾಪುರ ಪೊಲೀಸರು ಯಶಸ್ವಿಯಾಗಿದ್ದಾರೆ.
ತಾಲೂಕಿನ ಹಳಿಯಾಳ ಕ್ರಾಸ್ ನಿವಾಸಿ ಪ್ರಕಾಶ ಇನಾಸ್ ಸಿದ್ದಿ (26) ಬಂಧಿತ ಆರೋಪಿ.
ಪಟ್ಟಣದ ಕಾಳಮ್ಮನಗರದ ನಿವಾಸಿ ರಾಘವೇಂದ್ರ ಮಹಾಬಲೇಶ್ವರ ಭಟ್ಟ ಎಂಬುವವರು ತಮ್ಮ ಮನೆಯ ಎದುರು (ಎಮ್.ಹೆಚ್ ನಾಯ್ಕ ಕಂಪೌಂಡ ಹತ್ತಿರ) ನಿಲ್ಲಿಸಿದ್ದ ಕಪ್ಪು ಬಣ್ಣದ ಟಿವಿಎಸ್ ಜುಪಿಟರ್ ಸ್ಕೂಟಿಯನ್ನು ಕಳೆದ ಅಕ್ಟೋಬರ್ 15, ರಂದು ಕಳ್ಳತನ ಮಾಡಲಾಗಿತ್ತು. ಈ ಕುರಿತು ಯಲ್ಲಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಪ್ರಕರಣದ ಜಾಡು ಹಿಡಿದ ಪೊಲೀಸರು, ಖಚಿತ ಮಾಹಿತಿಯ ಮೇರೆಗೆ ಆರೋಪಿ ಪ್ರಕಾಶ ಸಿದ್ದಿಯನ್ನು ವಶಕ್ಕೆ ಪಡೆದು ತೀವ್ರ ವಿಚಾರಣೆ ನಡೆಸಿದ್ದಾರೆ. ಈ ವೇಳೆ ಆರೋಪಿ ತನ್ನ ಸಹಚರನೊಂದಿಗೆ ಸೇರಿ ಬೈಕ್ ಕಳ್ಳತನ ಮಾಡಿದ್ದಾಗಿ ಒಪ್ಪಿಕೊಂಡಿದ್ದಾನೆ. ಬಂಧಿತನಿಂದ ಕಳುವಾದ ಸ್ಕೂಟಿಯನ್ನು ಪೊಲೀಸರು ಜಪ್ತಿ ಮಾಡಿದ್ದಾರೆ

