ಹೊಸದಿಗಂತ ಡಿಜಿಟಲ್ ಡೆಸ್ಕ್:
ಯೋಗಿ ಆದಿತ್ಯನಾಥ್ ನೇತೃತ್ವದ ಸರ್ಕಾರವು ಉತ್ತರ ಪ್ರದೇಶದಲ್ಲಿ 2ನೇ ಬಾರಿ ಅಧಿಕಾರಕ್ಕೆ ಬಂದು ನಾಳೆ (ಜುಲೈ5ಕ್ಕೆ) 100 ನೇದಿನ ಪೂರೈಸುತ್ತಿದೆ. ಈ ಸಂದರ್ಭದಲ್ಲಿ 100 ದಿನಗಳ ಆಡಳಿತದಲ್ಲಿ ಯಾವೆಲ್ಲಾ ವಿಷಯಗಳಿಗೆ ಯೋಗಿ ಸರ್ಕಾರ ಸುದ್ದಿಯಾಗಿದೆ ಎಂಬ ವಿವರ ಇಲ್ಲಿದೆ.
- ಮೊದಲನೇ ಅವಧಿಯಂತೆ ಎರಡನೇ ಅವಧಿಯಲ್ಲಿಯೂ ಅನೇಕ ಸುಧಾರಣೆಗಳನ್ನು ಮಾಡಿರುವ ಯೋಗಿ ಸರ್ಕಾರವು ರಾಜ್ಯದಲ್ಲಿ ಶಾಂತಿ-ಸುವ್ಯವಸ್ಥೆಯನ್ನು ಕಾಪಾಡುವುದರೊಂದಿಗೆ ಜನಸಾಮಾನ್ಯರ ಕಲ್ಯಾಣ, ಯೋಗ-ಕ್ಷೇಮದೆಡೆಗೂ ಗಮನ ಕೊಟ್ಟಿದೆ. ಉಚಿತ ಪಡಿತರ ನೀಡಿದ್ದರಿಂದ ಹಿಡಿದು ರಾಜ್ಯಕ್ಕೆ ಹೂಡಿಕೆ ಹರಿದುಬರಲು ಶ್ರಮಿಸಿದ್ದು 100 ದಿನ ಗಳ ಯೋಗಿ@2.0 ಸರ್ಕಾರದ ಸಾಧನೆಗಳಲ್ಲೊಂದು.
- ಇನ್ನು ಕಾನೂನು ಸುವ್ಯವಸ್ಥೆಯ ವಿಚಾರ ಬಂದರೆ ರಫ್ ಅಂಡ್ ಟಫ್ ನಿರ್ಧಾರ ತೆಗೆದುಕೊಳ್ಳುವ ಯೋಗಿ ಆದಿತ್ಯನಾಥ್ ಗೂಂಡಾರಾಜ್ ನಾಶಮಾಡಿ, ಮಾಫಿಯಾಗಳನ್ನು ವ್ಯವಸ್ಥಿತವಾಗಿ ಹತ್ತಿಕ್ಕಿದ್ದಾರೆ. ಪಾಪಿಗಳನ್ನು ಮುಲಾಜಿಲ್ಲದೇ ಎನ್ಕೌಂಟರ್ ಮಾಡುವ ಮೂಲಕ ರೌಡಿಸಂ ನ ಹುಟ್ಟಗಿಸಲಾಗಿದೆ. ಕಳೆದ 100 ದಿನಗಳಲ್ಲಿ 62 ಮಾಫೀಯಾ ಗಳನ್ನು ಸದೆಬಡಿಯಲಾಗಿದ್ದು 844ಕೋಟಿ ರೂಪಾಯಿ ಮೌಲ್ಯದ ಕ್ರಿಮಿನಲ್ ಆಸ್ತಿ ಮುಟ್ಟುಗೋಲು ಹಾಕಿಕೊಳ್ಳಲಾಗಿದೆ.
- ಇನ್ನು ಪ್ರತಿಭಟನೆಯ ಹೆಸರಲ್ಲಿ ಕಲ್ಲುತೂರಿದ ದುಷ್ಕರ್ಮಿಗಳಿಗೆ ಯೋಗಿ ಸರ್ಕಾರದ ಶಿಕ್ಷೆ ದೇಶದೆಲ್ಲೆಡೆ ಸುದ್ದಿ ಮಾಡಿತ್ತು. ಕಲ್ಲುತೂರುವ ಮೂಲಕ ಸಾರ್ವಜನಿಕ ಆಸ್ತಿಪಾಸ್ತಿ ನಾಶಮಾಡುವವರ ಅಕ್ರಮ ಆಸ್ತಿಗಳನ್ನು ಮುಲಾಜಿಲ್ಲದೇ ʼಬುಲ್ಡೋಜರ್ʼ ಮೂಲಕ ನೆಲಸಮಗೊಳಿಸಲಾಗಿತ್ತು.
- ಯಾವುದೇ ಪ್ರತಿಭಟನೆಗಳಿಲ್ಲದೆ ಧಾರ್ಮಿಕ ಸ್ಥಳಗಳಿಂದ ಸುಮಾರು 75,000 ಧ್ವನಿವರ್ಧಕಗಳನ್ನು ತೆಗೆದುಹಾಕುವಲ್ಲಿ ಯೋಗಿ ಸರ್ಕಾರ ಸಫಲವಾಗಿದೆ.
-80,000 ಕೋಟಿ ರೂಪಾಯಿ ಮೌಲ್ಯದ ಹೂಡಿಕೆ ಯೋಜನೆಗಳ ಪ್ರಾರಂಭ, ಬುಂದೇಲ್ಖಂಡ್ ಎಕ್ಸ್ಪ್ರೆಸ್ವೇಯ ಕಾಮಗಾರಿಯನ್ನು ಪೂರ್ಣಗೊಳಿಸುವುದು ಮತ್ತು ಗಂಗಾ ಎಕ್ಸ್ಪ್ರೆಸ್ವೇ ಮತ್ತು ಜೇವರ್ನಲ್ಲಿರುವ ವಿಮಾನ ನಿಲ್ದಾಣವು ಸರ್ಕಾರದ ಇತರ ಸಾಧನೆಯಾಗಿದೆ. - ಪ್ರಧಾನ ಮಂತ್ರಿ ಉಜ್ವಲಾ ಯೋಜನೆಯಡಿ ಹೋಳಿ ಮತ್ತು ದೀಪಾವಳಿಯಂದು 2 ಉಚಿತ ಸಿಲಿಂಡರ್ ನೀಡಲು 3,300ಕೋಟಿ ಯೋಜನೆ ಹಾಗೆಯೇ ʼಒಂದು ರಾಜ್ಯ-ಒಂದು ಉತ್ಪನ್ನʼ ಯೋಜನೆಯ ಅಭೂತಪೂರ್ವ ಯಶಸ್ಸಿನ ಹಿಂದೆ ಯೋಗಿ ಸರ್ಕಾರದ ಪಾತ್ರವಿದೆ. ಪ್ರಧಾನಿ ಮೋದಿ ಇತ್ತೀಚೆಗೆ ತಮ್ಮ ಜರ್ಮನಿ ಪ್ರವಾಸದ ವೇಳೆ G-7 ರಾಷ್ಟ್ರಗಳ ಅಧ್ಯಕ್ಷರಿಗೆ ಇದೇ ಉತ್ಪನ್ನಗಳನ್ನು ಕೊಡುಗೆಯಾಗಿ ನೀಡಿದ್ದರು ಎಂಬುದು ಇಲ್ಲಿ ಉಲ್ಲೇಖಾರ್ಹ.