April 25, 2026
Saturday, April 25, 2026
spot_img

‘ಭರವಸೆ ಮತ್ತು ಗುಣಪಡಿಸುವಿಕೆ: ಅಂಡಾಶಯದ ಜೆರ್ಮ್ ಸೆಲ್ ಗಡ್ಡೆಗಳ ಕುರಿತು ತಿಳುವಳಿಕೆ’ ಅಭಿಯಾನ

ಹೊಸ ದಿಗಂತ ಡಿಜಿಟಲ್ ಡೆಸ್ಕ್:

ಅತ್ಯಂತ ಪ್ರತಿಷ್ಠಿತ ವೈದ್ಯಕೀಯ ಸಂಸ್ಥೆ ಆಗಿರುವ ನಾರಾಯಣ ಹೆಲ್ತ್ ಸಿಟಿಯು ಸಾಮಾನ್ಯವಾಗಿ ಹದಿಹರೆಯದ ಹುಡುಗಿಯರಲ್ಲಿ ಹೆಚ್ಚಾಗಿ ಕಂಡು ಬರುವಂತಹ ಮತ್ತು ಕಡಿಮೆ ಪರಿಗಣಿಸಲ್ಪಟ್ಟಿರುವ ಹಾಗೂ ಪೂರ್ತಿ ಗುಣಪಡಿಸಬಹುದಾದ ಕ್ಯಾನ್ಸರ್‌ ಗುಂಪುಗಳಲ್ಲಿ ಒಂದಾಗಿರುವ ಅಂಡಾಶಯದ ಜೆರ್ಮ್ ಸೆಲ್ ಗಡ್ಡೆಗಳ (ಓವೇರಿಯನ್ ಜೆರ್ಮ್ ಸೆಲ್ ಟ್ಯೂಮರ್ಸ್- ಓಜಿಸಿಟಿ) ಸಮಸ್ಯೆಗೆ ಯಶಸ್ವಿಯಾಗಿ ಚಿಕಿತ್ಸೆ ನೀಡಿರುವ ಸಕಾರಾತ್ಮಕ ಕತೆಗಳನ್ನು ಹಂಚಿಕೊಂಡು ಈ ಕುರಿತು ಜಾಗೃತಿ ಮೂಡಿಸುವ ಪ್ರಯತ್ನ ಮಾಡಿದೆ.

ಈ ಕುರಿತು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಬೆಂಗಳೂರು ನಾರಾಯಣ ಹೆಲ್ತ್ ಸಿಟಿಯ ಗೈನಕಾಲಜಿಕ್ ಆಂಕೊಲಾಜಿ ವಿಭಾಗದ ಸೀನಿಯರ್ ಕನ್ಸಲ್ಟೆಂಟ್ ಮತ್ತು ಕ್ಲಿನಿಕಲ್ ಲೀಡ್ ಡಾ. ರೋಹಿತ್ ರಘುನಾಥ್ ರಾನಡೆ ಅವರು, ‘ಭರವಸೆ ಮತ್ತು ಗುಣಪಡಿಸುವಿಕೆ: ಅಂಡಾಶಯದ ಜೆರ್ಮ್ ಸೆಲ್ ಗೆಡ್ಡೆಗಳ ಕುರಿತು ತಿಳುವಳಿಕೆ’ ಎಂಬ ಅಭಿಯಾನದ ಬಗ್ಗೆ ವಿವರವಾಗಿ ತಿಳಿಸಿದರು.

