ಹೊಸದಿಗಂತ ಡಿಜಿಟಲ್ ಡೆಸ್ಕ್:
ಭಾರತದ ಬಹುದೊಡ್ಡ ಲಸಿಕೆ ತಯಾರಕ ಕಂಪನಿಯಾದ ಸೆರಮ್ ಇನ್ಸ್ಟಿಟ್ಯೂಟ್ ಆಫ್ ಇಂಡಿಯಾದ ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿ ಆದಾರ್ ಪೂನಾವಾಲಾ ಅವರ ಹೆಸರಿನಲ್ಲಿ ಅಪರಿಚಿತ ವಂಚರು ಮೋಸದ ಸಂದೇಶಗಳನ್ನು ಕಳುಹಿಸುವ ಮೂಲಕ ಕನಿಷ್ಠ 1 ಕೋಟಿ ರೂಪಾಯಿಗಳನ್ನು ವಂಚಿಸಿದ್ದಾರೆ ಎಂದು ಬಂಡ್ ಗಾರ್ಡನ್ ಪೊಲೀಸ್ ಠಾಣೆಯ ಅಧಿಕಾರಿಯೊಬ್ಬರು ತಿಳಿಸಿರುವುದಾಗಿ ಮೂಲಗಳು ವರದಿ ಮಾಡಿವೆ.
ವಂಚಕನು ಎಸ್ಐಐನ ನಿರ್ದೇಶಕರಲ್ಲಿ ಒಬ್ಬರಾದ ಸತೀಶ್ ದೇಶಪಾಂಡೆ ಅವರಿಗೆ ವಿವಿಧ ಖಾತೆಗಳಿಗೆ ಹಣ ವರ್ಗಾವಣೆ ಮಾಡುವಂತೆ ವಾಟ್ಸಾಪ್ ಸಂದೇಶವನ್ನು ಕಳುಹಿಸಿದ್ದಾನೆ. ಘಟನೆ ಸೆಪ್ಟೆಂಬರ್ 7 ಮತ್ತು ಸೆಪ್ಟೆಂಬರ್ 8 ರಂದು ನಡೆದಿದೆ ಎನ್ನಲಾಗಿದೆ.
ಇದು ಸಿಇಒ ಅವರ ಸಂದೇಶ ಎಂದು ನಂಬಿದ ಕಂಪನಿ ಅಧಿಕಾರಿಗಳು ಆನ್ಲೈನ್ನಲ್ಲಿ 1,01,01,554 ರೂ.ಗಳನ್ನು ವರ್ಗಾಯಿಸಿದ್ದಾರೆ, ಆದರೆ ಆದಾರ್ ಪೂನಾವಾಲಾ ಅವರು ಅಂತಹ ಯಾವುದೇ ಸಂದೇಶವನ್ನು ಕಳುಹಿಸಿಲ್ಲ ಎಂದು ನಂತರ ತಿಳಿದು ಬಂದಿದೆ.
ಬಂಡ್ಗಾರ್ಡನ್ ಪೊಲೀಸ್ ಠಾಣೆಯಲ್ಲಿ ಅಪರಿಚಿತ ವ್ಯಕ್ತಿಗಳ ವಿರುದ್ಧ ಮಾಹಿತಿ ತಂತ್ರಜ್ಞಾನ ಕಾಯ್ದೆಯಡಿ ವಂಚನೆ ಮತ್ತು ಅಪರಾಧಗಳಿಗಾಗಿ ಪ್ರಥಮ ಮಾಹಿತಿ ವರದಿ (ಎಫ್ಐಆರ್) ದಾಖಲಿಸಲಾಗಿದೆ. ಈ ಬಗ್ಗೆ ಹೆಚ್ಚಿನ ತನಿಖೆ ನಡೆಯುತ್ತಿದೆ ಎಂದು ಮೂಲಗಳ ವರದಿ ತಿಳಿಸಿದೆ.