ಹೊಸದಿಗಂತ ಡಿಜಿಟಲ್ ಡೆಸ್ಕ್
ಐಪಿಎಲ್ ಆರಂಭಕ್ಕೆ ದಿನಗಣನೆ ಆರಂಭವಾಗಿದೆ. ಈ ಬಾರಿಯ ಐಪಿಎಲ್ ನ ಲೀಗ್ ಪಂದ್ಯಗಳನ್ನು ಮಹಾರಾಷ್ಟ್ರದಲ್ಲಿ ಆಯೋಜಿಸಲಾಗಿದೆ. ಎಲ್ಲಾ ತಂಡಗಳ ಆಟಗಾರರು ಟೂರ್ನಿಯಲ್ಲಿ ಪಾಲ್ಗೊಳ್ಳಲು ಮುಂಬೈನತ್ತ ಆಗಮಿಸುತ್ತಿದ್ದಾರೆ. ಈ ನಡುವೆ ಆಘಾತಕಾರಿ ಘಟನೆಯೊಂದು ನಡೆದಿದ್ದು, ಹೊಟೇಲ್ಗಳ ಬಳಿ ನಿಲ್ಲಿಸಿದ್ದ ಡೆಲ್ಲಿ ಕ್ಯಾಪಿಟಲ್ಸ್ ತಂಡದ ಆಟಗಾರರ ಬಸ್ ಮೇಲೆ ಮಹಾರಾಷ್ಟ್ರ ನವನಿರ್ಮಾಣ ಸೇನೆ (ಎಂಎನ್ಎಸ್) ಕಾರ್ಯಕರ್ತರು ದಾಳಿ ನಡೆಸಿದ್ದಾರೆ.
Delhi Capital IPL team parked bus allegedly attacked#IPL2022pic.twitter.com/hzmdb60yXm
— Himalayan Guy (@RealHimalayaGuy) March 16, 2022
ಮಧ್ಯರಾತ್ರಿಯಲ್ಲಿ ಹೊಟೇಲ್ ಬಳಿ ಜಮಾಯಿಸಿ ಬಸ್ನ ಮುಂಭಾಗದಲ್ಲಿ ತಮ್ಮ ಬೇಡಿಕೆಗಳ ಪೋಸ್ಟರ್ಗಳನ್ನು ಅಂಟಿಸಿ ಘೋಷಣೆಗಳನ್ನು ಕೂಗಿದ ಎಂಎನ್ ಎಸ್ ನ ಕಾರ್ಯಕರ್ತರು, ಬಳಿಕ ಬಸ್ಸುಗಳ ಮೇಲೆ ದಾಳಿ ನಡೆಸಿ ಗಾಜುಗಳನ್ನು ಒಡೆದುಹಾಕಿದ್ದಾರೆ. ದಾಳಿ ವೇಳೆ ಆಟಗಾರರು ಬಸ್ ನಲ್ಲಿ ಇರಲಿಲ್ಲ ಎಂದು ತಿಳಿದುಬಂದಿದೆ. ಪ್ರಾಂಚೈಸಿಯು ಆಟಗಾರರ ಓಡಾಟಕ್ಕೆ ಹೊರರಾಜ್ಯಗಳಿಂದ ಬಸ್ಗಳನ್ನು ಕರೆಸಿರುವುದು ಕಾರ್ಯಕರ್ತರ ಆಕ್ರೋಶಕ್ಕೆ ಕಾರಣವಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ.
ಈ ಬಗ್ಗೆ ಪ್ರತಿಕ್ರಿಯಿಸಿರುವ ಎಂಎಸ್ಎಸ್ನ ನಾಯಕ ಸಂಜಯ್ ನಾಯ್ಕ್, ಹೊರ ರಾಜ್ಯಗಳ ಬಸ್ ಗಳನ್ನು ಬಾಡಿಗೆಗೆ ಪಡೆದಿರುವುದರಿಂದ ಮಹಾರಾಷ್ಟ್ರದ ಸ್ಥಳೀಯರು ಉದ್ಯೋಗ ವಂಚಿತರಾಗುತ್ತಿದ್ದಾರೆ. ಇದನ್ನು ವಿರೋಧಿಸಿ ನಾವು ಪ್ರತಿಭಟನೆ ನಡೆಸಿದ್ದೇವೆ ಎಂದಿದ್ದಾರೆ. ದಾಳಿ ಸಂಬಂಧ ಕ್ರಮಕೈಗೊಂಡಿರುವ ಕೊಲಾಬಾ ಪೊಲೀಸರು, ಎಂಎನ್ ಎಸ್ ನ ಸಾರಿಗೆ ವಿಭಾಗದ ಉಪಾಧ್ಯಕ್ಷ ಪ್ರಶಾಂತ್ ಗಾಂಧಿ ಸೇರಿದಂತೆ ನಾಲ್ವರನ್ನು ವಶಕ್ಕೆ ಪಡೆದಿದ್ದಾರೆ.