ಹೊಸದಿಗಂತ ವರದಿ ಅಂಕೋಲಾ
ಅಂಕೋಲಾ:ತಾಲೂಕಿನ ನದಿಭಾಗ ಕಡಲ ತೀರದಲ್ಲಿ ಭೂತ ಬಲೆಯೊಂದರಲ್ಲಿ ಸಿಲುಕಿ ಒದ್ದಾಡುತ್ತಿದ್ದ ಕಡಲಾಮೆಯೊಂದನ್ನು ಸ್ಥಳೀಯ ಯುವಕರು ರಕ್ಷಿಸಿ ಮರಳಿ ಕಡಲಿಗೆ ಬಿಟ್ಟಿದ್ದಾರೆ.
ಕರಾವಳಿಯಲ್ಲಿ ಹೆಚ್ಚಾಗಿ ಕಾಣಸಿಗುವ ಓಲಿವ್ ರಿಡ್ಲೆ ಪ್ರಭೇದದ ಕಡಲಾಮೆಯೊಂದು ಕಡಲ ತೀರದಲ್ಲಿ ತ್ಯಾಜ್ಯ ಬಲೆಯ ತುಂಡಲ್ಲಿ ಸಿಲುಕಿಕೊಂಡು ಮುಂದಕ್ಕೆ ಚಲಿಸಲಾಗದ ಸ್ಥಿತಿಯಲ್ಲಿರುವುದನ್ನು ಗಮನಿಸಿದ ಸ್ಥಳೀಯ ಯುವಕರುಗಳಾದ ಅಕ್ಷಯ ಗೌಡ,ರೂಪೇಶ ನಾಯ್ಕ, ಗಜೇಂದ್ರ ನಾಯ್ಕ,ಸಾಗರ ನಾಯ್ಕ ಮೊದಲಾದವರು ಆಮೆ ಸಿಲುಕಿದ ಬಲೆಯನ್ನು ಎಚ್ಚರಿಕೆಯಿಂದ ಕತ್ತರಿಸಿ ಆಮೆಯನ್ನು ಬಲೆಯಿಂದ ರಕ್ಷಣೆ ಮಾಡಿ ಸುರಕ್ಷಿತವಾಗಿ ಸಮುದ್ರಕ್ಕೆ ಬಿಡುವ ಮೂಲಕ ಅಪರೂಪದ ಕಡಲ ಜೀವಿಯ ರಕ್ಷಣೆಗೆ ತಮ್ಮ ಕೊಡುಗೆ ನೀಡಿದ್ದಾರೆ. ಯುವಕರು ಬಲೆಯಲ್ಲಿ ಸಿಲುಕಿದ ಆಮೆಯನ್ನು ಗಮನಿಸದಿದ್ದರೆ ನಾಯಿಗಳು ದಾಳಿ ಮಾಡುವ ಸಾಧ್ಯತೆ ಇತ್ತು ಎನ್ನಲಾಗುತ್ತಿದೆ.
ಇದನ್ನೂ ಓದಿ;
ತ್ಯಾಜ್ಯ ಬಲೆಗಳು ಸಮುದ್ರದಲ್ಲಿ ಮತ್ತು ಸಮುದ್ರ ತೀರದಲ್ಲಿ ಬೀಳುವ ಬಲೆಗಳ ತ್ಯಾಜ್ಯ ಸಾಗರ ಜೀವಿಗಳಿಗೆ ಕೆಲವೊಮ್ಮೆ ಅಪಾಯಕಾರಿಯಾಗಿ ಪರಿಣಮಿಸುವ ಸಾಧ್ಯತೆ ಇದ್ದು ಅದಕ್ಕಾಗಿಯೇ ಭೂತಬಲೆಗಳನ್ನು ಹಣ ನೀಡಿ ಕೊಂಡುಕೊಳ್ಳುವಂತ ಯೋಜನೆಗಳಿದ್ದು ಸಂಬಂಧಿಸಿದ ಇಲಾಖೆಗಳು ಅದನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸಬೇಕಿದೆ.



