ಆ ಕುಡುಕ ಆಟಗಾರ ನನ್ನ ಎತ್ತಿ 15ನೇ ಮಹಡಿಯಾಚೆ ನೇತಾಡಿಸಿದ; ಭಯಾನಕ ಅನುಭವ ಬಿಚ್ಚಿಟ್ಟ ಚಾಹಲ್‌..

ಹೊಸದಿಗಂತ ಡಿಜಿಟಲ್‌ ಡೆಸ್ಕ್‌
ಯುಜುವೇಂದ್ರ ಚಹಾಲ್ ಭಾರತದ ಅತ್ಯಂತ ಭರವಸೆಯ ಕ್ರಿಕೆಟಿಗ. 2014 ರಿಂದ ಆರ್ಸಿಬಿ ತಂಡದಲ್ಲಿದ್ದ ಚಾಹಲ್‌ ಆರ್ಸಿಬಿ ತಂಡದ ಪ್ರಮುಖ ಬೌಲಿಂಗ್‌ ಆಧಾರಸ್ತಂಭವಾಗಿದ್ದರು. ಆದರೆ ಐಪಿಎಲ್‌ 15 ನೇ ಆವೃತ್ತಿಗೂ ಮುನ್ನ ನಡೆದ ಹರಾಜಿನಲ್ಲಿ ಆರ್ಸಿಬಿ ಅಚ್ಚರಿಯ ರೀತಿ ಅವರನ್ನು ಕೈಬಿಟ್ಟಿತ್ತು. ಈ ಬಾರಿ ರಾಜಸ್ಥಾನ್ ರಾಯಲ್ಸ್ ತಂಡ ಸೇರಿರುವ ಚಾಹಲ್‌ ಮಾಚ್‌ ವಿನ್ನಿಂಗ್‌ ಪ್ರದರ್ಶನಗಳನ್ನು ನೀಡುತ್ತಿದ್ದಾರೆ. ಪ್ರಸ್ತುತ ಪಂದ್ಯಾವಳಿಯಲ್ಲಿ ಅತಿ ಹೆಚ್ಚು ವಿಕೆಟ್ ಪಡೆದವರ ಪಟ್ಟಿಯಲ್ಲಿ 2 ನೇ ಸ್ಥಾನದಲ್ಲಿದ್ದಾರೆ. ತಂಡದ ಸಹ ಆಟಗಾರರಾದ ರವಿಚಂದ್ರನ್ ಅಶ್ವಿನ್ ಮತ್ತು ಕರುಣ್ ನಾಯರ್ ಅವರೊಂದಿಗೆ ಇತ್ತೀಚೆಗೆ ನಡೆಸಿದ ಸಂಭಾಷಣೆ ವೇಳೆ ಚಾಹಲ್‌ ತಮ್ಮ ಬದುಕಿನಲ್ಲಿ ಈ ಹಿಂದೆ ನಡೆದ ಭಯಾನಕ ಘಟನೆಯೊಂದನ್ನು ಬಹಿರಂಗಪಡಿಸಿದ್ದಾರೆ. ಆರ್‌ ಆರ್‌ ತಂಡವು ಈ ವಿಡಿಯೋ ವನ್ನು ತನ್ನ ಟ್ವಟರ್‌ ಖಾತೆಯಲ್ಲಿ ಹಂಚಿಕೊಂಡಿದೆ.
ʼಅದು 2013 ರ ಐಪಿಎಲ್‌ ದಿನಗಳು. ಆಗ ನಾನು ಯುವ ಆಟಗಾರನಾಗಿದ್ದೆ. ಮುಂಬೈ ಇಂಡಿಯನ್‌ ಪ್ರಾಂಚೈಸಿಗೆ ಆಡುತ್ತಿದ್ದೆ. ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಪಂದ್ಯವೊಂದರ ಬಳಿಕ ಆಟಗಾರರ ಗೆಟ್‌ ಟುಗೆದರ್‌ ಇತ್ತು. ಅಲ್ಲೊಬ್ಬ ಆಟಗಾರ ನನ್ನನ್ನೇ ಗಮನಿಸುತ್ತಿದ್ದ. ಆತ ಅತಿಯಾಗಿ ಕುಡಿದಿದ್ದ. ತನ್ನ ಬಳಿಗೆ ಬರುವಂತೆ ಕರೆದ. ನಾನು ಆತನ ಬಳಿ ಹೋಗುತ್ತಿದ್ದಂತೆ ನನ್ನನ್ನು ಅನಾಮತ್ತು ಎತ್ತಿ ಬಾಲ್ಕನಿಯಲ್ಲಿ ನೇತಾಡಿಸಿದ. ಅದು 15 ನೇ ಫ್ಲೋರ್‌ ಆಗಿತ್ತು. ಆ ಸ್ಥಿತಿಯಲ್ಲಿ ನಾನು ಮೂರ್ಚೆ ತಪ್ಪಿದಂತಾಗಿದ್ದೆ. ಸಣ್ಣದೊಂದು ತಪ್ಪು ಘಟಿಸಿದ್ದರೂ ನನ್ನ ಜೀವ ಹೋಗಿರುತ್ತಿತ್ತು. ಈ ದೃಶ್ಯವನ್ನು ಗಮನಿಸಿದ ಇತರೆ ಆಟಗಾರರು ಅಲ್ಲಿಗೆ ಓಡಿ ಬಂದು ನನ್ನನ್ನು ರಕ್ಷಿಸಿದರು. ನನಗೆ ಕುಡಿಯಲು ನೀರು ಕೊಟ್ಟರು. ನಾವು ಎಲ್ಲಿಗಾದರೂ ಹೋದಾಗ ಎಷ್ಟು ಜವಾಬ್ದಾರಿಯುತವಾಗಿ ಇರಬೇಕೆಂಬುದು ಆಗಿನಿಂದ ನನಗೆ ಅರಿವಾಯಿತು. ಈ ವಿಚಾರವನ್ನು ಇದೇ ಮೊದಲ ಬಾರಿಗೆ ಸಾರ್ವಜನಿಕವಾಗಿ ಹೇಳಿಕೊಳ್ಳುತ್ತಿದ್ದೇನೆʼ ಎಂದು ಚಾಹಲ್‌ ಹೇಳಿದ್ದಾರೆ.

 

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!