ಹೊಸದಿಗಂತ ವರದಿ,ಮೈಸೂರು:
ಪ್ರತಿವರ್ಷ ನಾಡ ಹಬ್ಬ ಮೈಸೂರು ದಸರಾ ಮಹೋತ್ಸವದ ಪ್ರಯುಕ್ತ ಫಿರಂಗಿ ಮದ್ದು ಸಿಡಿಸುವ ಪೂರ್ವಾಭ್ಯಾಸವನ್ನು ಆರಮನೆಯ ಬಿಸಿಲು ಮಾರಮ್ಮ ದೇವಸ್ಥಾನ ಬಳಿ ಇರುವ ವಾಹನ ನಿಲ್ದಾಣದಲ್ಲಿ ನಡೆಸುತ್ತಿರುವುದರಿಂದ ಪಿರಂಗಿಯ ಶಬ್ದಕ್ಕೆ, ಹಾಗೂ ಮಳೆಯ ಕಾರಣದಿಂದ ಕೋಟೆಗೋಡೆ ಕುಸಿದು ಬಿದ್ದಿದೆ. ಇದರ ದುರಸ್ಥಿ ಕಾಮಗಾರಿಯನ್ನು ಪ್ರಾರಂಭಿಸಲಾಗಿದೆ ಎಂದು ಅರಮನೆ ಮಂಡಳಿಯ ಉಪನಿರ್ದೇಶಕ ಸುಬ್ರಹ್ಮಣ್ಯ ತಿಳಿಸಿದ್ದಾರೆ.
ಅರಮನೆಯ ಮುಖ್ಯ ಕಟ್ಟಡ, ಅರಮನೆಯ ಆವರಣದಲ್ಲಿ ಬರುವ ಎಲ್ಲಾ ದೇವಸ್ಥಾನಗಳು ತುಂಬ ಹಳೆಯ ಕಟ್ಟಡವಾಗಿದ್ದು, ಆರಮನೆ ಕಟ್ಟಡ ಗೋಡೆಗಳ ಸುರಕ್ಷತೆಯ ಹಿತದೃಷ್ಟಿಯಿಂದ ಮದ್ದು ಸಿಡಿಸುವ ಪೂರ್ವಾಭ್ಯಾಸ ಕಾರ್ಯಕ್ರಮವನ್ನು ಬೇರೆ ಕಡೆಗೆ ವರ್ಗಾಯಿಸಲು ಮೈಸೂರು ನಗರ ಪೊಲೀಸ್ ಆಯುಕ್ತರಲ್ಲಿ ಮನವಿ ಮಾಡಲಾಗಿದೆ. ಅಲ್ಲದೇ ಈ ವರ್ಷ ಬಾರಿ ಮಳೆಯಿಂದ, ಮೈಸೂರು ಅರಮನೆಯ ಬಿಸಿಲು ಮಾರಮ್ಮ ದೇವಸ್ಥಾನದ ಬಳಿ ಇರುವ ಕೋಟೆಗೋಡೆ ಕುಸಿದು ಬಿದ್ದಿದೆ.
ಈ ಸಂಬAಧ ಮೈಸೂರು ಅರಮನೆಯ ಬಿಸಿಲು ಮಾರಮ್ಮ ದೇವಸ್ಥಾನದ ಬಳಿ ಇರುವ ಕೋಟೆಗೋಡೆ ದುರಸ್ಥಿ ಕಾಮಗಾರಿಗೆ ಕುಸಿದಿರುವ ಸುಮಾರು 20 ಮೀ. ಉದ್ದದ ಗೋಡೆಯನ್ನು ಸೇರಿಸಿದಂತೆ ಸುಮಾರು 50 ಮೀ. ಉದ್ದದ ಗೋಡೆಗೆ ದುರಸ್ಥಿ ಕಾಮಗಾರಿ ಕೈಗೊಳ್ಳಲು ಇ-ಪ್ರೊಕ್ಯೂರ್ಮೆಂಟ್ನಲ್ಲಿ ಟೆಂಡರ್ ಆಹ್ವಾನಿಸಿದ್ದು, ಒಂದನೇ ದರ್ಜೆ ಗುತ್ತಿಗೆದಾರರಾದ ರಾಮಚಂದ್ರ ಅವರಿಗೆ ಕಾರ್ಯಾದೇಶವನ್ನು ನೀಡಲಾಗಿದೆ. ಸದರಿಯವರು ನಿಯಮಾನುಸಾರ ಇಂದು ಕೆಲಸವನ್ನು ಪ್ರಾರಂಭಿಸಿದ್ದಾರೆ ಎಂದು ತಿಳಿಸಿದ್ದಾರೆ.