ಹೊಸದಿಗಂತ ಡಿಜಿಟಲ್ ಡೆಸ್ಕ್:
ಜಾರ್ಖಂಡ್ ಸಂಸದ ಧೀರಜ್ ಸಾಹು ಬಳಿ ಪತ್ತೆಯಾಗಿರುವ ಕೋಟಿ ಕೋಟಿ ಹಣ ಪತ್ತೆಯಾಗಿದ್ದು, ಇದರ ಬೆನ್ನಲ್ಲೇ ಕಾಂಗ್ರೆಸ್ ವಿರುದ್ಧ ಬಿಜೆಪಿ ವಾಗ್ದಾಳಿ ನಡೆಸುತ್ತಿದ್ದು, ಕಾಂಗ್ರೆಸ್ ಭ್ರಷ್ಟಾಚಾರದ ಕರಾಳ ಮುಖ ದರ್ಶನ ಮಾಡಿಸಿದೆ. ಸುದೀರ್ಘ ಕಾಲ ಕಾಂಗ್ರೆಸ್ ಲೂಟಿ ಹೊಡೆದಿರುವ ಈ ದೇಶದ ಸಂಪತ್ತು ಎಲ್ಲೆಲ್ಲಿವೆ ಎಂಬುದನ್ನು ಐಟಿ ಇಲಾಖೆ ಪತ್ತೆ ಹಚ್ಚುವ ಮುನ್ನ ನೀವೇ ಹೊರತಂದು ಸಕ್ರಮ ಮಾರ್ಗದಲ್ಲಿ ಜನರಿಗೆ ಹಂಚಿಬಿಡಿ ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ವೈ ವಿಜಯೇಂದ್ರ (BY Vijayendra) ಟಾಂಗ್ ಕೊಟ್ಟಿದ್ದಾರೆ.
ಒಡಿಶಾ, ಜಾರ್ಖಂಡ್, ಪಶ್ಚಿಮ ಬಂಗಾಳ ಮೂಲದ ಡಿಸ್ಟಿಲರೀಸ್ ಪ್ರೈವೇಟ್ ಲಿಮಿಟೆಡ್ (BDPL) ಕಚೇರಿಗಳ ಮೇಲೆ ತೆರಿಗೆ ಇಲಾಖೆ ನಡೆಸಿದ ದಾಳಿಯಲ್ಲಿ ಈವರೆಗೆ 290 ಕೋಟಿರೂ.ಪತ್ತೆಯಾಗಿದೆ.
ಈ ಕುರಿತು ಪ್ರತಿಕ್ರಿಯಿಸಿರುವ ವಿಜಯೇಂದ್ರ ಅವರು ಸಿಎಂ ಸಿದ್ದರಾಮಯ್ಯ (Siddaramaiah) ಹುಬ್ಬಳ್ಳಿ ಭಾಷಣ ಪ್ರಸ್ತಾಪಿಸಿ ಸೋಶಿಯಲ್ ಮೀಡಿಯಾ ಎಕ್ಸ್ ಖಾತೆಯಲ್ಲಿ ಟಾಂಗ್ ಕೊಟ್ಡಿದ್ದಾರೆ.
‘ಈ ದೇಶದ ಸಂಪತ್ತು ಸಮಾನವಾಗಿ ಹಂಚಿಕೆಯಾಗುತ್ತಿಲ್ಲ, ಅದರಲ್ಲಿ ಮುಸ್ಲಿಮರಿಗೆ ಪಾಲು ಸಿಗುತ್ತಿಲ್ಲ ಎಂದು ಮುಸ್ಲಿಂ (Muslims) ಓಲೈಕೆ ಮಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೇ ಈ ದೇಶದ ಜನರ ಸಂಪತ್ತು ಯಾರ ಬಳಿ ಇದೆ? ಲೂಟಿಹೊಡೆದವರಾರು? ಎಂಬ ನಿಮ್ಮ ಆವೇಶಭರಿತ ಪ್ರಶ್ನೆಗಳಿಗೆ ಐಟಿ ಅಧಿಕಾರಿಗಳು ಇದೀಗ ಉತ್ತರ ದೊರಕಿಸಿಕೊಟ್ಟಿದ್ದಾರೆ.
ಕಾಂಗ್ರೆಸ್ ಪಕ್ಷದ ನಾಯಕರು ಹಾಗೂ ಏಜೆಂಟರ ಮೇಲೆ ಐಟಿ ದಾಳಿ ನಡೆದಷ್ಟೂ, ಜನರಿಂದ ಲೂಟಿ ಹೊಡೆದ ಅಕ್ರಮ ಕಪ್ಪುಹಣ ಪತ್ತೆಯಾಗುತ್ತಲೇ ಇದೆ. ಸದ್ಯ ನಡೆದಿರುವ ಐಟಿ ದಾಳಿಯಲ್ಲಿ ಜಾರ್ಖಂಡ್ ಕಾಂಗ್ರೆಸ್ ಸಂಸದ ಧೀರಜ್ ಸಾಹು ಬಳಿ ಸರಿ ಸುಮಾರು 156 ಚೀಲಗಳಲ್ಲಿ ಬರೋಬ್ಬರಿ 225 ಕೋಟಿ ನಗದು ಪತ್ತೆಯಾಗಿದ್ದು, ಕಾಂಗ್ರೆಸ್ ಪಕ್ಷದ ಭ್ರಷ್ಟಾಚಾರದ ಕರಾಳ ಮುಖ ದರ್ಶನ ಮಾಡಿಸಿದೆ.
ಸುದೀರ್ಘ ಕಾಲ ಕಾಂಗ್ರೆಸ್ ಲೂಟಿ ಹೊಡೆದಿರುವ ಈ ದೇಶದ ಸಂಪತ್ತು ಎಲ್ಲೆಲ್ಲಿವೇ ಎಂಬುದನ್ನು ಐಟಿ ಇಲಾಖೆ ಪತ್ತೆ ಹಚ್ಚುವ ಮುನ್ನ ನೀವೇ ಹೊರತಂದು ಸಕ್ರಮ ಮಾರ್ಗದಲ್ಲಿ ಜನರಿಗೆ ಹಂಚಿಬಿಡಿ. ಈ ದೇಶದ ಸಂಪತ್ತು ಶತಮಾನಗಳಿಂದಲೂ ಲೂಟಿಯಾಗುತ್ತಲೇ ಇದೆ ಎಂಬುದಕ್ಕೆ ಇತಿಹಾಸವೇ ಇದೆ. ಮೊದಲಿಗೆ ಮೊಘಲರು, ನಂತರ ಬ್ರಿಟೀಷರು, ಸ್ವಾತಂತ್ರ್ಯಾ ನಂತರ ಕಾಂಗ್ರೆಸ್ಸಿಗರು ಎಂಬುದು ಅಸಲೀ ಸತ್ಯ ಎಂಬುದಕ್ಕೆ ಇಂದಿಗೂ ಪುರಾವೆಗಳು ಸಿಗುತ್ತಲೇ ಇವೆ ಎಂದು ಎಕ್ಸ್ ಖಾತೆಯಲ್ಲಿ ಬರೆದುಕೊಂಡಿದ್ದಾರೆ.