ಹೊಸದಿಗಂತ ಡಿಜಿಟಲ್ ಡೆಸ್ಕ್:
ಅಮೆರಿಕದಲ್ಲಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ (Rahul Gandhi) ದೇಶದ ಪ್ರಜಾಪ್ರಭುತ್ವದ (Indian Democracy) ಕುರಿತು ನೀಡಿರುವ ನಕಾರಾತ್ಮಕ ಹೇಳಿಕೆಗೆ ಕೇಂದ್ರ ಶಿಕ್ಷಣ ಮತ್ತು ಕೌಶಲಾಭಿವೃದ್ಧಿ ಸಚಿವ ಧರ್ಮೇಂದ್ರ ಪ್ರಧಾನ್ (Dharmendra Pradhan) ತಿರುಗೇಟು ನೀಡಿದ್ದಾರೆ.
ಈ ವಿಚಾರವಾಗಿ ಟ್ವೀಟ್ ಮಾಡಿದ ಅವರು, ರಾಹುಲ್ ಗಾಂಧಿ ಮತ್ತು ಕಾಂಗ್ರೆಸ್ ಪಕ್ಷವು ತಮ್ಮ ಹೋರಾಟ ಬಿಜೆಪಿ ವಿರುದ್ಧವೇ ಅಥವಾ ಭಾರತ ವಿರುದ್ಧವೇ ಎಂಬುದನ್ನು ಸ್ಪಷ್ಟಪಡಿಸಬೇಕು ಎಂದು ಆಗ್ರಹಿಸಿದ್ದಾರೆ.
ಅಮೆರಿಕ ಪ್ರವಾಸದಲ್ಲಿರುವ ರಾಹುಲ್ ಗಾಂಧಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಭಾರತೀಯ ಪ್ರಜಾಪ್ರಭುತ್ವವು ಜಾಗತಿಕ ಒಳಿತಿಗೆ ಪೂರಕವಾದದ್ದಾಗಿದೆ. ಆದರೆ ಅದರ ಕುಸಿತವು ಪ್ರಪಂಚದ ಮೇಲೆ ಪರಿಣಾಮ ಬೀರಲಿದೆ. ಇದನ್ನು ನಾವು ಅರ್ಥಮಾಡಿಕೊಂಡು, ಸ್ವೀಕರಿಸಬೇಕಾಗಿದೆ. ಭಾರತದಲ್ಲಿ ಪ್ರಜಾಪ್ರಭುತ್ವಕ್ಕಾಗಿ ಹೋರಾಡುವುದು ನಮ್ಮ ಕೆಲಸ ಎಂದು ಹೇಳಿದ್ದರು.
ಇದಕ್ಕೆ ಆಕ್ರೋಶ ವ್ಯಕ್ತಪಡಿಸಿರುವ ಧರ್ಮೇಂದ್ರ ಪ್ರಧಾನ್, ನಿಮ್ಮ (ರಾಹುಲ್ ಗಾಂಧಿ) ಹೋರಾಟ ಬಿಜೆಪಿಯ ವಿರುದ್ಧ ಆಗಿದ್ದರೆ, ದೇಶದೊಳಗೆ ಇರುವ ವೇದಿಕೆಗಳಲ್ಲಿ ಸಾಕಷ್ಟು ಹೋರಾಡಿ. ಆದರೆ ವಿದೇಶಗಳಲ್ಲಿ ದೇಶವನ್ನು ಮತ್ತೆ ಮತ್ತೆ ಅವಮಾನಿಸುವುದನ್ನು ನಿಲ್ಲಿಸಿ. ರಾಹುಲ್ ಗಾಂಧಿ ತಮ್ಮ ಹೇಳಿಕೆಗೆ ದೇಶದ ಜನರ ಕ್ಷಮೆ ಯಾಚಿಸಬೇಕು ಎಂದು ಉಲ್ಲೇಖಿಸಿದ್ದಾರೆ.
ವಿದೇಶಗಳಲ್ಲಿ ದೇಶವನ್ನು ಅವಮಾನಿಸುವುದು ರಾಹುಲ್ ಗಾಂಧಿಗೆ ಅಭ್ಯಾಸವಾಗಿ ಹೋಗಿದೆ. ಅವರು ವಿದೇಶಕ್ಕೆ ಹೋದಾಗಲೆಲ್ಲಾ ಭಾರತ ಮತ್ತು ಅದರ ಪ್ರಜಾಪ್ರಭುತ್ವದ ಬಗ್ಗೆ ಕೀಳಾಗಿ ಹೇಳಿಕೆಗಳನ್ನು ನೀಡುತ್ತಾರೆ ಎಂದು ಪ್ರಧಾನ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇಡೀ ವಿಶ್ವದಲ್ಲಿ ಭಾರತದ ವಿಶ್ವಾಸಾರ್ಹತೆ ಹೊಸ ಉತ್ತುಂಗಕ್ಕೇರುತ್ತಿದೆ. ಜಗತ್ತು ಭಾರತದತ್ತ ಭರವಸೆಯಿಂದ ನೋಡುತ್ತಿದೆ. ಇಂತಹ ಸಮಯದಲ್ಲಿ ಭಾರತವನ್ನು ವಿದೇಶಿ ನೆಲಕ್ಕಿಂತ ಕೀಳು ಎಂಬಂತೆ ಬಿಂಬಿಸುವ ರಾಹುಲ್ ಗಾಂಧಿ ಹೇಳಿಕೆಗಳು ಅತ್ಯಂತ ದುರದೃಷ್ಟಕರ ಎಂದು ಪ್ರಧಾನ್ ಉಲ್ಲೇಖಿಸಿದ್ದಾರೆ.