ಹೊಸದಿಗಂತ ವರದಿ,ಮದ್ದೂರು :
ದಾಂಪತ್ಯ ಕಲಹದ ಹಿನ್ನೆಲೆಯಲ್ಲಿ ಪಿತೃಪಕ್ಷಕ್ಕೆ ಬಂದಿದ್ದ ಪತ್ನಿ ತನ್ನ ಮಗನೊಂದಿಗೆ ಸೇರಿ ಪತಿಯ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿ ಹತ್ಯೆಗೈದಿರುವ ಘಟನೆ ತಾಲೂಕಿನ ಚಾಪುರದೊಡ್ಡಿ ಗ್ರಾಮದಲ್ಲಿ ಗುರುವಾರ ರಾತ್ರಿ ಜರುಗಿದೆ.
ಗ್ರಾಮದ ಉಮೇಶ್ (46) ಎಂಬಾತನ ಮೇಲೆ ಪತ್ನಿ ಸವಿತಾ (65) ಹಾಗೂ ಮಗ ಶಶಾಂಕ್ (20) ಅವರುಗಳು ಮಚ್ಚು, ಮರದ ರಿಪೀಸ್ಪಟ್ಟಿಗಳಿಂದ ಹಲ್ಲೆ ನಡೆಸಿದ್ದಾರೆ. ಇದರಿಂದ ತೀವ್ರ ರಕ್ತಸ್ತ್ರಾವದಿಂದ ಉಮೇಶ್ ಸ್ಥಳದಲ್ಲೇ ಕೊನೆಯುಸಿರೆಳೆದಿದ್ದಾನೆ.
ಘಟನೆ ವೇಳೆ ಉಮೇಶನ ರಕ್ಷಣೆಗೆ ಬಂದ ಆತನ ಅಕ್ಕ ಸರೋಜಮ್ಮ ಅವರ ಮೇಲೆ ಆರೋಪಿಗಳು ಅಟ್ಟಾಡಿಸಿಕೊಂಡು ಬಂದು ಹಲ್ಲೆ ನಡೆಸಿದ ನಂತರ ಸ್ಥಳದಿಂದ ಪರಾರಿಯಾಗಿದ್ದಾರೆ.
ಕೊಲೆ ಸಂಬಂಧ ಬೆಸಗರಹಳ್ಳಿ ಠಾಣೆ ಪೊಲೀಸರು ಆರೋಪಿಗಳಾದ ಸವಿತಾ ಮತ್ತು ಶಶಾಂಕ್ ಎಂಬುವರ ಮೇಲೆ ಐಪಿಸಿ 302 ಹಾಗೂ 334ರನ್ವಯ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಘಟನೆ ನಂತರ ತಲೆಮರೆಸಿಕೊಂಡಿರುವ ಆರೋಪಿಗಳ ಪತ್ತೆಗೆ ವಿಶೇಷ ತಂಡ ರಚನೆ ಮಾಡಲಾಗಿತ್ತು. ಮದ್ದೂರು ಗ್ರಾಮಾಂತರ ಇನ್ಸ್ಪೆಕ್ಟರ್ ವೆಂಕಟೇಗೌಡ ಮತ್ತು ಸಿಬ್ಬಂದಿಗಳು ರಾತ್ರಿಯಿಡೀ ಕಾರ್ಯಾಚರಣೆ ನಡೆಸಿ ಬೆಂಗಳೂರಿನ ಚಾಮರಾಜಪೇಟೆಯಲ್ಲಿ ತಲೆಮರೆಸಿಕೊಂಡಿದ್ದ ಸವಿತಾ ಹಾಗೂ ಮಗ ಶಶಾಂಕ್ನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.
ಕೊಲೆಯಾದ ಉಮೇಶ್ ಹಾಗೂ ಪತ್ನಿ ಸವಿತಾ ನಡುವೆ ಹೊಂದಾಣಿಕೆ ಸಂಬಂಧ ವಿವಾದ ಉಂಟಾಗಿತ್ತು. ಈ ಹಿನ್ನೆಲೆಯಲ್ಲಿ ಕಳೆದ ಐದು ತಿಂಗಳ ಹಿಂದೆ ಸವಿತಾ ಮಗ ಶಶಾಂಕ್ನೊಂದಿಗೆ ಸೇರಿ ಉಮೇಶನ ಮೇಲೆ ಹಲ್ಲೆ ನಡೆಸಿ ಅವನ ಕಾಲು ಮುರಿದಿದ್ದರು.
ಆ ವೇಳೆ ಬೆಸಗರಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.