ಹೊಸದಿಗಂತ ಡಿಜಿಟಲ್ ಡೆಸ್ಕ್:
ಸರ್ಕಾರದಿಂದ ಪ್ರಸ್ತಾಪವಾಗಿರುವ ಬಿಡದಿ ಟೌನ್ಶಿಪ್ಗೆ ರೈತರ ವಿರೋಧ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಸರ್ಕಾರದ ಭೂಸ್ವಾಧೀನ ಯೋಜನೆಗೆ ವಿರೋಧ ವ್ಯಕ್ತಪಡಿಸಲು ರೈತರು ಸಾಂಕೇತಿಕವಾಗಿ ರಕ್ತದಲ್ಲಿ ಬರಹ ಪ್ರತಿಭಟನೆ ನಡೆಸಿದ್ದಾರೆ.
ಬೈರಮಂಗಲ ಗ್ರಾಮದಲ್ಲಿ ಮಹಿಳೆಯರು ಪ್ರತಿಭಟನೆ ನಡೆಸಿದ್ದು, ರೈತರು ತಮ್ಮ ಕೈ ಬೆರಳುಗಳನ್ನು ಚುಚ್ಚಿಕೊಂಡು ಹೊರಬಂದ ರಕ್ತವನ್ನು ಬ್ಯಾನರ್ಗೆ ಹಚ್ಚಿದ್ದಾರೆ. ಕೃಷಿ ಭೂಮಿ ಕೊಡೋದಿಲ್ಲ. ರಕ್ತ ಸುರಿಸೋಕೆ ಸಿದ್ಧ. ಪ್ರಾಣ ಬಿಡೋಕೂ ರೆಡಿ ಇದ್ದೇವೆ ಆದರೆ ನಮ್ಮ ಭೂಮಿಗೆ ಕೈ ಹಾಕೋಕೆ ಬಿಡೋದಿಲ್ಲ ಎಂದು ಹೇಳಿದ್ದಾರೆ.
ಪ್ರತಿಭಟನಾಕಾರರು ಭೂಮಿ ಕೊಡುವುದಿಲ್ಲ, ರಕ್ತ ಕೊಡುತ್ತೇವೆ, ಜೈ ಜವಾನ್, ಜೈ ಕಿಸಾನ್ ಎಂಬ ಘೋಷಣೆಗಳನ್ನು ಕೂಗಿ, ಭೂಸ್ವಾಧೀನದಿಂದ ತಮ್ಮ ಜೀವನೋಪಾಯ ಮತ್ತು ಫಲವತ್ತಾದ ಕೃಷಿ ಭೂಮಿಗೆ ಅಪಾಯ ಎದುರಾಗಲಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ನಾವು 500ಕ್ಕೂ ಹೆಚ್ಚು ದಿನಗಳಿಂದ ಹೋರಾಟ ನಡೆಸುತ್ತಿದ್ದೇವೆ. ಇಂದಿನ ರಕ್ತ ಪ್ರತಿಭಟನೆ ನಮ್ಮ ದೃಢ ಸಂಕಲ್ಪವನ್ನು ತೋರಿಸುತ್ತದೆ. ಟೌನ್ಶಿಪ್ ಯೋಜನೆಯನ್ನು ಸರ್ಕಾರ ಕೈಬಿಡುವವರೆಗೆ ನಮ್ಮ ಹೋರಾಟ ಮುಂದುವರಿಯಲಿದೆ ಎಂದು ರೈತರು ಹೇಳಿದ್ದಾರೆ.



