ಹೊಸದಿಗಂತ ವರದಿ ವಿಜಯಪುರ:
ನಾನಾ ಜಾತಿ, ಧರ್ಮ, ಭಾಷೆ ಮೀರಿ ಎಲ್ಲರನ್ನೂ ಒಗ್ಗೂಡಿಸುವ ಶಕ್ತಿ ಯೋಗಕ್ಕಿದೆ ಎಂದು
ಕೇಂದ್ರ ಸಚಿವ ಭಗವಂತ ಖೂಬಾ ಹೇಳಿದರು.
ನಗರದ ಗೋಳಗುಮ್ಮಟ ಆವರಣದಲ್ಲಿ ಆಯುಷ್ ಮಂತ್ರಾಲಯ ನವದೆಹಲಿ, ಆಯುಷ್ ಇಲಾಖೆ, ಜಿಲ್ಲಾಡಳಿತ ಮತ್ತು ಜಿಲ್ಲಾ ಪಂಚಾಯತ್ ಆಶ್ರಯದಲ್ಲಿ ಮಂಗಳವಾರ ಬೆಳಗ್ಗೆ ಹಮ್ಮಿಕೊಂಡ ಅಂತಾರಾಷ್ಟಿಯ ಯೋಗ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಪ್ರಧಾನಮಂತ್ರಿಗಳಾದ ನರೇಂದ್ರ ಮೋದಿಯವರು ಇಡೀ ವಿಶ್ವಕ್ಕೆ ಮನವರಿಕೆ ಮಾಡಿಕೊಟ್ಟಿದ್ದರಿಂದ ಯೋಗವನ್ನು ಜೂನ್ 21ರಂದು ವಿಶ್ವದ 190ಕ್ಕೂ ಹೆಚ್ಚು ರಾಷ್ಟ್ರಗಳಲ್ಲಿ ಆಚರಿಸಲಾಗುತ್ತದೆ. ಇದು ಭಾರತಿಯರಿಗೆ ಹೆಮ್ಮೆಯ ಸಂಗತಿ ಎಂದರು.
ನಾವೆಲ್ಲರೂ ಯೋಗ ಮಾಡುವ ಸಂಕಲ್ಪ ಹೊಂದೋಣ. ಯೋಗ ಮಾಡಲು ಇತರರಿಗೆ ಪ್ರೇರೇಪಿಸೋಣ. ಇಡೀ ಸಮಾಜವನ್ನು ಒಂದೇ ಸೂತ್ರದಡಿ ತರುವ ಪ್ರಯತ್ನದಡಿ ಯೋಗ ದಿನಾಚರಣೆಗೆ ವಿಶೇಷ ಆದ್ಯತೆ ನೀಡಿದ್ದು, ಹಲವು ಧರ್ಮಿಯರು ಹಲವು ಭಾಷಿಕರನ್ನು ಒಳಗೊಂಡ ಭಾರತ ದೇಶದಲ್ಲಿ ಎಲ್ಲರನ್ನು ಒಗ್ಗೂಡಿಸಲು ಯೋಗದಲ್ಲಿಯ ಮಾತ್ರ ಅಂತ ಶಕ್ತಿ ಇದೆ ಎಂದರು.
ಉಸ್ತುವಾರಿ ಸಚಿವ ಉಮೇಶ ಕತ್ತಿ ಮಾತನಾಡಿ, ಪ್ರಧಾನಮಂತ್ರಿಗಳು ಯೋಗವನ್ನು ಇಡೀ
ವಿಶ್ವಕ್ಕೆ ಪರಿಚಯಿಸುವ ಕಾರ್ಯಕ್ರಮ ಮಾಡಿದ್ದಾರೆ. ಯೋಗವು ಭಾರತದ ದೇಶದ ಕೊಡುಗೆಯಾಗಿದೆ. ವರ್ಷವಿಡೀ ಯೊಗ ಮಾಡಿದರೆ ಆರೋಗ್ಯಕ್ಕೆ ಸಹಕಾರಿ ಎಂಬುದನ್ಮು ತೋರಿಸಿ ಕೊಟ್ಟ ದೇಶ ನಮ್ಮದಾಗಿದೆ. ಇಡೀ ವಿಶ್ವದ ಗಮನ ಈ ದಿನ ಮೈಸೂರಿನತ್ತ ಇದೆ ಎಂದರು.
ಶಾಸಕ ದೇವಾನಂದ ಚವ್ಹಾಣ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾಧಿಕಾರಿ ಡಾ.ವಿಜಯ ಮಹಾಂತೇಶ ದಾನಮ್ಮನವರ, ರಾಜ್ಯ ಬೀಜ ಮತ್ತು ಸಾವಯವ ಪ್ರಮಾಣ ಸಂಸ್ಥೆಯ ಅಧ್ಯಕ್ಷ ವಿಜುಗೌಡ ಪಾಟೀಲ, ರಾಜ್ಯ ಲಿಂಬೆ ಅಭಿವೃದ್ಧಿ ಮಂಡಳಿಯ ಅಧ್ಯಕ್ಷ ಅಶೋಕ ಅಲ್ಲಾಪೂರ, ವಿಡಿಎ ಅಧ್ಯಕ್ಷ ಶ್ರೀಹರಿ ಗೊಳಸಂಗಿ, ಜಿಲ್ಲಾ ಪೊಲೀಸ್ ವತಿಷ್ಠಾಧಿಕಾರಿ ಎಚ್.ಡಿ.ಆನಂದಕುಮಾರ, ಜಿಪಂ ಸಿಇಒ ರಾಹುಲ್ ಶಿಂಧೆ, ಅಪರ ಜಿಲ್ಲಾಧಿಕಾರಿ ರಮೇಶ ಕಳಸದ ಇದ್ದರು.