ನೀವು ಒಂಥರಾ ನಮ್ಮ ಕುಂದಾಪ್ರದವ್ರು: ಸೈಮಾ ವೇದಿಕೆಯಲ್ಲಿ ಜೂನಿಯರ್‌ NTR- ರಿಷಬ್‌ ಕನ್ನಡ ಕಲರವ!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌
 
ಜೀವನದಲ್ಲಿ ಎಷ್ಟೇ ಉತ್ತುಂಗದಲ್ಲಿದ್ದರು ತಮ್ಮ ಮೂಲವನ್ನು ಮರೆಯಬಾರದು ಎನ್ನುತ್ತಾರೆ. ಅದಕ್ಕೆ ಸರಿಸಾಟಿ ಎಂದರೆ ಜೂನಿಯರ್‌ ಎನ್‌ಟಿಆರ್‌ .

ವಿಶ್ವದಲ್ಲೇ ಆರ್‌ಆರ್‌ಆರ್‌ ಸಿನಿಮಾ ಮೂಲಕ ಪ್ರಖ್ಯಾತಿ ಪಡೆದ ಜೂನಿಯರ್‌ ಎನ್‌ಟಿಆರ್‌ ಎಲ್ಲಿ ಹೋದರು ತಮ್ಮ ಕನ್ನಡ ಮಾತನ್ನು ಮರೆಯುದಿಲ್ಲ. ಅದು ಮತ್ತೊಮ್ಮೆ ಸತ್ಯವಾಗಿದ್ದು, ಸೈಮಾ ಪ್ರಶಸ್ತಿ ಪ್ರಧಾನ ಸಮಾರಂಭದಲ್ಲಿ ಕನ್ನಡದ ನಿರ್ದೇಶಕ ರಿಷಭ್‌ ಶೆಟ್ಟಿ ಅವರೊಂದಿಗೆ ಕನ್ನಡದಲ್ಲಿಯೇ ಸಂಭಾಷಣೆ ನಡೆಸಿರುವ ವಿಡಿಯೋ ದೊಡ್ಡ ಮಟ್ಟದಲ್ಲಿ ವೈರಲ್‌ ಆಗಿದೆ.

ಸೋಶಿಯಲ್‌ ಮೀಡಿಯಾದಲ್ಲಿ ಇಬ್ಬರೂ ಪ್ರಖ್ಯಾತ ಸಿನಿಮಾ ತಾರೆಗಳು ಕನ್ನಡದಲ್ಲಿ ಮಾತನಾಡಿರುವ ವಿಡಿಯೋಗಳನ್ನು ಅಭಿಮಾನಿಗಳು ಕಂಡು ಖುಷಿ ಪಟ್ಟಿದ್ದಾರೆ.

ಸೈಮಾ 2023 ಪ್ರಶಸ್ತಿ ಪ್ರದಾನ ಕಾರ್ಯಕ್ರಮದ ವೇದಿಕೆಯಲ್ಲಿ ರಿಷಭ್‌ ಶೆಟ್ಟಿ ಪ್ರಶಸ್ತಿ ಸ್ವೀಕರಿಸಿದ ಬಳಿಕ, ನಿರೂಪಕ ಅಕುಲ್‌ ಬಾಲಾಜಿ ಅವರು ಜೂನಿಯರ್‌ ಎನ್‌ಟಿಆರ್‌ ಅವರನ್ನು ಮಾತನಾಡಿಸುತ್ತಾರೆ. ‘ಹೇಗಿದ್ದೀರಿ ಸರ್‌..’ ಎಂದು ಜೂನಿಯರ್‌ ಎನ್‌ಟಿಆರ್‌ ಕೇಳುವ ಪ್ರಶ್ನೆಗೆ, ರಿಷಭ್‌ ಶೆಟ್ಟಿ, ‘ತುಂಬಾ ಚೆನ್ನಾಗಿದ್ದೀನಿ ಸರ್‌..’ ಎನ್ನುತ್ತಾರೆ. ಥ್ಯಾಂಕ್‌ ಯು ಸೋ ಮಚ್‌, ನಿಮಗೆ ಮತ್ತೊಮ್ಮೆ ಅಭಿನಂದನೆಗಳು ಎಂದು ಎನ್‌ಟಿಆರ್‌ ಹೇಳುವ ಹೊತ್ತಿಗೆ, ನಿರೂಪಕ ಅಕುಲ್‌ ಬಾಲಾಜಿ, ಸರ್‌ ನೀವು ಕುಂದಾಪುರ ಭಾಷೆಯಲ್ಲಿ ಹೀಗೆ ಮಾತನಾಡ್ತೀರಾ ಎಂದು ಪ್ರಶ್ನೆ ಮಾಡುತ್ತಾರೆ.

ಅದಕ್ಕೆ ಉತ್ತರಿಸುವ ಎನ್‌ಟಿಆರ್‌, ‘ನಾನು ನನ್ನ ತಾಯಿಯ ಜೊತೆ ಹೀಗೆ ಮಾತನಾಡುತ್ತೇನೆ..’ ಎಂದು ಕನ್ನಡದಲ್ಲಿಯೇ ಹೇಳುತ್ತಾರೆ. ನಿಮ್ಮ ಬಾಯಲ್ಲಿ ಕನ್ನಡ ಕೇಳೋಕೆ ತುಂಬಾ ಚೆನ್ನಾಗಿರುತ್ತದೆ ಎಂದು ಹೇಳುವ ಮಾತಿಗೆ, ರಿಷಭ್‌ ಶೆಟ್ಟಿ ಅವರತ್ತ ಬೆರಳು ತೋರುವ ಜೂ.ಎನ್‌ಟಿಆರ್‌ ಅವರು ಮಾತನಾಡುವ ಮುಂದೆ ನನ್ನದೇನೂ ಇಲ್ಲ. ನನ್ನ ಬಿಟ್ಬಿಡಿ ಎನ್ನುತ್ತಾರೆ.

ಆ ಬಳಿಕ ರಿಷಭ್‌ ಶೆಟ್ಟಿ, ಸರ್‌ ನಾನು ನಿಮಗೆ ನೇರವಾಗಿ ಸಿಕ್ಕಿ ಥ್ಯಾಂಕ್ಸ್‌ ಹೇಳಲು ಪ್ರಯತ್ನ ಮಾಡಿದೆ. ಅದಕ್ಕೆ ಅವಕಾಶವೇ ಸಿಗಲಿಲ್ಲ. ಕೊನೆಯ ಬಾರಿಗೆ ಕಿರಿಕ್‌ ಪಾರ್ಟಿಗೆ ಇಲ್ಲಿಗೆ ಬಂದಾಗ ಕೂಡ, ಇದೇ ವೇದಿಕೆಯಲ್ಲಿ ಅಂದು ನೀವೇ ಪ್ರಶಸ್ತಿ ನೀಡಿದ್ದೀರಿ. ಅವತ್ತಿನಿಂದ ನಮಗೊಂದು ಎಮೋಷನ್ಸ್‌ ಏನೆಂದರೆ, ನಿಮ್ಮ ತಾಯಿ ಮತ್ತು ನಮ್ಮೂರು ಎಲ್ಲಾ ಒಂದೇ ಊರಾಗಿರುವ ಕಾರಣ, ನೀವು ಒಂಥರಾ ನಮ್ಮ ಕುಂದಾಪ್ರದವ್ರು.. ನೀವು ಆಂಧ್ರದವರು ಎನ್ನು ಯೋಚನೆಯೇ ನಮ್ಮಲ್ಲಿಲ್ಲ.’ ಎಂದು ಹೇಳುತ್ತಾರೆ.

ಈ ವಿಡಿಯೋಗೆ ಅಭಿಮಾನಿಗಳು ಭಾರಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!