ಕಲಬುರಗಿ, ಬೀದರ್, ವಿಜಯಪುರ (ಬಿಜಾಪುರ), ಬಾಗಲಕೋಟೆ, ಯಾದಗಿರಿ ಮತ್ತು ರಾಯಚೂರು ಜಿಲ್ಲೆಗಳ ರೋಗಿಗಳು ಯಶಸ್ವಿಯಾಗಿ ಚಿಕಿತ್ಸೆ ಪಡೆದು ಉತ್ತಮ ರೀತಿಯಲ್ಲಿ ಜೀವನ ನಡೆಸುತ್ತಿರುವ ಕಥೆಗಳನ್ನು ಹಂಚಿಕೊಂಡರು. ಸಮಯಕ್ಕೆ ಸರಿಯಾಗಿ ರೋಗ ಪತ್ತೆ, ಅತ್ಯಾಧುನಿಕ ಶಸ್ತ್ರಚಿಕಿತ್ಸೆ ಮತ್ತು ಬಹುವಿಧ ತಂಡದಿಂದ ಕ್ಯಾನ್ಸರ್ ಚಿಕಿತ್ಸೆಗಳು ಕ್ಯಾನ್ಸರ್‌ ಜಯಿಸಲು ಮತ್ತು ಗರ್ಭಧಾರಣಾ ಸಾಮರ್ಥ್ಯ ಉಳಿಸಿಕೊಂಡು ಗುಣಮಟ್ಟದ ಜೀವನ ನಡೆಸಲು ಹೇಗೆ ನೆರವಾಯಿತು ಎಂಬುದನ್ನು ಈ ಪ್ರಕರಣಗಳು ತಿಳಿಸಿಕೊಟ್ಟಿವೆ.

ಈ ಕುರಿತು ಮಾತನಾಡಿದ ಡಾ. ರೋಹಿತ್ ಅವರು, “ಜೀವ ಉಳಿಸುವ ಮೊದಲ ಹೆಜ್ಜೆ ಎಂದರೆ ಜಾಗೃತಿ ಮೂಡಿಸುವುದು. ಆದರೆ ಬಹಳಷ್ಟು ಯುವತಿಯರು ಕೆಲವು ಅಂಡಾಶಯದ ಗಡ್ಡೆಗಳು ಪೂರ್ತಿಯಾಗಿ ಗುಣವಾಗಬಹುದು ಮತ್ತು ಸರಿಯಾದ ಸಮಯಕ್ಕೆ ತಜ್ಞರ ಚಿಕಿತ್ಸೆ ಪಡೆದರೆ ಮಕ್ಕಳನ್ನು ಪಡೆಯುವ ಸಾಮರ್ಥ್ಯವನ್ನೂ ಉಳಿಸಿಕೊಳ್ಳಬಹುದು ಎಂಬುದನ್ನು ಅರಿತಿಲ್ಲ. ಆದ್ದರಿಂದ ಯಾವುದೇ ಅನುಮಾನ ಬಂದೊಡನೆ ತಕ್ಷಣ ಡಾಕ್ಟರನ್ನು ಭೇಟಿ ಮಾಡಿ” ಎಂದು ಹೇಳಿದರು.

ಅಂಡಾಶಯದ ಜೆರ್ಮ್ ಸೆಲ್ ಗಡ್ಡೆಗಳು ಒಟ್ಟು ಅಂಡಾಶಯ ಕ್ಯಾನ್ಸರ್‌ಗಳಲ್ಲಿ ಕೇವಲ ಶೇ.2-3ರಷ್ಟು ಮಾತ್ರ ಇದೆಯಾದರೂ ಯುವ ಜನರಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುತ್ತವೆ. ಹೊಟ್ಟೆ ನೋವು, ಊತ, ತ್ವರಿತವಾಗಿ ದೊಡ್ಡದಾಗುವ ಗಡ್ಡೆ ಇತ್ಯಾದಿ ಲಕ್ಷಣಗಳು ಕಂಡು ಬಂದರೂ ಬಹಳಷ್ಟು ಮಂದಿ ಅದನ್ನು ಕಡೆಗಣಿಸುತ್ತಾರೆ. ಇದರಿಂದ ರೋಗ ನಿರ್ಣಯ ತಡವಾಗುತ್ತದೆ. ನಾರಾಯಣ ಹೆಲ್ತ್ ಸಿಟಿಯಲ್ಲಿ ಆರಂಭಿಕ ಹಂತದ ರೋಗನಿರ್ಣಯ, ಗರ್ಭಧಾರಣಾ ಸಾಮರ್ಥ್ಯ ಉಳಿಸುವ ಶಸ್ತ್ರಚಿಕಿತ್ಸೆ ಮತ್ತು ಆಧುನಿಕ ಕೀಮೋಥೆರಪಿ ಚಿಕಿತ್ಸೆ ಪಡೆದು ಉತ್ತರ ಕರ್ನಾಟಕದ ಅನೇಕ ಯುವತಿಯರು ಅತ್ಯುತ್ತಮ ಫಲಿತಾಂಶ ಪಡೆದಿದ್ದಾರೆ.

ಪತ್ರಿಕಾಗೋಷ್ಠಿಯಲ್ಲಿ ವೈದ್ಯರು ಹಂಚಿಕೊಂಡ ನಿಜ ಕತೆಗಳು

ಡಾ. ರೋಹಿತ್ ರಾನಡೆ ಅವರು ಪತ್ರಿಕಾಗೋಷ್ಠಿಯಲ್ಲಿ ಸಮಯಕ್ಕೆ ಸರಿಯಾದ ಚಿಕಿತ್ಸೆಯಿಂದ ಪೂರ್ತಿ ಗುಣವಾದ ಕೆಲವು ಪ್ರಕರಣಗಳನ್ನು ಉದಾಹರಿಸಿದರು:

ಪ್ರಕರಣ 1: ಕ್ಯಾನ್ಸರ್ ಶಸ್ತ್ರಚಿಕಿತ್ಸೆಯ ನಂತರ ತಾಯಿ ಆದ 21 ವರ್ಷದ ಯುವತಿ

ಹೊಸತಾಗಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದ ಯುವತಿಯೊಬ್ಬರಲ್ಲಿ ದೊಡ್ಡ ಮಿಶ್ರ ಜೆರ್ಮ್ ಸೆಲ್ ಗಡ್ಡೆ ಪತ್ತೆಯಾಯಿತು. ಅವರಿಗೆ ನಾರಾಯಣ ಹೆಲ್ತ್ ಸಿಟಿಯಲ್ಲಿ ಗರ್ಭಧಾರಣಾ ಸಾಮರ್ಥ್ಯ ಉಳಿಸುವ ಆಂಕೊಲಾಜಿಕಲ್ ಶಸ್ತ್ರಚಿಕಿತ್ಸೆ ಮತ್ತು ನಂತರ ಕೀಮೋಥೆರಪಿ ಒದಗಿಸಲಾಯಿತು. ಶಸ್ತ್ರಚಿಕಿತ್ಸೆ ಬಳಿಕ ಅವರು ವೇಗವಾಗಿ ಚೇತರಿಸಿಕೊಂಡರು. ಈಗ ಆಕೆ ಕ್ಯಾನ್ಸರ್ ಮುಕ್ತರಾಗಿದ್ದಾರೆ ಮತ್ತು ನೈಸರ್ಗಿಕವಾಗಿ ಗರ್ಭ ಧರಿಸಿ ಒಬ್ಬ ಮುದ್ದಾದ ಮಗುವಿನ ತಾಯಿಯೂ ಆಗಿದ್ದಾರೆ. ಯುವತಿಯರಲ್ಲಿ ಕ್ಯಾನ್ಸರ್ ಇದ್ದರೂ ತಜ್ಞ ಶಸ್ತ್ರಚಿಕಿತ್ಸೆಯಿಂದ ಜೀವ ಮತ್ತು ಮಾತೃತ್ವ ಎರಡನ್ನೂ ಉಳಿಸಬಹುದು ಎಂಬುದಕ್ಕೆ ಇದೊಂದು ಶಕ್ತಿಶಾಲಿ ಉದಾಹರಣೆಯಾಗಿದೆ.

ಪ್ರಕರಣ 2: ರೋಬೋಟಿಕ್ ಶಸ್ತ್ರಚಿಕಿತ್ಸೆಯಿಂದ ಅಪರೂಪದ ಕ್ಯಾನ್ಸರ್‌ ಗೆದ್ದ 28 ವರ್ಷದ ಮಹಿಳೆ

ಈ 28 ವರ್ಷದ ಯುವತಿಯಲ್ಲಿ ಡರ್ಮಾಯ್ಡ್ ಸಿಸ್ಟ್‌ ನೊಳಗೆ ಅತ್ಯಂತ ಅಪರೂಪದ “ಪೂರ್ಲಿ ಡಿಫರೆನ್ಶಿಯೇಟೆಡ್ ಸ್ಕ್ವಾಮಸ್ ಸೆಲ್ ಕಾರ್ಸಿನೋಮಾ” ಎಂಬ ಕ್ಯಾನ್ಸರ್ ಪತ್ತೆಯಾಯಿತು. ರೋಬೋಟಿಕ್ ಸಹಾಯದಿಂದ ರೀಸ್ಟೇಜಿಂಗ್ ಶಸ್ತ್ರಚಿಕಿತ್ಸೆ, ಲಿಂಫ್ ನೋಡ್ ತೆಗೆಯುವಿಕೆ ಮತ್ತು ಒಮೆಂಟೆಕ್ಟಮಿ ಚಿಕಿತ್ಸೆ ಒದಗಿಸಲಾಯಿತು. ನಂತರ ಕೀಮೋಥೆರಪಿ ನೀಡಲಾಯಿತು. ಈ ಅತ್ಯಾಧುನಿಕ ಚಿಕಿತ್ಸೆಯ ಮೂಲಕ ಸುರಕ್ಷಿತವಾಗಿ ಗಡ್ಡೆ ತೆಗೆಯಲಾಯಿತು ಮತ್ತು ಅವರು ತುಂಬಾ ಬೇಗ ಚೇತರಿಸಿಕೊಂಡರು. ಈಗ ಆಕೆ ಕ್ಯಾನ್ಸರ್ ಮುಕ್ತರಾಗಿದ್ದಾರೆ ಮತ್ತು ಸಂಪೂರ್ಣವಾಗಿ ಆರೋಗ್ಯಕರವಾಗಿ ಜೀವನ ನಡೆಸುತ್ತಿದ್ದಾರೆ.

ಈ ಕುರಿತು ಡಾ.ರೋಹಿತ್ ರಾನಡೆ ಅವರು, “ಈ ಪ್ರಕರಣಗಳು ನಿಖರ ಶಸ್ತ್ರಚಿಕಿತ್ಸೆ, ಅತ್ಯಾಧುನಿಕ ತಂತ್ರಜ್ಞಾನ ಮತ್ತು ವೈಯಕ್ತೀಕರಿಸಿದ ಚಿಕಿತ್ಸೆಯನ್ನು ಒಟ್ಟುಗೂಡಿಸಿ ನಡೆಸಿದ ಅಂತರ್ ಶಿಸ್ತೀಯ ಆರೈಕೆಯ ಶಕ್ತಿಯನ್ನು ತೋರಿಸುತ್ತವೆ” ಎಂದು ಹೇಳಿದರು.

ಉತ್ತರ ಕರ್ನಾಟಕದಲ್ಲಿ ಕ್ಯಾನ್ಸರ್ ಚಿಕಿತ್ಸೆ ಲಭ್ಯತೆ ಸುಲಭ

ಡಾ. ರೋಹಿತ್ ರಾನಡೆ ಮತ್ತು ನಾರಾಯಣ ಹೆಲ್ತ್ ತಂಡವು ಈಗಾಗಲೇ ಕಲಬುರಗಿ ಮತ್ತು ರಾಯಚೂರಿನಲ್ಲಿ ಔಟ್‌ರೀಚ್ ಓಪಿಡಿ ಸೇವೆಗಳನ್ನು ನಡೆಸುತ್ತಿದ್ದು, ಈ ಮೂಲಕ ಕ್ಯಾನ್ಸರ್ ಚಿಕಿತ್ಸೆಯನ್ನು ಸುಲಭವಾಗಿ ದೊರಕುವಂತೆ ಮಾಡಿದೆ. ಅಂಡಾಶಯದ ಗೆಡ್ಡೆ ಅಥವಾ ಸಂಬಂಧಿತ ಲಕ್ಷಣಗಳಿರುವ ಮಹಿಳೆಯರಿಗೆ ಸಮಯಕ್ಕೆ ಸರಿಯಾಗಿ ಸೂಕ್ತ ಪರೀಕ್ಷೆ, ರೆಫರಲ್ ಮತ್ತು ಫಾಲೋ-ಅಪ್ ಸಿಗುವಂತೆ ಮಾಡುತ್ತಿದೆ.

ಈ ಕುರಿತು ಕುಟುಂಬಗಳಲ್ಲಿ ಜಾಗೃತಿ ಮೂಡಿಸುವುದು, ತ್ವರಿತವಾಗಿ ವೈದ್ಯಕೀಯ ಸಹಾಯ ಪಡೆಯಲು ಪ್ರೇರೇಪಿಸುವುದು, ಯುವತಿಯರಲ್ಲಿ ಬರುವ ಕ್ಯಾನ್ಸರ್‌ಗಳನ್ನು ಸರಿಯಾದ ತಜ್ಞತೆಯಿಂದ ಪೂರ್ತಿ ಗುಣಪಡಿಸಬಹುದು ಎಂಬ ವಿಶ್ವಾಸ ತುಂಬುವುದು ಇತ್ಯಾದಿ ಉದ್ದೇಶಗಳಿಂದ ಈ ಪತ್ರಿಕಾಗೋಷ್ಠಿಯನ್ನು ಆಯೋಜಿಸಲಾಗಿತ್ತು.

