ಹೊಸದಿಗಂತ ವರದಿ,ಬಳ್ಳಾರಿ:
ಸಾರಿಗೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಬಿ.ಶ್ರಿರಾಮುಲು ಅವರ ವಿರುದ್ಧ ಆರೋಪ ಅಷ್ಟೇ, ಸಾಬೀತಾಗಿಲ್ಲ, ಹೀಗಿರುವಾಗ ರಾಜೀನಾಮೆ ನೀಡುವ ಪ್ರಶ್ನೆಯೇ ಇಲ್ಲ ಎಂದು ಮಾಜಿ ಶಾಸಕ ಟಿ.ಎಚ್.ಸುರೇಶ್ ಬಾಬು ಅವರು ಹೇಳಿದರು.
ನಗರದ ಬಿಜೆಪಿ ಜಿಲ್ಲಾ ಕಚೇರಿಯಲ್ಲಿ ಮಂಗಳವಾರ ನಡೆದ ಸುದ್ದಿಗೋಷ್ಢಿಯಲ್ಲಿ ಮಾತನಾಡಿದರು. ಮಾಜಿ ಸಂಸದ ವಿ.ಎಸ್.ಉಗ್ರಪ್ಪ ಅವರು, ಸಚಿವ ಶ್ರೀರಾಮುಲು ಅವರ ವಿರುದ್ಧ ಸುಳ್ಳು ಆರೋಪಗಳನ್ನು ಮಾಡಿ ರಾಜೀನಾಮೆ ನೀಡಬೇಕು ಎಂದು ಒತ್ತಾಯಿಸಿದ್ದಾರೆ, ಇದು ಹಾಸ್ಯಾಸ್ಪದವಾಗಿದೆ. ಸಹಜವಾಗಿ ರಾಜ್ಯ ಹಾಗೂ ರಾಷ್ಟ್ರ ಮಟ್ಟದ ನಾಯಕರು ಮುಂಚೂಣಿ ನಾಯಕರಾಗಿ ಹೊರ ಹೊಮ್ಮುವಾಗ ರಾಜಕೀಯವಾಗಿ ಸಹಿಸದ ಕೆಲವರು ಇಂತಹ ಸುಳ್ಳು ಆರೋಪಗಳನ್ನು ಮಾಡುವುದು ಸಹಜ. ಇಷ್ಟಕ್ಕೂ ಸಚಿವ ಶ್ರೀರಾಮುಲು ಅವರ ವಿರುದ್ಧ ದಾಖಲಾದ ಪ್ರಕರಣ ನ್ಯಾಯಾಲಯದಲ್ಲಿ ವಿಚಾರಣೆ ನಡೆಯುತ್ತಿದೆ, ಆರೋಪವೂ ಸಾಬೀತಾಗಿಲ್ಲ, ಇದು ಸಂಪೂ ಸುಳ್ಳು ಪ್ರಕರಣವಾಗಿದ್ದು, ಇದರಿಂದ ಮುಕ್ತರಾಗಿ ಹೊರಬರುವ ವಿಶ್ವಾಸವಿದೆ, ಉಗ್ರಪ್ಪ ಅವರ ಆರೋಪದಲ್ಲಿ ಯಾವುದೇ ಹುರುಳಿಲ್ಲ, ಪ್ರಚಾರ ಪಡೆಯಲು ಈ ರೀತಿ ಕೆಲ ನಾಯಕರು ಜನರಲ್ಲಿ ಗೊಂದಲ ಸೃಷ್ಟಿಸುತ್ತಿದ್ದಾರೆ ಹರಿಹಾಯ್ದರು.
ಎಸ್ಸಿ, ಎಸ್ಟಿ ಮೀಸಲಾತಿ ಹೆಚ್ಚಳ ನಮ್ಮ ಹಕ್ಕು, ಸಚಿವ ಶ್ರೀರಾಮುಲು, ಸ್ವಾಮೀಜಿ ಅವರ ನಿರಂತರ ಹೋರಾಟದಿಂದ ಮೀಸಲಾತಿ ದೊರೆತಿದೆ. ಪ್ರಕರಣದ ಆರೋಪದ ಕುರಿತು ನ್ಯಾಯಾಲಯದಲ್ಲಿ ವಿಚಾರಣೆ ನಡೆಯುತ್ತಿದೆ, ಕೂಡಲೇ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡ್ಬೇಕು ಎಂದರೇ ಉಗ್ರಪ್ಪ ಅವರು ಕೋರ್ಟಾ ಎಂದು ಆಕ್ರೋಶ ವ್ಯಕ್ತಪಡಿಸಿದರು. ದಲಿತ ಸಮಾಜದ ನಾಯಕರು ಬೆಳಿತಾರೆ ಅಂದ್ರೆ, ಕಾಂಗ್ರೆಸ್ ನಾಯಕರಿಗೆ ಸಹಿಸಲು ಆಗೋಲ್ಲ, 6 ಸಾವಿರ ಪುಟಗಳ ದೋಷಾರೋಪ ಪಟ್ಟಿ ನನ್ನ ಬಳಿ ಇದೆ, ಎನ್ನುವ ಉಗ್ರಪ್ಪ ಅವರು ಆರೋಪ ಮಾಡುವ ಮುನ್ನ ಆಲೋಚಿಸಬೇಕು, ಸಚಿವ ಶ್ರಿರಾಮುಲು ಅವರು ವ್ಯಕ್ತಿಯಲ್ಲ, ಅವರೋಬ್ಬ ಪಕ್ಷದ ಆಸ್ತಿ, ಅವರೋಬ್ಬ ನಾಯಕ ಸಮಾಜದ ಆಸ್ತಿ, ದಲಿತರ ಶಕ್ತಿಯಾಗಿದ್ದಾರೆ ಎಂದರು. ಬಿಜೆಪಿ ಜಿಲ್ಲಾಧ್ಯಕ್ಷರಾದ ಗೋನಾಳ್ ಮುರಹರಗೌಡ ಅವರು ಮಾತನಾಡಿ, ಮಾಜಿ ಸಂಸದ ಉಗ್ರಪ್ಪ ಅವರು ಶ್ರೀರಾಮುಲು ಅವರ ಬಗ್ಗೆ ಬಳಸಿದ ಪದಗಳು ಸರಿಯಲ್ಲ, ಸಚಿವ ಶ್ರಿರಾಮುಲು ಅವರ ವಿರುದ್ಧ 6 ಸಾವಿರ ಪುಟಗಳ ದೋಷಾರೋಪ ಪಟ್ಟಿಯಲ್ಲ, ಲಕ್ಷ ಪುಟಗಳ ಪಟ್ಟಿ ಸಲ್ಲಿಕೆಯಾಗಲಿ, ಅವರು ಆರೋಪದಿಂದ ಮುಕ್ತರಾಗಿ ಬರುವ ವಿಶ್ವಾಸವಿದೆ ಎಂದರು. ಸಂಸದ ವೈ.ದೇವೇಂದ್ರಪ್ಪ ಅವರು ಮಾತನಾಡಿದರು. ಬೂಡಾ ಅಧ್ಯಕ್ಷ ಮಾರುತಿ ಪ್ರಸಾದ್ ಸರ್ವಶೆಟ್ಟಿ, ಜವಳಿ ಅಭಿವೃದ್ಧಿ ನಿಗಮದ ಅಧ್ಯಕ್ಷ ವಿರುಪಾಕ್ಷಗೌಡ, ರೈತ ಮೋರ್ಚಾ ರಾಜ್ಯ ಉಪಾಧ್ಯಕ್ಷ ಗುರುಲಿಂಗನಗೌಡ, ಉಪಾಧ್ಯಕ್ಷರಾದ ಓಬಳೇಶ್, ವೀರಶೇಖರ ರೆಡ್ಡಿ, ಮಾಜಿ ಸಂಸದೆ ಜೆ.ಶಾಂತಾ, ಕೆ.ಎಸ್.ದಿವಾಕರ್, ಮಾದ್ಯಮ ವಕ್ತಾರ ರಾಜೀವ್ ತೊಗರಿ ಇತರರಿದ್ದರು.