ಪತ್ರಿಕಾಗೋಷ್ಠಿಯಲ್ಲಿ ಡಾ. ವಿಫುಲ್ , ನಾರಾಯಣ ಹೆಲ್ತ ನ ಕಲ್ಯಾಣ ಕರ್ನಾಟಕದ ಮಾರುಕಟ್ಟೆ ಮುಖ್ಯಸ್ಥ ಶ್ರೀ ವಿಶಾಲ್‌ ಸಿರ್ಸಿ, ಕನ್ಸಲ್‌ಟೆಂಟ್‌ ಶ್ರೀ ಗೋಪಾಲ್‌ ಎಆರ್‌, ಪ್ರಾಡಕ್ಟ್‌ ಮ್ಯಾನೇಜರ್‌ ಶ್ರೀ ಭರತ್‌ ರಮೇಶ ಹಾಗೂ ಇನ್ನಿತತರರು ಉಪಸ್ಥಿತರಿದ್ದರು.

ನಾರಾಯಣ ಹೆಲ್ತ್ ಕುರಿತು:

ಡಾ. ದೇವಿ ಶೆಟ್ಟಿ ಸ್ಥಾಪಿಸಿರುವ ನಾರಾಯಣ ಹೆಲ್ತ್ ಸಂಸ್ಥೆಯ ಕೇಂದ್ರ ಕಚೇರಿ ಬೆಂಗಳೂರಿನಲ್ಲಿದೆ ಮತ್ತು ಈ ಸಂಸ್ಥೆಯು ಭಾರತದಲ್ಲಿ ವೈದ್ಯಕೀಯ ಸೇವೆ ಒದಗಿಸುವ ಸಂಸ್ಥೆಗಳಲ್ಲಿ ಅತಿ ದೊಡ್ಡ ಸಂಸ್ಥೆಯಾಗಿದೆ. ಭಾರತ ಮತ್ತು ಕೆರಿಬಿಯನ್‌ ಪ್ರದೇಶಗಳಲ್ಲಿ ಪ್ರಾಥಮಿಕ, ದ್ವಿತೀಯ ಹಂತದ ಮತ್ತು ಸೂಪರ್ ಸ್ಪೆಷಾಲಿಟಿ ವೈದ್ಯಕೀಯ ಸೇವೆಗಳನ್ನು ಒದಗಿಸುತ್ತಾ ಬಂದಿರುವ ಸಂಸ್ಥೆಯು ಬಹಳ ಪ್ರಸಿದ್ಧಿ ಹೊಂದಿದೆ. ವಿವಿಧ ವೈದ್ಯಕೀಯ ವಿಭಾಗಗಳಲ್ಲಿ ಗುಣಮಟ್ಟದ ಕೇಂದ್ರಗಳು ಮತ್ತು 18,800ರಷ್ಟು ವೃತ್ತಿಪರರ ತಂಡವನ್ನು ಹೊಂದಿದೆ. ಇದರಲ್ಲಿ 3,868 ನುರಿತ ವೈದ್ಯರು ಮತ್ತು ತಜ್ಞರು ಇದ್ದಾರೆ. ಸಂಸ್ಥೆಯು ಉತ್ತಮ ಸೌಲಭ್ಯ ಮತ್ತು ಪರಿಣತ ವೈದ್ಯರ ತಂಡದ ಮೂಲಕ ಅತ್ಯುತ್ತಮ ಗುಣಮಟ್ಟದ ವೈದ್ಯಕೀಯ ಸೇವೆಯನ್ನು ಕೈಗೆಟುವ ದರದಲ್ಲಿ ಒದಗಿಸುತ್ತಿದೆ.

ಹೆಚ್ಚಿನ ಮಾಹಿತಿಗಾಗಿ, ಭೇಟಿ ನೀಡಿ: https://www.narayanahealth.org/

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !